ಅರಸ ಕೇಳೈ ಕಾರ್ತಿಕೇಯನ
ವರ ಮಹಾಶ್ರಮಕೈದಿದನು ಮುನಿ
ವರರು ಸಹಿತೊಲವಿನಲಿ ನೂಕಿದನೊಂದು ವತ್ಸರವ
ಧರಣಿಪತಿ ಬೃಹದಶ್ವನಾಶ್ರಮ
ವರಕೆ ಬಂದನು ತೀರ್ಥ ಸೇವಾ
ಪರಮ ಪಾವನ ಕರಣನಿರ್ದನು ಪರ್ಣಶಾಲೆಯಲಿ (ಅರಣ್ಯ ಪರ್ವ, ೧೪ ಸಂಧಿ, ೧೪ ಪದ್ಯ)
ತಾತ್ಪರ್ಯ:
ಜನಮೇಜಯ ರಾಜ ಕೇಳು, ಯುಧಿಷ್ಠಿರನು ಕಾರ್ತಿಕೇಯನ ಆಶ್ರಮಕ್ಕೆ ಹೋಗಿ ಮುನಿಗಳೊಡನೆ ಒಂದು ವರ್ಷಕಾಲ ಸಂತೋಷದಿಂದಿದ್ದನು. ಅಲ್ಲಿಂದ ಮುಂದೆ ಬೃಹದಶ್ವನ ಆಶ್ರಮಕ್ಕೆ ಹೋಗಿ ಪರ್ಣಶಾಲೆಯಲ್ಲಿದ್ದನು.
ಅರ್ಥ:
ಅರಸ: ರಾಜ; ಕೇಳು: ಆಲಿಸು; ವರ: ಶ್ರೇಷ್ಠ; ಮಹಾ: ದೊಡ್ಡ, ಶ್ರೇಷ್ಠ; ಆಶ್ರಮ: ಕುಟೀರ; ಮುನಿ: ಋಷಿ; ಸಹಿತ: ಜೊತೆ; ಒಲವು: ಪ್ರೀತಿ; ನೂಕು: ತಳ್ಳು; ವತ್ಸರ: ವರ್ಷ; ಧರಣಿಪತಿ: ರಾಜ; ಬಂದನು: ಆಗಮಿಸು; ತೀರ್ಥ: ಪುಣ್ಯಕ್ಷೇತ್ರ; ಸೇವೆ: ಉಪಚಾರ, ಶುಶ್ರೂಷೆ, ಪೂಜೆ; ಪರಮ: ಶ್ರೇಷ್ಠ; ಪಾವನ: ಪವಿತ್ರವಾದ; ಪರ್ಣಶಾಲೆ: ಕುಟೀರ; ಐದು: ಬಂದುಸೇರು;
ಪದವಿಂಗಡಣೆ:
ಅರಸ+ ಕೇಳೈ +ಕಾರ್ತಿಕೇಯನ
ವರ +ಮಹಾಶ್ರಮಕ್+ಐದಿದನು +ಮುನಿ
ವರರು +ಸಹಿತ್+ಒಲವಿನಲಿ +ನೂಕಿದನ್+ಒಂದು +ವತ್ಸರವ
ಧರಣಿಪತಿ +ಬೃಹದಶ್ವನ್+ಆಶ್ರಮ
ವರಕೆ+ ಬಂದನು +ತೀರ್ಥ +ಸೇವಾ
ಪರಮ +ಪಾವನ +ಕರಣನಿರ್ದನು +ಪರ್ಣಶಾಲೆಯಲಿ
ಅಚ್ಚರಿ:
(೧) ಧರ್ಮಜನನ್ನು ಕರೆದ ಪರಿ – ಸೇವಾ ಪರಮ ಪಾವನ ಕರಣ
(೨) ಅರಸ, ಧರಣಿಪತಿ – ಸಮನಾರ್ಥಕ ಪದ