ಧರಣಿಪತಿ ಬೆಸಸಿದನು ನೀವೈ
ವರು ಕುಮಾರರು ರಾಜಸೂಯಾ
ಧ್ವರ ಮಹಾವ್ರತದೇಕ ಭುಕ್ತಾದಿಯಲಿ ಬಳಲಿದಿರಿ
ವರಸಭೆಯ ರಚಿಸಿದರು ಹಸ್ತಿನ
ಪುರಿಗೆ ಬಿಜಯಂಗೈದು ವಿಭವೋ
ತ್ಕರದ ವಿಮಳದ್ಯೂತದಲಿ ರಮಿಸುವುದು ನೀವೆಂದ (ಸಭಾ ಪರ್ವ, ೧೩ ಸಂಧಿ, ೮೫ ಪದ್ಯ)
ತಾತ್ಪರ್ಯ:
ನೀವೈವರು ರಾಜಸೂಯ ಮಹಾಯಾಗದ ಕಾಲದಲ್ಲಿ ದಿನಕ್ಕೊಂದು ಊಟ ಮುಂತಾದ ಕಠಿಣ ಕ್ರಮಗಳನ್ನು ಆಚರಿಸಿ ದಣಿದಿದ್ದೀರಿ, ಕೌರವರು ಹೊಸದೊಂದು ಸಭಾಸ್ಥಾನವನ್ನು ಕಟ್ಟಿಸಿದ್ದಾರೆ, ನೀವು ಹಸ್ತಿನಾಪುರಕ್ಕೆ ಬಂದು, ವೈಭವದಿಂದ ಸುಖದ್ಯೂತದಲ್ಲಿ ಆನಂದಿಸಿರಿ ಎಂದು ಧೃತರಾಷ್ಟ್ರ ಭೂಪತಿ ಹೇಳಿಕಳಿಸಿದ್ದಾನೆ.
ಅರ್ಥ:
ಧರಣಿಪತಿ: ರಾಜ; ಧರಣಿ: ಭೂಮಿ; ಪತಿ: ಒಡೆಯ; ಬೆಸಸು: ಕೇಳು; ಕುಮಾರ: ಮಕ್ಕಳು; ಅಧ್ವರ: ಯಾಗ; ವ್ರತ: ನಿಯಮ; ಮಹಾ: ಶ್ರೇಷ್ಠ; ಭುಕ್ತ: ಅನುಭವಿಸಿದ; ಆದಿ: ಮುಂತಾದ; ಬಳಲು: ಆಯಾಸ; ವರ: ಶ್ರೇಷ್ಠ; ಸಭೆ: ಓಲಗ; ರಚಿಸಿ: ನಿರ್ಮಿಸಿ; ಬಿಜಯಂಗೈದು: ಬಂದು; ವಿಭವ: ಸಿರಿ, ಸಂಪತ್ತು; ಉತ್ಕರ: ಸಮೂಹ; ವಿಮಳ: ನಿರ್ಮಲ; ದ್ಯೂತ: ಪಗಡೆ, ಜೂಜು; ರಮಿಸು: ಆನಂದಿಸು;
ಪದವಿಂಗಡಣೆ:
ಧರಣಿಪತಿ +ಬೆಸಸಿದನು +ನೀವೈ
ವರು+ ಕುಮಾರರು+ ರಾಜಸೂಯ
ಅಧ್ವರ +ಮಹಾವ್ರತದ್+ಏಕ ಭುಕ್ತ +ಆದಿಯಲಿ +ಬಳಲಿದಿರಿ
ವರಸಭೆಯ +ರಚಿಸಿದರು +ಹಸ್ತಿನ
ಪುರಿಗೆ+ ಬಿಜಯಂಗೈದು +ವಿಭವ
ಉತ್ಕರದ +ವಿಮಳ+ದ್ಯೂತದಲಿ +ರಮಿಸುವುದು +ನೀವೆಂದ
ಅಚ್ಚರಿ:
(೧) ಒಂದು ಹೊತ್ತು ಊಟ ಎಂದು ಹೇಳಲು – ಏಕಭುಕ್ತ ಪದ ಪ್ರಯೋಗ