ಪದ್ಯ ೩೬: ನಾರದರು ಕಂಪನನನ್ನು ಹೇಗೆ ಸಂತೈಸಿದರು?

ಆ ಮಹಾಮೃತ್ಯುವನು ಹುಟ್ಟಿಸಿ
ದಾ ಮಹಾದೇವಾದಿ ದೇವರು
ಕಾಮಿನಿಯ ಕಳುಹಲ್ಕೆ ಬಾರದೆನುತ್ತ ಬೋಧಿಸಲು
ಭೂಮಿಪತಿ ನಿಜಸುತನ ಮೃತಿಯು
ದ್ದಾಮ ತಾಪವ ಕಳೆಯಬೇಕೆಂ
ದಾ ಮುನೀಶ್ವರ ಸಂತವಿಟ್ಟನು ಕಂಪಭೂಪತಿಯ (ದ್ರೋಣ ಪರ್ವ, ೭ ಸಂಧಿ, ೩೬ ಪದ್ಯ)

ತಾತ್ಪರ್ಯ:
ಎಲೈ ರಾಜನೇ ಆ ಮಹಾ ಮೃತ್ಯುವನ್ನು ಹುಟ್ಟಿಸಿದ ಮಹಾದೇವನೇ ಮೊದಲಾದವರು ಅವಳನ್ನು ಕಳುಹಿಸಿ ಕೊಡಲಾರರು. ನಿನ್ನ ಮಗನ ಮರಣದ ತಾಪವನ್ನು ಕಳೆದುಕೋ ಎಂದು ಹೇಳಿ ಕಂಪನನನ್ನು ಸಂತೈಸಿದನು.

ಅರ್ಥ:
ಮೃತ್ಯು: ಸಾವು; ಹುಟ್ಟು: ಜನಿಸು; ಆದಿ: ಮುಂತಾದ; ದೇವ: ಭಗವಂತ; ಕಾಮಿನಿ: ಹೆಣ್ಣು; ಕಳುಹು: ಕಳಿಸು; ಬೋಧಿಸು: ತಿಳಿಸು; ಭೂಮಿಪತಿ: ರಾಜ; ಸುತ: ಮಗ; ಮೃತಿ: ಸಾವು; ಉದ್ದಾಮ: ಶ್ರೇಷ್ಠ; ತಾಪ: ಬಿಸಿ, ಬೇನೆ; ಕಳೆ: ನಿವಾರಿಸು; ಮುನಿ: ಋಷಿ; ಸಂತವಿಡು: ಸಂತೈಸು; ಭೂಪತಿ: ರಾಜ;

ಪದವಿಂಗಡಣೆ:
ಆ +ಮಹಾ+ಮೃತ್ಯುವನು +ಹುಟ್ಟಿಸಿದ
ಆ+ ಮಹಾದೇವಾದಿ +ದೇವರು
ಕಾಮಿನಿಯ +ಕಳುಹಲ್ಕೆ+ ಬಾರದೆನುತ್ತ+ ಬೋಧಿಸಲು
ಭೂಮಿಪತಿ +ನಿಜಸುತನ +ಮೃತಿ+
ಉದ್ದಾಮ +ತಾಪವ+ ಕಳೆಯಬೇಕೆಂದ್
ಆ+ ಮುನೀಶ್ವರ +ಸಂತವಿಟ್ಟನು +ಕಂಪ+ಭೂಪತಿಯ

ಅಚ್ಚರಿ:
(೧) ಭೂಮಿಪತಿ, ಭೂಪತಿ – ಸಮಾನಾರ್ಥಕ ಪದ
(೨) ಮಹಾಮೃತ್ಯು, ಮಹಾದೇವ – ಮಹಾ ಪದದ ಬಳಕೆ