ದ್ರೋಣ ಗೌತಮವರ್ಯ ಗಂಗಾ
ಸೂನುವಶ್ವತ್ಥಾಮನೆನಿಪ ಮ
ಹಾನುಭಾವರು ದುಷ್ಟಮಂತ್ರಿ ಚತುಷ್ಟಯರು ತಾವು
ಸಾನುರಾಗದಲಿರೆ ನೃಪತಿಸು
ಮ್ಮಾನದಿಂದೋಲಗದೊಳಿರುತಿರೆ
ವೀನದೇಶಾಧಿಪನ ಪುರದಿಂ ಬಂದನೋರ್ವ ಚರ (ವಿರಾಟ ಪರ್ವ, ೪ ಸಂಧಿ, ೨ ಪದ್ಯ)
ತಾತ್ಪರ್ಯ:
ದ್ರೋಣ, ಕೃಪಾಚಾರ್ಯರು, ಭೀಷ್ಮ, ಅಶ್ವತ್ಥಾಮರಂತ ಶ್ರೇಷ್ಠರೊಡನೆ ದುರ್ಯೋಧನನು ದುಶ್ಯಾಸನ, ಸೈಂಧವ, ಕರ್ಣ, ಶಕುನಿಗಳೊಡನೆ ಸಂತೋಷದಲ್ಲಿ ಓಲಗದೊಳಗಿರುವಾಗ ಮತ್ಸ್ಯದೇಶದಿಂದ ಒಬ್ಬ ದೂತನು ಬಂದನು.
ಅರ್ಥ:
ಸೂನು: ಮಗ; ವರ್ಯ: ಶ್ರೇಷ್ಠ; ಮಹಾನುಭಾವ: ಶ್ರೇಷ್ಠ, ಪರಾಕ್ರಮಿ; ದುಷ್ಟ: ದುರುಳ; ಅನುರಾಗ: ಪ್ರೀತಿ; ನೃಪತಿ: ರಾಜ; ಸುಮ್ಮಾನ: ಸಂತೋಷ; ಓಲಗ: ದರ್ಬಾರು; ಮೀನದೇಶ: ವಿರಾಟ ದೇಶ; ಅಧಿಪ: ರಾಜ; ಪುರ: ಊರು; ಬಂದನು: ಆಗಮಿಸು; ಚರ: ದೂತ;
ಪದವಿಂಗಡಣೆ:
ದ್ರೋಣ +ಗೌತಮವರ್ಯ +ಗಂಗಾ
ಸೂನು+ಅಶ್ವತ್ಥಾಮನ್+ಎನಿಪ +ಮ
ಹಾನುಭಾವರು+ ದುಷ್ಟಮಂತ್ರಿ +ಚತುಷ್ಟಯರು +ತಾವು
ಸಾನುರಾಗದಲ್+ಇರೆ+ ನೃಪತಿ+ಸು
ಮ್ಮಾನದಿಂದ್+ಓಲಗದೊಳ್+ಇರುತಿರೆ
ಮೀನ+ ದೇಶಾಧಿಪನ +ಪುರದಿಂ +ಬಂದನ್+ಓರ್ವ +ಚರ
ಅಚ್ಚರಿ:
(೧) ಚತುಷ್ಟಯ – ದುಶ್ಯಾಸನ, ದುರ್ಯೋಧನ, ಕರ್ಣ, ಸೈಂಧವ
(೨) ದುಷ್ಟಮಂತ್ರಿ – ಶಕುನಿ