ಪದ್ಯ ೨: ದೂತನು ಯಾವ ದೇಶದ ವಿಷಯವನ್ನು ತಂದನು?

ದ್ರೋಣ ಗೌತಮವರ್ಯ ಗಂಗಾ
ಸೂನುವಶ್ವತ್ಥಾಮನೆನಿಪ ಮ
ಹಾನುಭಾವರು ದುಷ್ಟಮಂತ್ರಿ ಚತುಷ್ಟಯರು ತಾವು
ಸಾನುರಾಗದಲಿರೆ ನೃಪತಿಸು
ಮ್ಮಾನದಿಂದೋಲಗದೊಳಿರುತಿರೆ
ವೀನದೇಶಾಧಿಪನ ಪುರದಿಂ ಬಂದನೋರ್ವ ಚರ (ವಿರಾಟ ಪರ್ವ, ೪ ಸಂಧಿ, ೨ ಪದ್ಯ)

ತಾತ್ಪರ್ಯ:
ದ್ರೋಣ, ಕೃಪಾಚಾರ್ಯರು, ಭೀಷ್ಮ, ಅಶ್ವತ್ಥಾಮರಂತ ಶ್ರೇಷ್ಠರೊಡನೆ ದುರ್ಯೋಧನನು ದುಶ್ಯಾಸನ, ಸೈಂಧವ, ಕರ್ಣ, ಶಕುನಿಗಳೊಡನೆ ಸಂತೋಷದಲ್ಲಿ ಓಲಗದೊಳಗಿರುವಾಗ ಮತ್ಸ್ಯದೇಶದಿಂದ ಒಬ್ಬ ದೂತನು ಬಂದನು.

ಅರ್ಥ:
ಸೂನು: ಮಗ; ವರ್ಯ: ಶ್ರೇಷ್ಠ; ಮಹಾನುಭಾವ: ಶ್ರೇಷ್ಠ, ಪರಾಕ್ರಮಿ; ದುಷ್ಟ: ದುರುಳ; ಅನುರಾಗ: ಪ್ರೀತಿ; ನೃಪತಿ: ರಾಜ; ಸುಮ್ಮಾನ: ಸಂತೋಷ; ಓಲಗ: ದರ್ಬಾರು; ಮೀನದೇಶ: ವಿರಾಟ ದೇಶ; ಅಧಿಪ: ರಾಜ; ಪುರ: ಊರು; ಬಂದನು: ಆಗಮಿಸು; ಚರ: ದೂತ;

ಪದವಿಂಗಡಣೆ:
ದ್ರೋಣ +ಗೌತಮವರ್ಯ +ಗಂಗಾ
ಸೂನು+ಅಶ್ವತ್ಥಾಮನ್+ಎನಿಪ +ಮ
ಹಾನುಭಾವರು+ ದುಷ್ಟಮಂತ್ರಿ +ಚತುಷ್ಟಯರು +ತಾವು
ಸಾನುರಾಗದಲ್+ಇರೆ+ ನೃಪತಿ+ಸು
ಮ್ಮಾನದಿಂದ್+ಓಲಗದೊಳ್+ಇರುತಿರೆ
ಮೀನ+ ದೇಶಾಧಿಪನ +ಪುರದಿಂ +ಬಂದನ್+ಓರ್ವ +ಚರ

ಅಚ್ಚರಿ:
(೧) ಚತುಷ್ಟಯ – ದುಶ್ಯಾಸನ, ದುರ್ಯೋಧನ, ಕರ್ಣ, ಸೈಂಧವ
(೨) ದುಷ್ಟಮಂತ್ರಿ – ಶಕುನಿ

ಪದ್ಯ ೧೪: ಯಾವ ಮಾರ್ಗದಲ್ಲಿ ನಡೆವುದು ಶ್ರೇಯಸ್ಸು?

ಅತಿಶಯದ ಸುಕೃತವನು ವಿರಚಿಸಿ
ಗತಿವಡೆದು ಸ್ವರ್ಗಾದಿ ಭೋಗೋ
ನ್ನತಿಕೆಯನು ಭೋಗಿಸಿದ ಸಮನಂತರದಲವನಿಯಲಿ
ಪತನ ತಪ್ಪದು ಮರಳಿ ಬಾರದ
ಗತಿಯನರಿದು ಮಹಾನುಭಾವರ
ಮತವಿಡಿದು ನಡೆವುದು ನಯವು ಕೇಳೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಬಹಳ ಪುಣ್ಯಕಾರ್ಯಗಳನ್ನು ಮಾಡಿ, ಸ್ವರ್ಗವೇ ಮೊದಲಾದ ಉನ್ನತ ಭೋಗಗಳನ್ನು ಭೋಗಿಸಿದ ಮೇಲೆ ಭೂಮಿಗೆ ಬೀಳುವುದು ತಪ್ಪುವುದಿಲ್ಲ. ಆದುದರಿಂದ ಮರಲಿ ಹುಟ್ಟದ ದಾರಿ ಯಾವುದೆಂಬುದನ್ನು ಅರಿತುಕೊಂಡು ಮಹಾನುಭಾವರಾದ ಗುರುಗಳು ತೋರಿಸಿದ ಮಾರ್ಗದಲ್ಲಿ ನಡೆವುಯು ಉಚಿತ.

ಅರ್ಥ:
ಅತಿಶಯ: ಹೆಚ್ಚು, ಅಧಿಕ; ಸುಕೃತ: ಒಳ್ಳೆಯ ಕೆಲಸ; ವಿರಚಿಸಿ: ನಿರ್ಮಿಸಿ; ಗತಿ: ನಡಿಗೆ; ಗತಿವಡೆ: ಸದ್ಗತಿ ಪಡೆ; ಸ್ವರ್ಗ: ನಾಕ; ಭೋಗ: ಸುಖವನ್ನು ಅನುಭವಿಸುವುದು; ಉನ್ನತಿ: ಮೇಲ್ಮೆ, ಹಿರಿಮೆ; ಸಮನಂತರ: ಆದಮೇಲೆ; ಅವನಿ: ಭೂಮಿ; ಪತನ: ಬೀಳು; ತಪ್ಪದು: ಮರಳಿ: ಮತ್ತೆ; ಬಾರದ: ಹಿಂದಿರುಗದ; ಅರಿ: ತಿಳಿ; ಮಹಾನುಭವರು: ಶ್ರೇಷ್ಠರು; ಮತ: ಅಭಿಪ್ರಾಯ, ಉದ್ದೇಶ; ನಡೆ: ಹೆಜ್ಜೆ ಹಾಕು; ನಯ:ಸೊಗಸು, ಸೌಜನ್ಯ; ಕೇಳು: ಆಲಿಸು;

ಪದವಿಂಗಡಣೆ:
ಅತಿಶಯದ +ಸುಕೃತವನು +ವಿರಚಿಸಿ
ಗತಿವಡೆದು +ಸ್ವರ್ಗಾದಿ +ಭೋಗ
ಉನ್ನತಿಕೆಯನು +ಭೋಗಿಸಿದ +ಸಮನಂತರದಲ್+ಅವನಿಯಲಿ
ಪತನ +ತಪ್ಪದು +ಮರಳಿ +ಬಾರದ
ಗತಿಯನರಿದು +ಮಹಾನುಭಾವರ
ಮತವಿಡಿದು+ ನಡೆವುದು +ನಯವು +ಕೇಳೆಂದನಾ +ಮುನಿಪ

ಅಚ್ಚರಿ:
(೧) ಅತಿ, ಗತಿ; ಪತ, ಮತ – ಪ್ರಾಸ ಪದಗಳು