ಪದ್ಯ ೧೭: ಶಕುನಿ ಭೀಮಾರ್ಜುನರನ್ನು ನೋಡಿ ಏನೆಂದನು?

ಏನ ಬಣ್ಣಿಸುವೆನು ವಿಕಾರಿಗ
ಳೇನ ನೆನೆಯರು ಕಪಟ ವಿಧದಲಿ
ಮಾನನಿಧಿ ತಾ ಸೋತನನುಜದ್ವಯ ಮಹಾಧನವ
ಗ್ಲಾನಿ ಚಿತ್ತದೊಳಿಲ್ಲಲೇ ಸುಮ
ನೋನುರಾಗವೆ ಭೀಮ ಪಾರ್ಥರು
ತಾನಿದೊಮ್ಮಿಗೆ ಬದುಕಿದರು ಬಳಿಕೆಂದನಾ ಶಕುನಿ (ಸಭಾ ಪರ್ವ, ೧೫ ಸಂಧಿ, ೧೭ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ನಾನೇನೆಂದು ಬಣ್ಣಿಸಲಿ, ದುಷ್ಟರು ಮೋಸಮಾಡುವ ಎಂತೆಂತಹ ವಿಧಾನಗಳನ್ನು ನೆನೆಯುವುದಿಲ್ಲ? ಯುಧಿಷ್ಠಿರನು ತನ್ನ ಇಬ್ಬರ ತಮ್ಮಂದಿರೆಂಬ ಮಹಾಧನವನ್ನು ಜೂಜಿನಲ್ಲಿ ಸೋತನು, ಇದಕ್ಕೆ ಶಕುನಿಯು, ಧರ್ಮಜ ಚಿಂತಿಸುತ್ತಿಲ್ಲ ತಾನೆ? ಸಂತೋಷವಾಗಿರುವೆಯಾ? ಸದ್ಯ ಭೀಮಾರ್ಜುನರು ಬದುಕಿ ಉಳಿದುಕೊಂಡರು ಎಂದು ಹಂಗಿಸಿದನು.

ಅರ್ಥ:
ಬಣ್ಣಿಸು: ವಿವರಿಸು; ವಿಕಾರಿ: ದುಷ್ಟ; ನೆನೆ: ಜ್ಞಾಪಿಸು; ಕಪಟ: ಮೋಸ; ವಿಧ: ರೀತಿ; ಮಾನ: ಗೌರವ; ನಿಧಿ: ಐಶ್ವರ್ಯ; ಸೋಲು: ಪರಾಭವ; ಅನುಜ: ತಮ್ಮ; ದ್ವಯ: ಎರಡು; ಮಹಾಧನ: ದೊಡ್ಡಮೊತ್ತದ ಸಿರಿ; ಗ್ಲಾನಿ: ಬಳಲಿಕೆ, ದಣಿವು; ಚಿತ್ತ: ಮನಸ್ಸು; ಸುಮನ: ಒಳ್ಳೆಯ ಮನಸ್ಸುಳ್ಳುವ; ಅನುರಾಗ: ಪ್ರೀತಿ; ಬದುಕು: ಜೀವಿಸು; ಬಳಿಕ: ನಂತರ;

ಪದವಿಂಗಡಣೆ:
ಏನ +ಬಣ್ಣಿಸುವೆನು +ವಿಕಾರಿಗಳ್
ಏನ +ನೆನೆಯರು +ಕಪಟ +ವಿಧದಲಿ
ಮಾನನಿಧಿ +ತಾ+ ಸೋತನ್+ಅನುಜ+ ದ್ವಯ +ಮಹಾಧನವ
ಗ್ಲಾನಿ+ ಚಿತ್ತದೊಳ್+ಇಲ್ಲಲೇ+ ಸುಮನ
ಅನುರಾಗವೆ +ಭೀಮ +ಪಾರ್ಥರು
ತಾನಿದ್+ಒಮ್ಮಿಗೆ +ಬದುಕಿದರು +ಬಳಿಕೆಂದನಾ +ಶಕುನಿ

ಅಚ್ಚರಿ:
(೧) ಯುಧಿಷ್ಠಿರನನ್ನು ಮಾನನಿಧಿ, ನಕುಲ ಸಹದೇವರನ್ನು ಮಹಾಧನವ ಎಂದು ಕರೆದಿರುವುದು
(೨) ದುಷ್ಟರ ವರ್ಣನೆ – ವಿಕಾರಿಗಳೇನ ನೆನೆಯರು ಕಪಟ ವಿಧದಲಿ