ಪದ್ಯ ೫೯: ಧೃತರಾಷ್ಟ್ರನು ತನ್ನ ಮಗನನ್ನು ಏನು ಮಾಡಬೇಕೆಂದು ಕೇಳಿದನು?

ತಿಂದ ವಿಷವಳ್ಕಿದವು ಮಡುವಿನೊ
ಳಂದು ಬಿಸುಟರೆ ಮುಳುಗಿ ಸುಖದಲಿ
ಮಿಂದು ಹೊರವಂಟರು ಮಹಾಗ್ನಿಯ ಭವನ ಭಂಗದಲಿ
ಒಂದು ಕೂದಲು ಸೀಯದನಿಬರು
ಬಂದರಿವು ಮೊದಲಾದ ಕೃತ್ರಿಮ
ದಿಂದ ಪಾಂಡವರಳಿದುದಿಲ್ಲಿದಕೇನು ಹದನೆಂದ (ಸಭಾ ಪರ್ವ, ೧೩ ಸಂಧಿ, ೫೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಹಿಂದೆ ಮಾಡಿದ ಮೋಸದ ಆಟಗಳನ್ನು ನೆನೆಯುತ್ತಾ, ಅವರು ತಿಂದ ವಿಷವೇ ಅವರನ್ನು ಕೊಲ್ಲಲು ಹೆದರಿತು. ಹಗ್ಗದಿಂದ ಕಟ್ಟಿ ಮಡುವಿನಲ್ಲಿ ಹಾಕಿದರೆ ಸ್ನಾನ ಮಾಡಿದವರಂತೆ ಹೊರಕ್ಕೆ ಬಂದರು. ಅರಗಿನ ಮನೆಯಲ್ಲಿ ಬೆಂಕಿಯಿಂದ ಸುಡಲು ಹೋದರೆ ಅವರ ಒಂದು ಕೂದಲೂ ಸೀಯಲಿಲ್ಲ. ಏನು ಮೋಸಮಾಡಿದರೂ ಅವರು ಸಾಯಲಿಲ್ಲ. ಇದಕ್ಕೇನು ಮಾಡಬೇಕು ಎಂದು ಧೃತರಾಷ್ಟ್ರ ಕೇಳಿದನು.

ಅರ್ಥ:
ತಿಂದ: ಉಟ ಮಾಡಿದ; ವಿಷ: ನಂಜು; ಅಳುಕು: ಹೆದರು; ಮಡು: ನದಿ, ಹೊಳೆ ಮುಂ.ವುಗಳಲ್ಲಿ ಆಳವಾದ ನೀರಿರುವ ಪ್ರದೇಶ; ಬಿಸುಟು: ಬಿಸಾಕು; ಮುಳುಗು: ನೀರಿನಲ್ಲಿ ಮೀಯು; ಸುಖ: ಸಂತೋಷ, ನಲಿವು; ಮಿಂದು: ಮುಳುಗು; ಹೊರವಂಟರ: ಮುನ್ನಡೆದರು; ಮಹಾಗ್ನಿ: ದೊಡ್ಡದಾದ ಬೆಂಕಿ; ಭವನ: ಆಲಯ; ಭಂಗ: ಮುರಿಯುವಿಕೆ, ತುಂಡು; ಕೂದಲು: ರೋಮ; ಸೀಯು: ಕರಕಲಾಗು; ಅನಿಬರು: ಅಷ್ಟುಜನ; ಬಂದರು: ಆಗಮಿಸಿದರು; ಕೃತ್ರಿಮ: ಕಪಟ, ಮೋಸ; ಅಳಿ: ಸಾವು, ಮರಣ; ಹದ: ಸ್ಥಿತಿ, ರೀತಿ;

ಪದವಿಂಗಡಣೆ:
ತಿಂದ +ವಿಷವ್+ಅಳ್ಕಿದವು +ಮಡುವಿನೊಳ್
ಅಂದು +ಬಿಸುಟರೆ +ಮುಳುಗಿ +ಸುಖದಲಿ
ಮಿಂದು +ಹೊರವಂಟರು +ಮಹಾಗ್ನಿಯ +ಭವನ +ಭಂಗದಲಿ
ಒಂದು +ಕೂದಲು +ಸೀಯದ್+ಅನಿಬರು
ಬಂದರ್+ಇವು+ ಮೊದಲಾದ +ಕೃತ್ರಿಮ
ದಿಂದ +ಪಾಂಡವರ್+ಅಳಿದುದಿಲ್+ಇದಕೇನು +ಹದನೆಂದ

ಅಚ್ಚರಿ:
(೧) ವಿಷವೇ ಹೆದರಿತು ಎಂದು ಹೇಳುವ ಪರಿ – ತಿಂದ ವಿಷವಳ್ಕಿದವು