ಸತಿಯರಲಿ ನಿಮ್ಮವ್ವೆ ಸುಪತಿ
ವ್ರತೆ ಮಹಾಖಳ ನೀನು ಬೀಜ
ಸ್ಥಿತಿಯಲೂಣಯವಿಲ್ಲ ನಿನ್ನಯ ಬುದ್ಧಿ ದೊಷವಿದು
ಕೃತಕವೋ ಸಹಜವೊ ನವೀನ
ಸ್ಥಿತಿಯ ಕಂಡೆನು ಶಿವ ಶಿವಾ ದು
ರ್ಮತಿಗಳಾವುದ ನೆನೆಯರೆಂದನು ಸುಯ್ದು ಧೃತರಾಷ್ಟ್ರ (ಸಭಾ ಪರ್ವ, ೧೩ ಸಂಧಿ, ೪೮ ಪದ್ಯ)
ತಾತ್ಪರ್ಯ:
ಸ್ತ್ರೀಯರಲ್ಲಿ ನಿನ್ನ ತಾಯಿ ಅತ್ಯಂತ ಪತಿವ್ರತೆ, ನೀನೋ ಮಹಾದುಷ್ಟ ಅಸುರ ಬುದ್ಧಿಯುಳ್ಳವನು. ಮೂಲದಲ್ಲೇನೂ ದೋಷವಿಲ್ಲ ಆದರೆ ಇದು ನಿನ್ನ ಬುದ್ಧಿಯ ದೋಷ. ಇದೇನು ಕೃತಕವಾಗು ಉಂಟಾಯಿತೋ ಅಥವ ಇರುವುದೇ ಹೀಗೆಯೋ ತಿಳಿಯದಾಗಿದೆ. ಶಿವ ಶಿವಾ ದುರ್ಮತಿಯುಳ್ಳವರು ಎಂತಹ ಹೀನವಿಚಾರವನ್ನೂ ನೆನೆಯದೆ ಬಿಟ್ಟಾರು ಎಂದು ಧೃತರಾಷ್ಟ್ರ ನಿಟ್ಟುಸಿರು ಬಿಟ್ಟನು.
ಅರ್ಥ:
ಸತಿ: ಪತ್ನಿ; ಅವ್ವೆ: ಅಮ್ಮ; ಪತಿವ್ರತೆ: ಸಾಧ್ವಿ, ಗರತಿ; ಖಳ: ದುಷ್ಟ; ಮಹಾ: ದೊಡ್ಡ; ಬೀಜ: ಮೂಲ; ಸ್ಥಿತಿ: ಇರವು, ಅಸ್ತಿತ್ವ; ಊಣ:ತೊಂದರೆ; ಬುದ್ಧಿ: ಮತಿ; ದೋಷ: ಕುಂದು, ಕಳಂಕ; ಕೃತಕ: ಕಪಟ; ಸಹಜ: ಸ್ವಾಭಾವಿಕವಾದುದು; ನವೀನ: ಹೊಸ; ಸ್ಥಿತಿ: ಇರವು, ಅಸ್ತಿತ್ವ; ಕಂಡೆ: ನೋಡು; ದುರ್ಮತಿ: ಕೆಟ್ಟಬುದ್ಧಿ; ನೆನೆ: ಜ್ಞಾಪಿಸಿಕೊಳ್ಳು, ಸ್ಮರಿಸು; ಸುಯ್ದು: ನಿಟ್ಟುಸಿರು;
ಪದವಿಂಗಡಣೆ:
ಸತಿಯರಲಿ+ ನಿಮ್ಮವ್ವೆ+ ಸುಪತಿ
ವ್ರತೆ+ ಮಹಾಖಳ+ ನೀನು +ಬೀಜ
ಸ್ಥಿತಿಯಲ್+ಊಣಯವಿಲ್ಲ+ ನಿನ್ನಯ +ಬುದ್ಧಿ +ದೊಷವಿದು
ಕೃತಕವೋ +ಸಹಜವೊ+ ನವೀನ
ಸ್ಥಿತಿಯ +ಕಂಡೆನು +ಶಿವ +ಶಿವಾ+ ದು
ರ್ಮತಿಗಳ್+ಆವುದ+ ನೆನೆಯರ್+ಎಂದನು +ಸುಯ್ದು +ಧೃತರಾಷ್ಟ್ರ
ಅಚ್ಚರಿ:
(೧) ದುರ್ಯೋಧನನನ್ನು ಬಯ್ಯುವ ಪರಿ – ಮಹಾಖಳ ನೀನು; ನಿನ್ನಯ ಬುದ್ಧಿ ದೊಷವಿದು
(೨) ಕೃತಕ, ಸಹಜ – ವಿರುದ್ಧ ಪದ