ಪದ್ಯ ೨೩: ಮಗುವಿನ ಬಳಿ ಯಾರು ಬಂದರು?

ಕೆದರಿ ಕಾಲಲಿ ಮಳಲ ರಾಶಿಯ
ನೊದೆದು ಕೈಗಳ ಕೊಡಹಿ ಭೋಯೆಂ
ದೊದರುತಿರ್ದನು ಶಿಶುಗಳರಸನು ರವಿಯನೀಕ್ಷಿಸುತ
ಇದನು ಕಂಡನು ಸೂತನೊಬ್ಬನು
ಮುದದ ಮದದಲಿ ತನ್ನ ಮರೆದು
ಬ್ಬಿದನಿದೆತ್ತಣ ನಿಧಿಯೊ ಶಿವಶಿವಯೆಂದು ನಡೆತಂದ (ಆದಿ ಪರ್ವ, ೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ಆ ಮಗುವು ನದಿಯ ದಡದ ಮೇಲೆ ಮರಳಿನ ರಾಶಿಯನ್ನು ಕಾಲಲ್ಲಿ ಹೊಡೆಯುತ್ತಾ ಕೈಗಲನ್ನು ಕೊಡವುತ್ತಾ ಸೂರ್ಯನನ್ನೇ ನೋಡುತ್ತಾ ಜೊರಾಗಿ ಅಳುತ್ತಿತ್ತು. ಇದನ್ನು ನೋಡಿದ ಸಾರತಿಯನೊಬ್ಬನು ಸಂತೋಷಾತಿರೇಕದಿಂದ ಮೈಮರೆತು ಉಬ್ಬಿ, ಶಿವಶಿವಾ ಇದು ಎಲ್ಲಿಂದ ದೊರಕಿದ ನಿಧಿಯೆನ್ನುತ್ತಾ ಮಗುವಿನ ಬಳಿ ಬಂದನು.

ಅರ್ಥ:
ಕೆದರು: ಹರಡು; ಕಾಲು: ಪಾದ; ಮಳಲು: ಮರಳು; ರಾಶಿ: ಗುಂಪು; ಒದೆ: ನೂಕು; ಕೈ: ಹಸ್ತ; ಕೊಡಹು: ಅಲ್ಲಾಡಿಸು, ಕೊಡವು, ಜಾಡಿಸು ; ಒದರು: ಕಿರುಚು, ಗರ್ಜಿಸು; ಶಿಶು: ಮಗು; ಅರಸ: ರಾಜ; ರವಿ: ಸೂರ್ಯ; ಈಕ್ಷಿಸು: ನೋಡು; ಕಂಡು: ನೋಡು; ಸೂತ: ಸಾರಥಿ; ಮುದ: ಸಮ್ತಸ; ಮದ: ದರ್ಪ; ಮರೆ: ಎಚ್ಚರತಪ್ಪು; ಉಬ್ಬು: ಹಿಗ್ಗು, ಗರ್ವಿಸು; ನಿಧಿ: ಐಶ್ವರ್ಯ; ನಡೆ: ಚಲಿಸು;

ಪದವಿಂಗಡಣೆ:
ಕೆದರಿ +ಕಾಲಲಿ +ಮಳಲ +ರಾಶಿಯನ್
ಒದೆದು +ಕೈಗಳ +ಕೊಡಹಿ +ಭೋಯೆಂದ್
ಒದರುತಿರ್ದನು +ಶಿಶುಗಳ್+ಅರಸನು +ರವಿಯನ್+ಈಕ್ಷಿಸುತ
ಇದನು +ಕಂಡನು +ಸೂತನೊಬ್ಬನು
ಮುದದ +ಮದದಲಿ +ತನ್ನ+ ಮರೆದ್
ಉಬ್ಬಿದನ್+ಇದೆತ್ತಣ+ ನಿಧಿಯೊ +ಶಿವಶಿವಯೆಂದು +ನಡೆತಂದ

ಅಚ್ಚರಿ:
(೧) ಮಗುವನ್ನು ವರ್ಣಿಸುವ ಪರಿ – ಶಿಶುಗಳರಸನು, ಎತ್ತಣ ನಿಧಿಯೊ;