ಹಲಧರನ ಖತಿ ಬಲುಹು ಕದನಕೆ
ಮಲೆತನಾದಡೆ ಹಾನಿ ತಪ್ಪದು
ಗೆಲವಿನಲಿ ಸೋಲದಲಿ ತಾನೌಚಿತ್ಯವೇನಿದಕೆ
ಒಳಗೆ ಬಿದ್ದ ವಿಘಾತಿ ಮುರರಿಪು
ತಿಳಿವನೋ ತವಕಿಸುವನೋ ನಾ
ವಳಿದೆವಿನ್ನೇನೆನುತ ನಡುಗಿದನಂದು ಯಮಸೂನು (ಗದಾ ಪರ್ವ, ೮ ಸಂಧಿ, ೨೭ ಪದ್ಯ)
ತಾತ್ಪರ್ಯ:
ಧರ್ಮಜನು, ಬಲರಾಮನ ಕೋಪ ಹಿರಿದಾಗಿದೆ. ಇದಿರು ಬಿದ್ದರೆ ನಮಗೆ ಹಾನಿ ತಪ್ಪುವುದಿಲ್ಲ. ನಾವು ಹೆದ್ದು ಸೋತರೆ ಚೌಚಿತ್ಯವೇನು? ಇದು ಅಂತರಂಗದ ಪೆಟ್ಟು. ಶ್ರೀಕೃಷ್ಣನಿಗೆ ಇದು ತಿಳಿದಿದೆಯೇ? ಅವನೇಕೆ ಸುಮ್ಮನಿದ್ದಾನೆ, ನಾವು ನಾಶವಾಗುವ ಸ್ಥಿತಿಯಲ್ಲಿದ್ದೇವೆ ಎಂದು ಧರ್ಮಜನು ಭಯಗೊಂಡನು.
ಅರ್ಥ:
ಹಲಧರ: ನೇಗಿಲನ್ನು ಹಿಡಿದವ (ಬಲರಾಮ); ಖತಿ: ಕೋಪ; ಬಲುಹು: ಹೆಚ್ಚು, ಅಧಿಕ; ಕದನ: ಯುದ್ಧ; ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು; ಹಾನಿ: ನಾಶ; ಗೆಲುವು: ಜಯ; ಸೋಲು: ಪರಾಭವ; ಔಚಿತ್ಯ: ಯೋಗ್ಯವಾದುದು; ಬಿದ್ದ: ಬೀಳು, ಎರಗು; ವಿಘಾತಿ: ಆಪತ್ತು; ಮುರರಿಪು: ಕೃಷ್ಣ; ತಿಳಿ: ಗೊತ್ತುಪಡಿಸು; ತವಕಿಸು: ಕಾತುರಿಸು, ಕುತೂಹಲ ಪಡು; ಅಳಿ: ನಾಶ; ನಡುಗು: ಕಂಪಿಸು, ಹೆದರು; ಸೂನು: ಮಗ;
ಪದವಿಂಗಡಣೆ:
ಹಲಧರನ +ಖತಿ +ಬಲುಹು +ಕದನಕೆ
ಮಲೆತನಾದಡೆ +ಹಾನಿ +ತಪ್ಪದು
ಗೆಲವಿನಲಿ +ಸೋಲದಲಿ +ತಾನ್+ಔಚಿತ್ಯವೇನ್+ಇದಕೆ
ಒಳಗೆ +ಬಿದ್ದ+ ವಿಘಾತಿ +ಮುರರಿಪು
ತಿಳಿವನೋ +ತವಕಿಸುವನೋ +ನಾವ್
ಅಳಿದೆವ್+ಇನ್ನೇನೆನುತ+ ನಡುಗಿದನ್+ಅಂದು +ಯಮಸೂನು
ಅಚ್ಚರಿ:
(೧) ಗೆಲುವು, ಸೋಲು – ವಿರುದ್ಧ ಪದಗಳು
(೨) ಧರ್ಮಜನು ಹೆದರಿದ ಪರಿ – ನಾವಳಿದೆವಿನ್ನೇನೆನುತ ನಡುಗಿದನಂದು ಯಮಸೂನು