ಮೈಮರೆದನರೆಗಳಿಗೆ ಮಾತ್ರಕೆ
ವೈಮನಸ್ಯದ ಜಾಡ್ಯರೇಖೆಯ
ಸುಯ್ ಮಹಾದ್ಭುತವಾಯ್ತು ಪರಿಣತ ಪಾರವಶ್ಯದಲಿ
ಹಾ ಮಹಾದೇವೆನುತ ಹಗೆವನ
ಕೈಮೆಯನು ಬಣ್ಣಿಸುತಲೆದ್ದನ
ಲೈ ಮರುತ್ಸುತ ಸೂಸಿ ಹಾರಿದ ಗದೆಯ ತಡವರಿಸಿ (ಗದಾ ಪರ್ವ, ೭ ಸಂಧಿ, ೨೬ ಪದ್ಯ)
ತಾತ್ಪರ್ಯ:
ಅರ್ಧಗಳಿಗೆ ಕಾಲ ಮೈಮರೆದಿದ್ದ ಭೀಮನು ಎಚ್ಚೆತ್ತನು. ವೈರದ ಜಾಡ್ಯ ಮಹಾದ್ಭುತವಾಗಿ ಹೆಚ್ಚಿತು. ಭೀಮನು ಕೌರವನ ಕೈಚಳಕವನ್ನು ಹೊಗಳಿ ಶಿವಶಿವಾ ಎನ್ನುತ್ತಾ ಕೈಯಿಂದ ಸಿಡಿದು ಹೋಗಿದ್ದ ಗದೆಯನ್ನು ಹಿಡಿದನು.
ಅರ್ಥ:
ಮೈಮರೆ: ಎಚ್ಚರತಪ್ಪು; ಅರೆಗಳಿಗೆ: ಸ್ವಲ್ಪ ಸಮಯ; ವೈಮನಸ್ಯ: ಅಪಾರವಾದ ದುಃಖ; ಜಾಡ್ಯ: ನಿರುತ್ಸಾಹ, ಸೋಮಾರಿತನ; ರೇಖೆ: ಗೆರೆ, ಗೀಟು; ಸುಯ್: ಶಬ್ದವನ್ನು ವಿವರಿಸುವ ಪರಿ; ಅದ್ಭುತ: ಆಶ್ಚರ್ಯ; ಪರಿಣತ: ಪರಿಪಕ್ವವಾದುದು; ಪಾರವಶ್ಯ: ಬಾಹ್ಯಪ್ರಜ್ಞೆ ಇಲ್ಲದಿರುವುದು; ಹಗೆ: ವೈರಿ; ಕೈಮೆ: ಕೆಲಸ, ಕಪಟ; ಬಣ್ಣಿಸು: ವಿವರಿಸು; ಮರುತ್ಸುತ: ವಾಯುಪುತ್ರ (ಭೀಮ); ಸೂಸು: ಹರಡು; ಗದೆ: ಮುದ್ಗರ; ತಡವರಿಸು: ಹುಡುಕು, ಸವರು;
ಪದವಿಂಗಡಣೆ:
ಮೈಮರೆದನ್+ಅರೆಗಳಿಗೆ +ಮಾತ್ರಕೆ
ವೈಮನಸ್ಯದ +ಜಾಡ್ಯ+ರೇಖೆಯ
ಸುಯ್ +ಮಹಾದ್ಭುತವಾಯ್ತು+ ಪರಿಣತ+ ಪಾರವಶ್ಯದಲಿ
ಹಾ +ಮಹಾದೇವ+ಎನುತ+ ಹಗೆವನ
ಕೈಮೆಯನು +ಬಣ್ಣಿಸುತಲ್+ಎದ್ದನಲೈ
ಮರುತ್+ಸುತ+ ಸೂಸಿ +ಹಾರಿದ +ಗದೆಯ +ತಡವರಿಸಿ
ಅಚ್ಚರಿ:
(೧) ದುರ್ಯೋಧನನನ್ನು ಹೊಗಳುವ ಪರಿ – ಹಗೆವನ ಕೈಮೆಯನು ಬಣ್ಣಿಸುತಲ್