ಪದ್ಯ ೪೪: ಸಂಜಯನು ಯಾರನ್ನು ನೆನೆಯುತ್ತಾ ಹಿಂದಿರುಗಿದನು?

ಕುರುಪತಿಯ ಬೀಳ್ಕೊಂಡು ಸಂಜಯ
ಮರಳಿದನು ತನಗಾದ ಹಿಂದಣ
ಪರಿಭವವ ನೆನೆದಡಿಗಡಿಗೆ ಕಂಪಿಸುತ ಮನದೊಳಗೆ
ಧುರದ ಮಧ್ಯದೊಳೊಬ್ಬನೇ ನಡೆ
ತರುತ ಭೂತಾವಳಿಯನೀಕ್ಷಿಸಿ
ಗುರುವ ನೆನೆದನು ಕೇಳು ಜನಮೇಜಯ ಮಹೀಪಾಲ (ಗದಾ ಪರ್ವ, ೩ ಸಂಧಿ, ೪೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಸಂಜಯನು ಕೌರವನನ್ನು ಬೀಳ್ಕೊಂಡು, ಹಿಂದೆ ಯುದ್ಧಭೂಮಿಯಲ್ಲಿ ತನಗೊದಗಿದ್ದ ಅಪಾಯವನ್ನು ನೆನೆದು ಹೆಜ್ಜೆಹೆಜ್ಜೆಗೂ ನಡುಗುತ್ತಾ ಯುದ್ಧರಂಗದಲ್ಲಿ ಭೂತಗಳನ್ನು ನೋಡುತ್ತಾ ಏಕಾಂಗಿಯಾಗಿ ಗುರುಸ್ಮರಣೆ ಮಾಡುತ್ತಾ ಬಂದನು.

ಅರ್ಥ:
ಬೀಳ್ಕೊಂಡು: ತೆರಳು; ಮರಳು: ಹಿಂದಿರುಗು; ಹಿಂದಣ: ಹಿಂದೆ, ಭೂತ; ಪರಿಭವ: ಅನಾದರ, ತಿರಸ್ಕಾರ, ಸೋಲು; ನೆನೆದು: ಜ್ಞಾಪಿಸು; ಅಡಿಗಡಿ: ಹೆಜ್ಜೆ ಹೆಜ್ಜೆ; ಕಂಪಿಸು: ನಡುಗು; ಮನ: ಮನಸ್ಸು; ಧುರ: ಯುದ್ಧ, ಕಾಳಗ; ಮಧ್ಯ: ನಡುವೆ; ನಡೆ: ಚಲಿಸು; ಭೂತಾವಳಿ: ಭೂತ, ಪಿಶಾಚಿ; ಈಕ್ಷಿಸು: ನೋಡು; ಗುರು: ಆಚಾರ್ಯ; ನೆನೆ: ಜ್ಞಾಪಿಸು; ಮಹೀಪಾಲ: ರಾಜ;

ಪದವಿಂಗಡಣೆ:
ಕುರುಪತಿಯ +ಬೀಳ್ಕೊಂಡು +ಸಂಜಯ
ಮರಳಿದನು +ತನಗಾದ +ಹಿಂದಣ
ಪರಿಭವವ +ನೆನೆದ್+ಅಡಿಗಡಿಗೆ +ಕಂಪಿಸುತ +ಮನದೊಳಗೆ
ಧುರದ +ಮಧ್ಯದೊಳ್+ಒಬ್ಬನೇ +ನಡೆ
ತರುತ+ ಭೂತಾವಳಿಯನ್+ಈಕ್ಷಿಸಿ
ಗುರುವ +ನೆನೆದನು +ಕೇಳು+ ಜನಮೇಜಯ +ಮಹೀಪಾಲ

ಅಚ್ಚರಿ:
(೧) ಪರಿಭವವ ನೆನೆದಡಿಗಡಿಗೆ, ಗುರುವ ನೆನೆದನು – ನೆನೆದ ಪದದ ಬಳಕೆ