ಪದ್ಯ ೨೧: ಭೀಮನೇಕೆ ಮರುಗಿದನು?

ಮಿಡುಕದದು ಮಹಿಯಿಂದ ಭೀಮನ
ಕಡುಹು ನಿಮ್ದುದು ಬಾಲದಲಿ ತುದಿ
ನಡುಗದನಿಲಜನಂಗವಟ್ಟದ ಕಡುಹು ಕಂಪಿಸದು
ತೊಡಕೆ ಕೆಟ್ಟುದು ಕಾರ್ಯ ದುರ್ಬಲ
ನೊಡನೆ ಭಂಗವ್ಯಾಪ್ತಿ ತನ್ನನು
ಸುಡಲೆನುತ ಹಿಮ್ಮೆಟ್ಟಿ ಮಮ್ಮಲ ಮರುಗಿದನು ಭೀಮ (ಅರಣ್ಯ ಪರ್ವ, ೧೧ ಸಂಧಿ, ೨೧ ಪದ್ಯ)

ತಾತ್ಪರ್ಯ:
ಹನುಮನ ಬಾಲವು ಭೂಮಿಯಿಂದ ಒಂದು ಚೂರು ಅಲುಗಾಡಲಿಲ್ಲ. ಭೀಮನ ಶಕ್ತಿಯು ಅದರೆದುರು ನಿಂತು ಹೋಯಿತು. ಬಾಲದ ತುದಿಯೂ ನಡುಗಲಿಲ್ಲ. ಭೀಮನ ಸರ್ವಶಕ್ತಿಯ ಪ್ರಯೋಗವೂ ನಿಷ್ಫಲವಾಯಿತು. ಆಗ ಭೀಮನು ಕಾರ್ಯದಲ್ಲಿ ತೊಡಗಿ ಕೆಟ್ಟು ಹೋದೆ, ದುರ್ಬಲನ ಜೊತೆ ಹೋರಿ ಅವಮಾನಿತನಾದೆ, ಹೀಗೆ ಯತ್ನದಲ್ಲಿ ಸೋತ ನನ್ನನ್ನು ಸುಡಬೇಕು ಎಂದುಕೊಂಡು ಹಿಂದಕ್ಕೆ ಸರಿದು ತುಂಬ ತಳಮಳಗೊಂಡನು.

ಅರ್ಥ:
ಮಿಡುಕು: ಅಲುಗಾಟ, ಚಲನೆ; ಮಹಿ: ಭೂಮಿ; ಕಡುಹು: ಸಾಹಸ, ಹುರುಪು; ನಿಂದು: ನಿಲ್ಲು; ಬಾಲ: ಪುಚ್ಛ; ತುದಿ: ಅಗ್ರಭಾಗ; ನಡುಗು: ನಡುಕ, ಕಂಪನ; ಅನಿಲಜ: ವಾಯುಪುತ್ರ (ಭೀಮ); ಅಂಗವಟ್ಟ: ಶರೀರ; ಕಂಪಿಸು: ಅಲುಗಾಡು; ತೊಡಕು: ಗೋಜು, ಗೊಂದಲ; ಕೆಟ್ಟು: ಸರಿಯಿಲ್ಲದ; ಕಾರ್ಯ: ಕೆಲಸ; ದುರ್ಬಲ: ಶಕ್ತಿಹೀನ; ಭಂಗ: ಚೂರು, ಮುರಿಯುವಿಕೆ; ವ್ಯಾಪ್ತಿ: ಹರಹು; ಸುಡು: ದಹಿಸು; ಹಿಮ್ಮೆಟ್ಟು: ಹಿಂದೆಸರಿ; ಮಮ್ಮಲ: ಅತಿಶಯವಾಗಿ, ವಿಶೇಷವಾಗಿ; ಮರುಗು: ತಳಮಳ;

ಪದವಿಂಗಡಣೆ:
ಮಿಡುಕದದು +ಮಹಿಯಿಂದ +ಭೀಮನ
ಕಡುಹು +ನಿಂದುದು +ಬಾಲದಲಿ+ ತುದಿ
ನಡುಗದ್+ಅನಿಲಜನ್+ಅಂಗವಟ್ಟದ +ಕಡುಹು +ಕಂಪಿಸದು
ತೊಡಕೆ +ಕೆಟ್ಟುದು +ಕಾರ್ಯ +ದುರ್ಬಲ
ನೊಡನೆ +ಭಂಗವ್ಯಾಪ್ತಿ +ತನ್ನನು
ಸುಡಲೆನುತ +ಹಿಮ್ಮೆಟ್ಟಿ +ಮಮ್ಮಲ +ಮರುಗಿದನು +ಭೀಮ

ಅಚ್ಚರಿ:
(೧) ಭಿಮನು ಕೊರಗಿದ ಪರಿ – ತೊಡಕೆ ಕೆಟ್ಟುದು ಕಾರ್ಯ ದುರ್ಬಲ ನೊಡನೆ ಭಂಗವ್ಯಾಪ್ತಿ ತನ್ನನು ಸುಡಲೆನುತ ಹಿಮ್ಮೆಟ್ಟಿ ಮಮ್ಮಲ ಮರುಗಿದನು ಭೀಮ

ಪದ್ಯ ೯: ದ್ರೌಪದಿಯು ಕೃಷ್ಣನ ಪಾದಗಳಲ್ಲಿ ಮೈಮರೆತಳೇಕೆ?

ಒರಲಿದಳು ದೆಸೆಯೊಡನೊರಲೆ ಮಿಗೆ
ಹೊರಳಿದಳು ಹರಿಪಾದದಲಿ ಮೈ
ಮರೆದಳಂಗನೆ ತನುವ ಮುಸುಕಿದ ಕೇಶಪಾಶದಲಿ
ಕರಗಿದಳು ಕಂದಿದಳು ಮಮ್ಮಲ
ಮರುಗಿ ಕರುಗಂದಿದಳು ದೃಗುಜಲ
ದೊರತೆಯುಕ್ಕಿತು ಮೇಲೆ ಮೇಲೆ ಮಹೀಶನಂಗನೆಗೆ (ಅರಣ್ಯ ಪರ್ವ, ೨ ಸಂಧಿ, ೯ ಪದ್ಯ)

ತಾತ್ಪರ್ಯ:
ದ್ರೌಪದಿಯು ಶ್ರೀಕೃಷ್ಣನನ್ನು ನೋಡಿ ಓಡೋಡಿ ಬಂದು ಅವನ ಪಾದಗಳ ಮೇಲೆ ಹೊರಳಾಡಿದಳು. ಅವಳ ಕೇಶರಾಶಿಯು ಅವಳನ್ನು ಮುಸುಕುತ್ತಿರಲು ಆಕೆಯು ಮೈಮರೆತಳು, ದುಃಖದಿಂದ ಕರಗಿ, ಕಳಾಹೀನಳಾಗಿ, ಹೆಚ್ಚಿನ ನೋವಿನಿಂದ ಕಣ್ಣೀರಿನ ಧಾರೆಯನ್ನು ಹರಿಯುತ್ತಿರಲು ಆಕೆಯು ಮಮ್ಮಲ ಮರುಗಿದಳು. ಕಣ್ಣಿರು ಮತ್ತೆ ಮತ್ತೆ ಉಕ್ಕಿತು.

ಅರ್ಥ:
ಒರಲು:ಗೋಳಿಡು; ದೆಸೆ: ಬಳಿ, ಸಮೀಪ; ಮಿಗೆ: ಅಧಿಕ; ಹೊರಳು: ಉರುಳಾಡು; ಹರಿ: ಕೃಷ್ಣ; ಪಾದ: ಚರಣ; ಮೈಮರೆ: ಪ್ರಜ್ಞೆಯನ್ನು ಕಳೆದುಕೊಳ್ಳು; ಅಂಗನೆ: ಹೆಣ್ಣು; ತನು: ದೇಹ; ಮುಸುಕು: ಆವರಿಸು; ಕೇಶ: ಕೂದಲು; ಪಾಶ: ಜಾಲ; ಕರಗು: ಕನಿಕರ ಪಡು, ನೀರಾಗಿಸು; ಕಂದು: ಕಳಾಹೀನ; ಮಮ್ಮಲ: ಅತಿಶಯವಾಗಿ, ವಿಶೇಷವಾಗಿ; ಮರುಗು: ತಳಮಳ, ಸಂಕಟ; ಕರು: ಎತ್ತರ, ಹಿರಿಮೆ; ದೃಗುಜಲ: ಕಣ್ಣೀರು; ಒರತೆ: ಚಿಲುಮೆ; ಉಕ್ಕು: ಹೆಚ್ಚಾಗು; ಮಹೀಶ: ರಾಜ; ಅಂಗನೆ: ಹೆಣ್ಣು;

ಪದವಿಂಗಡಣೆ:
ಒರಲಿದಳು +ದೆಸೆಯೊಡನ್+ಒರಲೆ+ ಮಿಗೆ
ಹೊರಳಿದಳು+ ಹರಿಪಾದದಲಿ+ ಮೈ
ಮರೆದಳ್+ಅಂಗನೆ +ತನುವ +ಮುಸುಕಿದ +ಕೇಶ+ಪಾಶದಲಿ
ಕರಗಿದಳು +ಕಂದಿದಳು +ಮಮ್ಮಲ
ಮರುಗಿ +ಕರುಗಂದಿದಳು+ ದೃಗುಜಲದ್
ಒರತೆಯುಕ್ಕಿತು +ಮೇಲೆ +ಮೇಲೆ +ಮಹೀಶನ್+ಅಂಗನೆಗೆ

ಅಚ್ಚರಿ:
(೧) ದ್ರೌಪದಿಯನ್ನು ಮಹೀಶನಂಗನೆ ಎಂದು ಕರೆದಿರುವುದು
(೨) ದುಃಖದ ತೀವ್ರತೆಯನ್ನು ವಿವರಿಸುವ ಪರಿ – ಕರಗಿದಳು ಕಂದಿದಳು ಮಮ್ಮಲ
ಮರುಗಿ ಕರುಗಂದಿದಳು ದೃಗುಜಲದೊರತೆಯುಕ್ಕಿತು ಮೇಲೆ ಮೇಲೆ

ಪದ್ಯ ೧೦೪: ಭೀಷ್ಮಾದಿಗಳ ಅಸಹಾಯಕತೆ ಹೇಗಿತ್ತು?

ಮುರುಹಿದರು ಮುಸುಡುಗಳ ಮಿಗೆ ನೀ
ರೊರೆವ ಕಂಗಳಲಕಟಕಟ ನಿ
ಷ್ಠುರವಿದೇಕಪಕೀರ್ತಿಯೇಕನುಚಿತವಿದೇಕೆನುತ
ಕರಗಿದರು ಕಂದಿದರು ಮಮ್ಮಲ
ಮರುಗಿದರು ಭೀಷ್ಮಾದಿಗಳು ಜ
ರ್ಝರಿತರಾದರು ತಡೆಯಲಾರದೆ ಖಳನ ದುಷ್ಕೃತವ (ಸಭಾ ಪರ್ವ, ೧೫ ಸಂಧಿ, ೧೦೪ ಪದ್ಯ)

ತಾತ್ಪರ್ಯ:
ಈ ದುಷ್ಕೃತ್ಯವನ್ನು ನೋಡಲಾರದೆ ಭೀಷ್ಮಾದಿಗಳು ಮುಖವನ್ನು ಬೇರೆಯಡೆಗೆ ತಿರುಗಿಸಿದರು, ಅವರ ಕಣ್ಣುಗಳಲ್ಲಿ ನೀರು ಧಾರಾಕಾರವಾಗಿ ಸುರಿಯುತ್ತಿತ್ತು, ಅಯ್ಯಯ್ಯೋ ಈ ನಿಷ್ಠೂರ ಇದರಿಂದ ಬರುವ ಅಪಕೀರ್ತಿ, ಅಪಯಶಸ್ಸು, ಅನುಚಿತ ಕೃತ್ಯಗಳು ಏಕೆ ಎಂದು ಕೊರಗಿ, ಕಳಾಹೀನರಾಗಿ, ಬಹಳ ಮರುಗಿದರು.

ಅರ್ಥ:
ಮುರುಹು: ತಿರುಗಿಸು; ಮುಸುಡು: ಮುಖ; ಮಿಗೆ: ಮತ್ತು, ಅಧಿಕ; ನೀರು: ಜಲ; ಒರೆ: ಬಳಿ, ಸವರು; ಕಂಗಳು: ನಯನ; ಅಕಟಕಟ: ಅಯ್ಯಯ್ಯೋ; ನಿಷ್ಠುರ: ಕಠಿಣವಾದ; ಅಪಕೀರ್ತಿ: ಅಪಯಶಸ್ಸು, ಅಪಖ್ಯಾತಿ; ಅನುಚಿತ: ಸರಿಯಲ್ಲದ; ಕರಗು: ಕನಿಕರ ಪಡು; ಕಂದು:ಕಳಾಹೀನ; ಮಮ್ಮಲ: ಅತಿಶಯವಾಗಿ, ವಿಶೇಷವಾಗಿ; ಮರುಗು: ತಳಮಳ, ಸಂಕಟ; ಆದಿ: ಮುಂತಾದ; ಜರ್ಝರಿತ: ಭಗ್ನ, ಚೂರು; ತಡೆ: ನಿಲ್ಲಿಸು; ಖಳ: ದುಷ್ಟ; ದುಷ್ಕೃತ: ಕೆಟ್ಟ ಕೆಲಸ;

ಪದವಿಂಗಡಣೆ:
ಮುರುಹಿದರು+ ಮುಸುಡುಗಳ +ಮಿಗೆ +ನೀರ್
ಒರೆವ +ಕಂಗಳಲ್+ಅಕಟಕಟ +ನಿ
ಷ್ಠುರವ್+ಇದೇಕ್+ಅಪಕೀರ್ತಿ+ಏಕ್+ಅನುಚಿತವ್+ಇದೇದ್+ಎನುತ
ಕರಗಿದರು+ ಕಂದಿದರು +ಮಮ್ಮಲ
ಮರುಗಿದರು +ಭೀಷ್ಮಾದಿಗಳು +ಜ
ರ್ಝರಿತರಾದರು +ತಡೆಯಲಾರದೆ+ ಖಳನ +ದುಷ್ಕೃತವ

ಅಚ್ಚರಿ:
(೧) ಭೀಷ್ಮಾದಿಗಳ ನೋವಿನ ಚಿತ್ರಣ – ಕರಗಿದರು ಕಂದಿದರು ಮಮ್ಮಲಮರುಗಿದರು ಭೀಷ್ಮಾದಿಗಳು ಜರ್ಝರಿತರಾದರು
(೨) ಮ ಕಾರದ ತ್ರಿವಳಿ ಪದ – ಮುರುಹಿದರು ಮುಸುಡುಗಳ ಮಿಗೆ
(೩) ಮೂರನೇ ಸಾಲು ಒಂದೇ ಪದವಾಗಿ ರಚಿಸಿರುವುದು – ಷ್ಠುರವಿದೇಕಪಕೀರ್ತಿಯೇಕನುಚಿತವಿದೇಕೆನುತ