ಪದ್ಯ ೮೨: ಅರ್ಜುನನು ಕೃಷ್ಣನನ್ನು ಹೇಗೆ ವರ್ಣಿಸಿದನು?

ಪರಮಪುಣ್ಯ ಶ್ಲೋಕ ಪಾವನ
ಚರಿತ ಚಾರುವಿಲಾಸ ನಿರ್ಮಲ
ವರ ಕಥನ ಲೀಲಾ ಪ್ರಯುಕ್ತ ಪ್ರಕಟಭುವನಶತ
ನಿರವಯವ ನಿರ್ದ್ವಂದ್ವ ನಿಸ್ಪೃಹ
ನಿರುಪಮಿತ ನಿರ್ಮಾಯ ಕರುಣಾ
ಕರ ಮಹಾತ್ಮ ಮನೋಜವಿಗ್ರಹ ಕರುಣಿಸೆನಗೆಂದ (ಭೀಷ್ಮ ಪರ್ವ, ೩ ಸಂಧಿ, ೮೨ ಪದ್ಯ)

ತಾತ್ಪರ್ಯ:
ನೆನೆದ ಮಾತ್ರದಿಂದ ಪರಮಪುಣ್ಯವನ್ನು ಕೊಡುವವನೇ, ಪಾವನ ಚರಿತ್ರನೇ, ಸುಂದರವಾದ ವಿಲಾಸವುಳ್ಲವನೇ, ನಿರ್ಮಲನೇ, ಲೀಲೆಗಾಗಿ ಅನೇಕ ಭುವನಗಳನ್ನು ಪ್ರಕಟಿಸಿದವನೇ, ಅವಯವಗಳಿಲ್ಲದವನೇ, ದ್ವಂದ್ವಗಳಿಲ್ಲದವನೇ, ನಿಸ್ಪೃಹನೇ, ಸಾಟಿಯಿಲ್ಲದವನೇ, ಮಾಯೆಯನ್ನು ಗೆದ್ದವನೇ, ಕರುಣಾಸಾಗರನೇ, ಶ್ರೇಷ್ಠನೇ, ಸುಂದರ ರೂಪವುಳ್ಳವನೇ ನನ್ನನ್ನು ಕರುಣಿಸು ತಂದೆ ಎಂದು ಅರ್ಜುನನು ಬೇಡಿದನು.

ಅರ್ಥ:
ಪರಮ: ಶ್ರೇಷ್ಠ; ಪುಣ್ಯ: ಶುಭವಾದ; ಶ್ಲೋಕ: ದೇವತಾ ಸ್ತುತಿ; ಪಾವನ: ಮಂಗಳ; ಚರಿತ: ಕಥೆ; ಚಾರು: ಸುಂದರ; ವಿಲಾಸ: ಅಂದ, ಸೊಬಗು; ನಿರ್ಮಲ: ಶುದ್ಧ; ವರ: ಶ್ರೇಷ್ಠ; ಕಥನ: ಹೊಗಳುವುದು; ಪ್ರಯುಕ್ತ: ನಿಮಿತ್ತ; ಪ್ರಕಟ: ತೋರು; ಭುವನ: ಜಗತ್ತು; ಶತ: ನೂರು; ನಿರವಯವ: ಅವಯವಗಳಿಲ್ಲದಿರುವವ; ನಿರ್ದ್ವಂದ್ವ: ದ್ವಂದ್ವಗಳಿಲ್ಲದಿರುವವ; ನಿಸ್ಪೃಹ:ಮುಟ್ಟಲಾಗದ; ನಿರ್ಮಾಯ: ಮಾಯೆಯನ್ನು ಮೀರಿದವನು; ಕರುಣಾಕರ: ದಯಾಸಾಗರ; ಮಹಾತ್ಮ: ಶ್ರೇಷ್ಠ; ಮನೋಜ: ಮನ್ಮಥ; ವಿಗ್ರಹ: ರೂಪ; ಕರುಣಿಸು: ದಯೆತೋರು;

ಪದವಿಂಗಡಣೆ:
ಪರಮಪುಣ್ಯ+ ಶ್ಲೋಕ +ಪಾವನ
ಚರಿತ +ಚಾರುವಿಲಾಸ +ನಿರ್ಮಲ
ವರ +ಕಥನ +ಲೀಲಾ +ಪ್ರಯುಕ್ತ +ಪ್ರಕಟ+ಭುವನ+ಶತ
ನಿರವಯವ +ನಿರ್ದ್ವಂದ್ವ +ನಿಸ್ಪೃಹ
ನಿರುಪಮಿತ +ನಿರ್ಮಾಯ +ಕರುಣಾ
ಕರ+ ಮಹಾತ್ಮ +ಮನೋಜ+ವಿಗ್ರಹ +ಕರುಣಿಸೆನಗೆಂದ

ಅಚ್ಚರಿ:
(೧) ನಿ ಕಾರದ ಪದಗಳು – ನಿರವಯವ ನಿರ್ದ್ವಂದ್ವ ನಿಸ್ಪೃಹ ನಿರುಪಮಿತ ನಿರ್ಮಾಯ

ಪದ್ಯ ೭೬: ಕೀಚಕನು ದ್ರೌಪದಿಗೆ ಯಾವಾಗ ಸೇವಕನಾಗುತ್ತಾನೆಂದು ಹೇಳಿದನು?

ಬಳಿಕ ನಿನ್ನ ಪುರಾಣ ಧರ್ಮವ
ತಿಳಿದುಕೊಂಬೆನಿದೊಮ್ಮೆ ನಿನ್ನಯ
ಲಲಿತ ಕರುಣ ಕಟಾಕ್ಷಕವಟವ ತೊಡಿಸಿ ತನ್ನೊಡಲ
ಆಳುಕದೆಸುವ ಮನೋಜನಂಬಿನ
ಹಿಳುಕ ಮುರಿ ಡಿಂಗರಿಗಳನಹೆನೆಂ
ದಳಿಮನದಲಾ ಖೂಳನಬುಜಾನನೆಗೆ ಕೈಮುಗಿದ (ವಿರಾಟ ಪರ್ವ, ೩ ಸಂಧಿ, ೭೬ ಪದ್ಯ)

ತಾತ್ಪರ್ಯ:
ಸೈರಂಧ್ರೀ, ನಿನ್ನ ಪುರಾತನ ಧರ್ಮವನ್ನು ಆ ಮೇಲೆ ಶ್ರವಣ ಮಾಡುತ್ತೇನೆ, ಇದೊಂದು ಬಾರಿ ನಿನ್ನ ಸುಂದರ ಕರುಣಾ ಕಟಾಕ್ಷವನ್ನು ನನ್ನತ್ತ ಬೀರಿ, ನಿರ್ಭಯದಿಂದ ನನ್ನ ಮೇಲೆ ಮನ್ಮಥನು ಬಿಡುತ್ತಿರುವ ಬಾಣಗಳ ಅಲಗಿನಿಂದ ರಕ್ಷಿಸಿದ್ದೇ ಆದರೆ, ನಾನು ನಿನ್ನ ಸೇವಕನಾಗುತ್ತೇನೆ ಎಂದು ಹೇಳಿ ಕೀಚಕನು ದ್ರೌಪದಿಗೆ ಕೈಮುಗಿದನು.

ಅರ್ಥ:
ಬಳಿಕ: ನಂತರ; ಪುರಾಣ: ಹಳೆಯ, ಪ್ರಾಚೀನವಾದ; ಧರ್ಮ: ಧಾರಣ ಮಾಡಿದುದು, ನಿಯಮ; ತಿಳಿ: ಅರ್ಥೈಸು, ಅರಿ; ಇದೊಮ್ಮೆ: ಮತ್ತೊಮ್ಮೆ; ಲಲಿತ: ಸೌಂದರ್ಯ; ಕರುಣ: ದಯೆ; ಕಟಾಕ್ಷ: ನೋಟ; ಕವಟು: ಬಾಗಿಲು; ತೊಡಿಸು: ಧರಿಸು; ಒಡಲು: ದೇಹ; ಅಳುಕು: ಹೆದರು; ಎಸು: ಬಾಣ ಪ್ರಯೋಗ ಮಾಡು; ಮನೋಜ: ಮನ್ಮಥ; ಅಂಬು: ಬಾಣ; ಹಿಳುಕು: ಬಾಣದ ಹಿಂಭಾಗ; ಮುರಿ: ಸೀಳು; ಡಿಂಗರಿಗ: ಭಕ್ತ; ಅಳಿಮನ: ಆಸೆತುಂಬಿದ ಮನಸ್ಸು, ಹಾಳು ಮಾಡುವ ಮನಸ್ಸು; ಖೂಳ: ದುಷ್ಟ; ಅಬುಜಾನನೆ: ಕಮಲದಂತ ಮುಖವುಳ್ಳವಳು; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಬಳಿಕ +ನಿನ್ನ +ಪುರಾಣ +ಧರ್ಮವ
ತಿಳಿದುಕೊಂಬೆನ್+ಇದೊಮ್ಮೆ +ನಿನ್ನಯ
ಲಲಿತ +ಕರುಣ +ಕಟಾಕ್ಷ+ಕವಟವ+ ತೊಡಿಸಿ +ತನ್ನೊಡಲ
ಆಳುಕದ್+ಎಸುವ +ಮನೋಜನ್+ಅಂಬಿನ
ಹಿಳುಕ +ಮುರಿ +ಡಿಂಗರಿಗಳನಹೆನ್+
ಎಂದ್+ಅಳಿಮನದಲಾ +ಖೂಳನ್+ಅಬುಜಾನನೆಗೆ +ಕೈಮುಗಿದ

ಅಚ್ಚರಿ:
(೧) ಕೀಚಕನು ಸೇವಕನಾಗುವೆನೆಂದು ಹೇಳುವ ಪರಿ – ಮನೋಜನಂಬಿನಹಿಳುಕ ಮುರಿ ಡಿಂಗರಿಗಳನಹೆನೆಂದ

ಪದ್ಯ ೨೫: ದ್ರೌಪದಿಯು ಸತ್ಯಭಾಮೆಗೆ ಏನೆಂದಳು?

ನೀವು ಮುಗ್ಧೆಯರತಿ ವಿದಗ್ಧನು
ದೇವಕೀಸುತನೆನ್ನವರು ಧ
ರ್ಮಾವಲಂಬರು ದಿಟ್ಟರಲ್ಲ ಮನೋಜ ಕೇಳಿಯಲಿ
ನೀವು ಸೊಬಗಿನ ನಿಧಿಗಳೈಶತ
ಸಾವಿರದ ಸತಿಯರಲಿ ಕೃಷ್ಣನ
ಜೀವ ವಿಶ್ರಮ ಸತಿಯರೆಂದಳು ನಗುತ ನಳಿನಾಕ್ಷಿ (ಅರಣ್ಯ ಪರ್ವ, ೧೬ ಸಂಧಿ, ೨೫ ಪದ್ಯ)

ತಾತ್ಪರ್ಯ:
ನೀವು ಮುಗ್ಧೆಯರು. ಶ್ರೀಕೃಷ್ಣನು ಬಹು ತಿಳಿದವನು. ನನ್ನ ಪತಿಗಳು ಧರ್ಮಪರಾಯಣರು, ಕಾಮಕೇಳಿಯಲ್ಲಿ ದಿಟ್ಟತನವನ್ನು ತೋರಿಸುವವರಲ್ಲ ಸತ್ಯಭಾಮೆ, ನೀನು ಸೊಬಗಿನ ನಿಧಿ ಅಸಂಖ್ಯ ಪತ್ನಿಯರಿದ್ದರೂ ಶ್ರೀಕೃಷ್ಣನು ನಿನ್ನಲ್ಲಿ ವಿಶ್ರಾಂತಿಯನ್ನು ಕಾಣುತ್ತಾನೆೆ ಎಂದು ದ್ರೌಪದಿಯು ಹೇಳಿದಳು.

ಅರ್ಥ:
ಮುಗ್ಧೆ: ಕಪಟವನ್ನು ತಿಳಿಯದವಳು; ವಿದಗ್ಧ: ಪಂಡಿತ, ವಿದ್ವಾಂಸ; ಸುತ: ಮಗ; ಧರ್ಮ: ಧಾರಣೆ ಮಾಡಿದುದು; ಅವಲಂಬ: ಆಶ್ರಯ; ದಿಟ್ಟ: ಧೈರ್ಯಶಾಲಿ, ಸಾಹಸಿ; ಮನೋಜ: ಮನ್ಮಥ; ಕೇಳಿ: ಕ್ರೀಡೆ, ವಿನೋದ; ಸೊಬಗು: ಅಂದ, ಚೆಲುವು; ನಿಧಿ: ಸಂಪತ್ತು, ಐಶ್ವರ್ಯ; ಶತ: ನೂರು; ಸಾವಿರ: ಸಹಸ್ರ; ಸತಿ: ಹೆಂಡತಿ, ಸ್ತ್ರೀ; ಜೀವ: ಪ್ರಾಣ; ವಿಶ್ರಮ: ಶ್ರಮ, ಪರಿಹಾರ; ನಳಿನಾಕ್ಷಿ: ಕಮಲದಂತಹ ಕಣ್ಣುಳ್ಳವಳು;

ಪದವಿಂಗಡಣೆ:
ನೀವು +ಮುಗ್ಧೆಯರ್+ಅತಿ +ವಿದಗ್ಧನು
ದೇವಕೀಸುತನ್+ಎನ್ನವರು +ಧ
ರ್ಮಾವಲಂಬರು +ದಿಟ್ಟರಲ್ಲ +ಮನೋಜ +ಕೇಳಿಯಲಿ
ನೀವು +ಸೊಬಗಿನ+ ನಿಧಿಗಳೈ+ಶತ
ಸಾವಿರದ +ಸತಿಯರಲಿ +ಕೃಷ್ಣನ
ಜೀವ +ವಿಶ್ರಮ +ಸತಿಯರೆಂದಳು +ನಗುತ +ನಳಿನಾಕ್ಷಿ

ಅಚ್ಚರಿ:
(೧) ಸತ್ಯಭಾಮೆಯನ್ನು ಹೊಗಳುವ ಪರಿ – ನೀವು ಸೊಬಗಿನ ನಿಧಿಗಳೈಶತ
ಸಾವಿರದ ಸತಿಯರಲಿ ಕೃಷ್ಣನಜೀವ ವಿಶ್ರಮ ಸತಿಯರೆಂದಳು ನಗುತ ನಳಿನಾಕ್ಷಿ