ಕಳೆದುದಾ ಮಧುಮಾಸ ಪಸರಿಸಿ
ಸುಳಿದುದೊಯ್ಯನೆ ಗ್ರೀಷ್ಮ ಋತುವಿನ
ಸುಳಿವು ಜಂಬೂಫಲವ ಬ್ರಾಹ್ಮರಿಗೀವ ಬುದ್ಧಿಯಲಿ
ತೊಳಲಿದರು ಹೇರಡವಿಯಲಿ ಕಡು
ಬಳಲಿದರು ಪಾಂಡವರು ದೊರಕದೆ
ಬಳಿಕಲೈದುಪವಾಸವಾದುದು ದ್ರುಪದನಂದನೆಗೆ (ಅರಣ್ಯ ಪರ್ವ, ೪ ಸಂಧಿ, ೮ ಪದ್ಯ)
ತಾತ್ಪರ್ಯ:
ವಸಂತ ಋತುವು ಕಳೆಯಿತು, ಗ್ರೀಷ್ಮ ಋತುವು ಕಾಣತೊಡಗಿತು. ಬ್ರಾಹ್ಮಣರಿಗೆ ನೇರಳೆ ಹಣ್ಣನ್ನು ದಾನಕೊಡಬೇಕೆಂದು ಪಾಂಡವರು ಕಾಡಿನಲ್ಲೆಲ್ಲಾ ಅಲೆದು ಹುಡುಕುತ ತುಂಬ ದಣಿದರು. ಹೀಗೆ ಹುಡುಕುತ್ತಾ ಅವರು ಬಳಲಿ ಬೆಂಡಾದರು, ದ್ರೌಪದಿಯು ಐದು ದಿನ ಉಪವಾಸ ಮಾಡಿದಳು.
ಅರ್ಥ:
ಕಳೆದು: ತೀರು; ಮಧುಮಾಸ: ವಸಂತಋತು; ಪಸರಿಸು: ಹರಡು; ಸುಳಿದು: ಕಾಣಿಸಿಕೊಳ್ಳು, ಬೀಸು; ಒಯ್ಯನೆ: ಒಡನೆ, ಬೇಗ; ಋತು: ೨ ಮಾಸಗಳ ಅವಧಿ; ಜಂಬೂಫಲ: ನೇರಳೆ; ಬ್ರಾಹ್ಮಣ: ಭೂಸುರ; ಬುದ್ಧಿ: ತಿಳುವಳಿಕೆ; ತೊಳಲು: ಬವಣೆ; ಹೇರು: ಭಾರ; ಅಡವಿ: ಕಾಡು; ಹೇರಡವಿ: ದಟ್ಟವಾದ ಕಾಡು; ಕಡು: ತುಂಬ; ಬಳಲು: ಆಯಾಸ; ದೊರಕು: ಸಿಕ್ಕು, ಪಡೆ; ಬಳಿಕ: ನಂತರ; ಐದು: ಬಂದು ಸೇರು; ಉಪವಾಸ: ನಿರಾಹಾರದ ಸ್ಥಿತಿ; ನಂದನೆ: ಮಗಳು;
ಪದವಿಂಗಡಣೆ:
ಕಳೆದುದಾ+ ಮಧುಮಾಸ +ಪಸರಿಸಿ
ಸುಳಿದುದ್+ಒಯ್ಯನೆ +ಗ್ರೀಷ್ಮ +ಋತುವಿನ
ಸುಳಿವು+ ಜಂಬೂಫಲವ +ಬ್ರಾಹ್ಮರಿಗ್+ಈವ+ ಬುದ್ಧಿಯಲಿ
ತೊಳಲಿದರು +ಹೇರಡವಿಯಲಿ +ಕಡು
ಬಳಲಿದರು +ಪಾಂಡವರು +ದೊರಕದೆ
ಬಳಿಕಲ್+ಐದ್+ಉಪವಾಸವಾದುದು +ದ್ರುಪದ+ನಂದನೆಗೆ
ಅಚ್ಚರಿ:
(೧) ದ್ರೌಪದಿಯನ್ನು ದ್ರುಪದನಂದನೆ ಎಂದು ಕರೆದಿರುವುದು
(೨) ಕಳೆದು, ಸುಳಿದು – ಪ್ರಾಸ ಪದಗಳು