ಪದ್ಯ ೨೧: ಭೀಷ್ಮರು ದುರ್ಯೋಧನನಿಗೆ ಯಾವ ವಿಚಾರವನ್ನು ಹೇಳಿದರು?

ಜಗದಗುರುವಲ್ಲಾ ಮುರಾಂತಕ
ನಗಣಿತೋಪನು ಮಹಿಮನಲ್ಲಾ
ಸಗುಣ ನಿರ್ಗುಣನಾ ಮಹಾತ್ಮನನಂತ ರೂಪವನು
ವಿಗಡಿಸಲು ಜಯವಹುದೆ ಜಾಣರ
ಬಗೆಗೆ ಬಹುದೇ ನಿನ್ನ ಮತವೆಲೆ
ಮಗನೆ ಮರುಳಾದೈ ಮದಾಂಧರ ಮಾತುಗಳ ಕೇಳಿ (ಭೀಷ್ಮ ಪರ್ವ, ೧ ಸಂಧಿ, ೨೧ ಪದ್ಯ)

ತಾತ್ಪರ್ಯ:
ಭೀಷ್ಮ ದುರ್ಯೋಧನನನ್ನು ಉದ್ದೇಶಿಸು, ಮಗು ದುರ್ಯೋಧನ, ಶ್ರೀಕೃಷ್ಣನು ಜಗತ್ತಿಗೆ ಗುರುವಲ್ಲವೇ? ಅವನ ಮಹಿಮೆಯನ್ನು ಎಣಿಸಬಹುದೇ? ಅದಕ್ಕೆ ಹೋಲಿಕೆಯಾದರೂ ಇದೆಯೇ? ಅವನು ಸಗುಣನೂ ಹೌದು ನಿರ್ಗುಣನೂ ಹೌದು, ಅವನ ರೂಪವು ಅನಂತ, ಅವನನ್ನೆದುರಿಸಿದರೆ ಗೆಲ್ಲಬಹುದೇ ತಿಳಿದವರು ಮೆಚ್ಚುವರೇ? ನಿನ್ನ ಈ ಹವಣಿಕೆಯನ್ನು ಅವರು ಅನುಮೋದಿಸುವರೇ? ಮದಾಂಧರ ಮಾತುಗಳನ್ನು ಕೇಳಿ ನಿನ್ನ ಬುದ್ಧಿಗೆ ಹುಚ್ಚು ಹಿಡಿದಿದೆ ಎಂದು ದುರ್ಯೋಧನನಿಗೆ ಬುದ್ಧಿವಾದ ಹೇಳಿದರು.

ಅರ್ಥ:
ಜಗ: ಜಗತ್ತು; ಗುರು: ಆಚಾರ್ಯ; ಮುರಾಂತಕ: ಕೃಷ್ಣ; ಅಗಣಿತ: ಲೆಕ್ಕವಿಲ್ಲದಷ್ಟು; ಓಪ: ಸಂರಕ್ಷಿಸುವವ, ಪ್ರಿಯ; ಮಹಿಮ: ಹಿರಿಮೆ ಯುಳ್ಳವನು; ಸಗುಣ: ಯೋಗ್ಯಗುಣಗಳಿಂದ ಕೂಡಿದ; ನಿರ್ಗುಣ: ಗುಣವಿಲ್ಲದ; ಮಹಾತ್ಮ: ಶ್ರೇಷ್ಠ; ಅನಂತ: ಕೊನೆಯಿಲ್ಲದ; ರೂಪ: ಆಕಾರ; ವಿಗಡ: ಶೌರ್ಯ, ಸಾಹಸ; ಜಯ: ಗೆಲುವು; ಜಾಣ: ಬುದ್ಧಿವಂತ; ಬಗೆ: ಆಲೋಚನೆ; ಮತ: ವಿಚಾರ; ಮಗ: ಸುತ; ಮರುಳು: ಬುದ್ಧಿಭ್ರಮೆ, ಹುಚ್ಚು; ಮದಾಂಧ: ಮದದಿಂದ ಕುರುಡಾದ; ಮಾತು: ವಾಣಿ; ಕೇಳು: ಆಲಿಸು;

ಪದವಿಂಗಡಣೆ:
ಜಗದ+ಗುರುವಲ್ಲಾ+ ಮುರಾಂತಕನ್
ಅಗಣಿತ+ಒಪನು +ಮಹಿಮನಲ್ಲಾ
ಸಗುಣ+ ನಿರ್ಗುಣನ್+ಆ+ ಮಹಾತ್ಮನ್+ಅನಂತ +ರೂಪವನು
ವಿಗಡಿಸಲು +ಜಯವಹುದೆ +ಜಾಣರ
ಬಗೆಗೆ +ಬಹುದೇ +ನಿನ್ನ +ಮತವ್+ಎಲೆ
ಮಗನೆ+ ಮರುಳಾದೈ +ಮದಾಂಧರ +ಮಾತುಗಳ+ ಕೇಳಿ

ಅಚ್ಚರಿ:
(೧) ಕೃಷ್ಣನ ಗುಣಗಾನ – ಜಗದಗುರುವಲ್ಲಾ ಮುರಾಂತಕನಗಣಿತೋಪನು ಮಹಿಮನಲ್ಲಾ ಸಗುಣ ನಿರ್ಗುಣನಾ ಮಹಾತ್ಮನನಂತ ರೂಪವನು
(೨) ಮ ಕಾರದ ಸಾಲು ಪದ – ಮಗನೆ ಮರುಳಾದೈ ಮದಾಂಧರ ಮಾತುಗಳ ಕೇಳಿ

ಪದ್ಯ ೭೯: ಭೀಮನು ನಾಟ್ಯ ಮಂದಿರಕ್ಕೆ ತೆರಳಲು ಹೇಗೆ ಸಿದ್ಧನಾದನು?

ಭೀಮ ನಿಂದಿರು ನಾಟ್ಯ ನಿಲಯವ
ನಾ ಮದಾಂಧಗೆ ನುಡಿದು ಬಂದೆನು
ತಾಮಸದ ಮಾಡದಿರು ಹೂಡದಿರಲ್ಪಬುದ್ಧಿಗಳ
ಕಾಮುಕನನಡೆಗೆಡಹಿ ನಿಜಸು
ಪ್ರೇಮವನು ತೋರೆನಲು ನಗುತು
ದ್ದಾಮನೆದ್ದನು ಫಳಿಯನುಟ್ಟನು ಮಲ್ಲಗಂಟಿನಲಿ (ವಿರಾಟ ಪರ್ವ, ೩ ಸಂಧಿ, ೭೯ ಪದ್ಯ)

ತಾತ್ಪರ್ಯ:
ಭೀಮ ನೀನು ನಾಟ್ಯ ಮಂದಿರದಲ್ಲಿ ನಿಲ್ಲು, ನಾಟ್ಯ ನಿಲಯಕ್ಕೆ ಬಾಯೆಂದು ಆ ಮದಾಂಧನಿಗೆ ಹೇಳಿ ಬಂದಿದ್ದೇನೆ. ಸೋಮಾರಿತನ ಮಾಡಬೇಡ, ಅಲ್ಪ ಬುದ್ಧಿಗಲನ್ನು ತೀಗ್ಯಬೇಡ. ಕಾಮುಕನಾದ ಕೀಚಕನನ್ನು ಸಂಹರಿಸಿ, ನನ್ನ ಮೇಲಿರುವ ನಿನ್ನ ಪ್ರೇಮವನ್ನು ತೋರಿಸು, ಎಂದು ದ್ರೌಪದಿಯು ಹೇಳಲು, ಭೀಮನು ನಗುತ್ತಾ ಎದ್ದು ಮಲ್ಲಗಂಟಿನ ಮಡಿಕೆಯನ್ನು ಹಾಕಿ ವಸ್ತ್ರವನ್ನುಟ್ಟನು.

ಅರ್ಥ:
ನಿಲ್ಲು: ಕಾಯು, ಎದುರು ನೋಡು; ನಾಟ್ಯ: ನೃತ್ಯ; ನಿಲಯ: ಮನೆ, ಮಂದಿರ; ಮದಾಂಧ: ಗರ್ವದಿಂದ ವಿವೇಕವನ್ನು ಕಳೆದುಕೊಂಡವನು; ನುಡಿ: ಮಾತಾದು; ಬಂದೆ: ಆಗಮನ; ತಾಮಸ: ಜಾಡ್ಯ, ಮೂಢತನ; ಹೂಡು: ಅಣಿಗೊಳಿಸು; ಅಲ್ಪ: ಸಣ್ಣದಾದ; ಬುದ್ಧಿ: ತಿಳಿವು, ಅರಿವು; ಕಾಮುಕ: ಕಾಮಾಸಕ್ತನಾದವನು, ಲಂಪಟ; ಪ್ರೇಮ: ಒಲವು; ತೋರು: ಪ್ರದರ್ಶಿಸು; ನಗು: ಸಂತಸ; ಉದ್ದಾಮ: ಶ್ರೇಷ್ಠ; ಘಳಿ: ಮಡಿಕೆ, ನೆರಿಗೆ ಸೀರೆ; ಮಲ್ಲಗಂಟು: ಕಾಸಿಯನ್ನು ಕಟ್ಟುವುದು; ಕೆಡಹು: ಕೆಳಕ್ಕೆ ತಳ್ಳು, ಸೋಲಿಸು; ಅಡೆಕೆಡಹು: ಅಡ್ಡಹಾಕಿ ಸೋಲಿಸು;

ಪದವಿಂಗಡಣೆ:
ಭೀಮ+ ನಿಂದಿರು +ನಾಟ್ಯ +ನಿಲಯವ
ನಾ +ಮದಾಂಧಗೆ+ ನುಡಿದು+ ಬಂದೆನು
ತಾಮಸದ+ ಮಾಡದಿರು +ಹೂಡದಿರ್+ಅಲ್ಪಬುದ್ಧಿಗಳ
ಕಾಮುಕನನ್+ಅಡೆಗೆಡಹಿ+ ನಿಜಸು
ಪ್ರೇಮವನು +ತೋರೆನಲು +ನಗುತ್
ಉದ್ದಾಮನೆದ್ದನು+ ಫಳಿಯನುಟ್ಟನು +ಮಲ್ಲಗಂಟಿನಲಿ

ಅಚ್ಚರಿ:
(೧) ಭೀಮನು ಸಿದ್ಧನಾದ ಪರಿ – ಉದ್ದಾಮನೆದ್ದನು ಫಳಿಯನುಟ್ಟನು ಮಲ್ಲಗಂಟನಲಿ

ಪದ್ಯ ೨೫: ದ್ರೌಪದಿ ಏನೆಂದು ಚಿಂತಿಸಿದಳು?

ಕೇಳಿ ಕಿವಿಮುಚ್ಚಿದಳು ತನ್ನಯ
ಮೇಳದೈವರ ನೆನೆದು ಹರಹರ
ಶೂಲಪಾಣಿ ಮುಕುಂದಯೆನುತವೆ ರವಿಯ ನೀಕ್ಷಿಸುತ
ಕಾಳು ಮೂಳನಲಾ ಖಳಾಗ್ರಣಿ
ಮೇಲುಗಾಣನಲಾ ಮದಾಂಧನ
ಸೋಲಿಸುವರಾರುಂಟೆನುತ ತಲೆ ಬಾಗಿದಳು ತರಳೆ (ವಿರಾಟ ಪರ್ವ, ೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ದ್ರೌಪದಿಯು ಕೀಚಕನ ಮಾತುಗಳನ್ನು ಕೇಳಿ, ತನ್ನೈವರು ಪತಿಗಳನ್ನು ನೆನೆದು ಶಿವ ಶಿವಾ ಮಹಾದೇವ ಶ್ರೀಕೃಷ್ಣಾ ಎಂದು ಸೂರ್ಯನನ್ನು ನೋಡಿದಳು. ಇವನು ಕ್ಷುಲ್ಲಕನೂ, ಕೆಲಸಕ್ಕೆ ಬಾರದವನೂ, ಮುಂದಾಲೋಚನೆ ಇಲ್ಲದವನೂ, ಮದಾಂಧನೂ ಆದ ದುಷ್ಟ. ಇವನನ್ನು ತಡೆದು ಸೋಲಿಸುವವರಾರು ಎಂದು ತಲೆತಗ್ಗಿಸಿದಳು.

ಅರ್ಥ:
ಕೇಳು: ಆಲಿಸು; ಕಿವಿ: ಕರ್ಣ; ಮುಚ್ಚು: ಮರೆಮಾಡು; ಮೇಳ: ಗುಂಪು; ದೈವ: ಭಗವಂತ; ನೆನೆ: ಜ್ಞಾಪಿಸಿಕೋ; ಹರ: ಈಶ್ವರ; ಶೂಲಪಾಣಿ: ಶಂಕರ; ಮುಕುಂದ: ಕೃಷ್ಣ; ರವಿ: ಸೂರ್ಯ; ಈಕ್ಷಿಸು: ನೋಡು; ಕಾಳು: ಕೀಳಾದುದು; ಮೂಳ: ತಿಳಿಗೇಡಿ, ಮೂಢ; ಖಳ: ದುಷ್ಟ; ಅಗ್ರಣಿ: ಮುಂದಾಳು; ಕಾಣು: ನೋಡು; ಮದ: ಅಹಂಕಾರ; ಅಂಧ: ಕುರುಡ; ಸೋಲಿಸು: ಪರಾಭವ ಗೊಳಿಸು; ತಲೆ: ಶಿರ; ಬಾಗು: ಬಗ್ಗು, ಮಣಿ; ತರಳೆ: ಹೆಣ್ಣು;

ಪದವಿಂಗಡಣೆ:
ಕೇಳಿ+ ಕಿವಿಮುಚ್ಚಿದಳು +ತನ್ನಯ
ಮೇಳದ್+ಐವರ +ನೆನೆದು +ಹರಹರ
ಶೂಲಪಾಣಿ +ಮುಕುಂದ+ಎನುತವೆ+ ರವಿಯನ್+ ಈಕ್ಷಿಸುತ
ಕಾಳು+ ಮೂಳನಲಾ +ಖಳಾಗ್ರಣಿ
ಮೇಲು+ಕಾಣನಲಾ+ ಮದಾಂಧನ
ಸೋಲಿಸುವರ್+ಆರುಂಟೆನುತ +ತಲೆ +ಬಾಗಿದಳು +ತರಳೆ

ಅಚ್ಚರಿ:
(೧) ಕೀಚಕನನ್ನು ಬಯ್ಯುವ ಪರಿ – ಕಾಳು ಮೂಳನಲಾ ಖಳಾಗ್ರಣಿ ಮೇಲುಗಾಣನಲಾ ಮದಾಂಧ