ಜಗದಗುರುವಲ್ಲಾ ಮುರಾಂತಕ
ನಗಣಿತೋಪನು ಮಹಿಮನಲ್ಲಾ
ಸಗುಣ ನಿರ್ಗುಣನಾ ಮಹಾತ್ಮನನಂತ ರೂಪವನು
ವಿಗಡಿಸಲು ಜಯವಹುದೆ ಜಾಣರ
ಬಗೆಗೆ ಬಹುದೇ ನಿನ್ನ ಮತವೆಲೆ
ಮಗನೆ ಮರುಳಾದೈ ಮದಾಂಧರ ಮಾತುಗಳ ಕೇಳಿ (ಭೀಷ್ಮ ಪರ್ವ, ೧ ಸಂಧಿ, ೨೧ ಪದ್ಯ)
ತಾತ್ಪರ್ಯ:
ಭೀಷ್ಮ ದುರ್ಯೋಧನನನ್ನು ಉದ್ದೇಶಿಸು, ಮಗು ದುರ್ಯೋಧನ, ಶ್ರೀಕೃಷ್ಣನು ಜಗತ್ತಿಗೆ ಗುರುವಲ್ಲವೇ? ಅವನ ಮಹಿಮೆಯನ್ನು ಎಣಿಸಬಹುದೇ? ಅದಕ್ಕೆ ಹೋಲಿಕೆಯಾದರೂ ಇದೆಯೇ? ಅವನು ಸಗುಣನೂ ಹೌದು ನಿರ್ಗುಣನೂ ಹೌದು, ಅವನ ರೂಪವು ಅನಂತ, ಅವನನ್ನೆದುರಿಸಿದರೆ ಗೆಲ್ಲಬಹುದೇ ತಿಳಿದವರು ಮೆಚ್ಚುವರೇ? ನಿನ್ನ ಈ ಹವಣಿಕೆಯನ್ನು ಅವರು ಅನುಮೋದಿಸುವರೇ? ಮದಾಂಧರ ಮಾತುಗಳನ್ನು ಕೇಳಿ ನಿನ್ನ ಬುದ್ಧಿಗೆ ಹುಚ್ಚು ಹಿಡಿದಿದೆ ಎಂದು ದುರ್ಯೋಧನನಿಗೆ ಬುದ್ಧಿವಾದ ಹೇಳಿದರು.
ಅರ್ಥ:
ಜಗ: ಜಗತ್ತು; ಗುರು: ಆಚಾರ್ಯ; ಮುರಾಂತಕ: ಕೃಷ್ಣ; ಅಗಣಿತ: ಲೆಕ್ಕವಿಲ್ಲದಷ್ಟು; ಓಪ: ಸಂರಕ್ಷಿಸುವವ, ಪ್ರಿಯ; ಮಹಿಮ: ಹಿರಿಮೆ ಯುಳ್ಳವನು; ಸಗುಣ: ಯೋಗ್ಯಗುಣಗಳಿಂದ ಕೂಡಿದ; ನಿರ್ಗುಣ: ಗುಣವಿಲ್ಲದ; ಮಹಾತ್ಮ: ಶ್ರೇಷ್ಠ; ಅನಂತ: ಕೊನೆಯಿಲ್ಲದ; ರೂಪ: ಆಕಾರ; ವಿಗಡ: ಶೌರ್ಯ, ಸಾಹಸ; ಜಯ: ಗೆಲುವು; ಜಾಣ: ಬುದ್ಧಿವಂತ; ಬಗೆ: ಆಲೋಚನೆ; ಮತ: ವಿಚಾರ; ಮಗ: ಸುತ; ಮರುಳು: ಬುದ್ಧಿಭ್ರಮೆ, ಹುಚ್ಚು; ಮದಾಂಧ: ಮದದಿಂದ ಕುರುಡಾದ; ಮಾತು: ವಾಣಿ; ಕೇಳು: ಆಲಿಸು;
ಪದವಿಂಗಡಣೆ:
ಜಗದ+ಗುರುವಲ್ಲಾ+ ಮುರಾಂತಕನ್
ಅಗಣಿತ+ಒಪನು +ಮಹಿಮನಲ್ಲಾ
ಸಗುಣ+ ನಿರ್ಗುಣನ್+ಆ+ ಮಹಾತ್ಮನ್+ಅನಂತ +ರೂಪವನು
ವಿಗಡಿಸಲು +ಜಯವಹುದೆ +ಜಾಣರ
ಬಗೆಗೆ +ಬಹುದೇ +ನಿನ್ನ +ಮತವ್+ಎಲೆ
ಮಗನೆ+ ಮರುಳಾದೈ +ಮದಾಂಧರ +ಮಾತುಗಳ+ ಕೇಳಿ
ಅಚ್ಚರಿ:
(೧) ಕೃಷ್ಣನ ಗುಣಗಾನ – ಜಗದಗುರುವಲ್ಲಾ ಮುರಾಂತಕನಗಣಿತೋಪನು ಮಹಿಮನಲ್ಲಾ ಸಗುಣ ನಿರ್ಗುಣನಾ ಮಹಾತ್ಮನನಂತ ರೂಪವನು
(೨) ಮ ಕಾರದ ಸಾಲು ಪದ – ಮಗನೆ ಮರುಳಾದೈ ಮದಾಂಧರ ಮಾತುಗಳ ಕೇಳಿ