ಸುರಪ ಕದಿಯಲು ಕೆರಳಿ ಕುಲಗಿರಿ
ಯುರಿಯನುಗುಳುವುದೆನಲು ದಾಡೆಗ
ಳರುಣಮಯ ರಶ್ಮಿಗಳ ಪಸರದಲೆಸೆದುದಿಭಪತಿಯ
ಧರಣಿಯಳತೆಯ ಹರಿಯ ನೆಗಹಿನ
ಚರಣದಗ್ರದೊಳಿಳಿವ ಘನ ನಿ
ರ್ಝರದವೊಲು ಮದಧಾರೆ ಮೆರೆದುದು ಕರಿಕಪೋಲದಲಿ (ದ್ರೋಣ ಪರ್ವ, ೩ ಸಂಧಿ, ೮ ಪದ್ಯ)
ತಾತ್ಪರ್ಯ:
ಇಂದ್ರನ ವಜ್ರಾಯುಧದ ಪೆಟ್ಟಿಗೆ ಕುಲಪರ್ವತಗಳು ಉರಿಯನ್ನುಗುಳುವುದೋ ಎಂಬಂತೆ, ಸುಪ್ರತೀಕದ ದಂತಗಳು ಅರುಣವರ್ಣದಿಂದ ಕಂಗೊಳಿಸಿದವು. ಭೂಮಿಯನ್ನಳೆದ ತ್ರಿವಿಕ್ರಮನು ಆಕಾಶವನ್ನೆಳೆದಾಗ ಬಹಿರಾವರನವು ಹರಿದು ಇಳಿದ ದೇವಗಂಗೆಯಂತೆ ಅದರ ಕಪೋಲದಲ್ಲಿ ಮದಧಾರೆ ಒಸರುತ್ತಿತ್ತು.
ಅರ್ಥ:
ಸುರಪ: ಇಂದ್ರ; ಕಡಿ: ಕತ್ತರಿಸು; ಕೆರಳು: ಕೋಪಗೊಳ್ಳು; ಕುಲಗಿರಿ: ದೊಡ್ಡ ಬೆಟ್ಟ; ಉರಿ: ಬೆಂಕಿ; ಉಗುಳು: ಹೊರಹಾಕು; ದಾಡೆ: ದವಡೆ, ಒಸಡು; ಅರುಣ: ಕೆಂಪು; ರಶ್ಮಿ: ಕಿರಣ; ಪಸರು: ಹರಡು; ಎಸೆ: ಹೊರಹೊಮ್ಮು; ಇಭ: ಆನೆ; ಪತಿ: ಒಡೆಯ; ಧರಣಿ: ಭೂಮಿ; ಅಳತೆ: ಪರಿಮಾಣ; ಹರಿ: ವಿಷ್ಣು; ನೆಗಹು: ಜಿಗಿ, ಮೇಲೆತ್ತು; ಚರಣ: ಪಾದ; ಅಗ್ರ: ಮುಂಭಾಗ; ಇಳಿ: ಬಾಗು; ಘನ: ಶ್ರೇಷ್ಠ; ನಿರ್ಝರ: ಝರಿ, ಅಬ್ಬಿ; ಮದ: ಮತ್ತು, ಅಮಲು; ಧಾರೆ: ವರ್ಷ; ಮೆರೆ: ಪ್ರಕಾಶಿಸು; ಕರಿ: ಆನೆ; ಕಪೋಲ: ಕೆನ್ನೆ, ಗಲ್ಲ;
ಪದವಿಂಗಡಣೆ:
ಸುರಪ+ ಕಡಿಯಲು +ಕೆರಳಿ +ಕುಲಗಿರಿ
ಉರಿಯನ್+ಉಗುಳುವುದ್+ಎನಲು +ದಾಡೆಗಳ್
ಅರುಣಮಯ +ರಶ್ಮಿಗಳ +ಪಸರದಲ್+ಎಸೆದುದ್+ಇಭಪತಿಯ
ಧರಣಿ +ಅಳತೆಯ +ಹರಿಯ +ನೆಗಹಿನ
ಚರಣದ್+ಅಗ್ರದೊಳ್+ಇಳಿವ +ಘನ +ನಿ
ರ್ಝರದವೊಲು +ಮದಧಾರೆ +ಮೆರೆದುದು +ಕರಿ+ಕಪೋಲದಲಿ
ಅಚ್ಚರಿ:
(೧) ಉಪಮಾನದ ಪ್ರಯೋಗ – ಸುರಪ ಕದಿಯಲು ಕೆರಳಿ ಕುಲಗಿರಿಯುರಿಯನುಗುಳುವುದೆನಲು
(೨) ಉಪಮಾನದ ಪ್ರಯೋಗ – ಧರಣಿಯಳತೆಯ ಹರಿಯ ನೆಗಹಿನಚರಣದಗ್ರದೊಳಿಳಿವ ಘನ ನಿರ್ಝರದವೊಲು