ಹಿಡಿದವೆನ್ನೊಹೆಯನು ಮಣಿರುಚಿ
ಯೆಡತರದೊಳಿಕ್ಕಿದವು ಭಿತ್ತಿಯ
ಬಿಡೆಯದಲಿ ಝಳುಪಿಸುವ ನೀಲದ ಲಳಿಯ ಲಹರಿಯಲಿ
ತಡಿಯ ಕಾಣೆನು ತಳಿತ ಕಾಂತಿಯ
ಕಡಲ ವಿಮಲ ಸ್ಫಟಿಕ ಜಲದಲಿ
ಮಿಡುಕಲಂಜಿದವಂಘ್ರಿಗಳು ನರನಾಥ ಕೇಳೆಂದ (ಸಭಾ ಪರ್ವ, ೧೩ ಸಂಧಿ, ೩೫ ಪದ್ಯ)
ತಾತ್ಪರ್ಯ:
ಆಲಯದಲ್ಲಿದ್ದ ಮಣಿಗಳ ಕಾಂತಿಯು ನನ್ನ ಊಹೆಯನ್ನೂ ಮೀರಿಸಿತ್ತು. ನನ್ನ ತಿಳುವಳಿಕೆ ಹೆಚ್ಚು ಕಡಿಮೆಯಾಯಿತು. ಗೋಡೆಯ ಫಲಕದಲ್ಲಿ ಹೊಳೆಯುವ ನೀಲಿಯ ಬೆಳಕಿನ ದೆಸೆಯಿಂದ ನೀರಿನ ಪಾತ್ರದ ದಡ ಕಾಣದಾಯಿತು, ಸ್ಫಟಿಕ ಶಿಲೆಯಲ್ಲಿ ಕಂಡ ನೀರಿನಲ್ಲಿ ಕಾಲನ್ನು ಎತ್ತಿಡಲು ಹೆದರಿದೆನು ಎಂದು ಅಲ್ಲಿಯ ವಿಸ್ಮಯ ರಚನೆಗಳನ್ನು ವಿವರಿಸಿದನು.
ಅರ್ಥ:
ಹಿಡಿ: ಬಂಧಿಸು; ಊಹೆ: ಎಣಿಕೆ, ಅಂದಾಜು; ಮಣಿ: ಬೆಲೆಬಾಳುವ ಹವಳ; ರುಚಿ: ಕಾಂತಿ, ಪ್ರಕಾಶ; ಎಡತರ: ತಡವಡಿಕೆ; ಇಕ್ಕು: ಇರಿಸು, ಇಡು; ಭಿತ್ತಿ: ಮುರಿಯುವ, ಒಡೆಯುವ; ಬಿಡಯ: ದಾಕ್ಷಿಣ್ಯ, ಸಂಕೋಚ; ಝಳ: ತಾಪ, ಶೆಖೆ; ನೀಲ: ಉದ್ದ; ಲಳಿಯ: ರಭಸ, ಆವೇಶ; ಲಹರಿ: ಚಾಕಚಕ್ಯತೆ, ಚುರುಕು, ಚಮತ್ಕಾರ; ತಡಿ: ದಡ, ತಟ,ತೇವ; ಕಾಣೆ: ತೋರು; ತಳಿತ: ಚಿಗುರಿದ; ಕಾಂತಿ: ಪ್ರಕಾಶ; ಕಡಲ: ಸಾಗರ; ವಿಮಲ: ನಿರ್ಮಲ; ಸ್ಫಟಿಕ: ನಿರ್ಮಲವೂ, ಪಾರದರ್ಶಕವೂ ಆದ ಒಂದು ಬಗೆಯ ಬಿಳಿಯ ಹೊಳಪಿನ ಕಲ್ಲು; ಜಲ: ನೀರು; ಮಿಡುಕು: ಅಲುಗಾಟ, ಚಲನೆ; ಅಂಜು: ಹೆದರು; ಅಂಘ್ರಿ: ಪಾದ; ನರನಾಥ: ರಾಜ; ಕೇಳು: ಆಲಿಸು;
ಪದವಿಂಗಡಣೆ:
ಹಿಡಿದವ್+ಎನ್+ಊಹೆಯನು+ ಮಣಿರುಚಿ
ಎಡತರದೊಳ್+ಇಕ್ಕಿದವು +ಭಿತ್ತಿಯ
ಬಿಡೆಯದಲಿ +ಝಳುಪಿಸುವ+ ನೀಲದ+ ಲಳಿಯ+ ಲಹರಿಯಲಿ
ತಡಿಯ +ಕಾಣೆನು +ತಳಿತ+ ಕಾಂತಿಯ
ಕಡಲ+ ವಿಮಲ+ ಸ್ಫಟಿಕ +ಜಲದಲಿ
ಮಿಡುಕಲ್+ಅಂಜಿದವ್+ಅಂಘ್ರಿಗಳು +ನರನಾಥ+ ಕೇಳೆಂದ
ಅಚ್ಚರಿ:
(೧) ತ, ಕ ಕಾರದ ಅಕ್ಷರಗಳ ಬಳಕೆ – ತಡಿಯ ಕಾಣೆನು ತಳಿತ ಕಾಂತಿಯ