ಮಕ್ಕಳಿರ ನಿಮಗೇಕೆ ರಣವಿದು
ಮಕ್ಕಳಾಟಿಕೆಯಾಯ್ತಲಾ ಹಿಂ
ದಿಕ್ಕಿದಿರಲಾ ದೊರೆಯ ಧೂಳಿಯ ಬೆನ್ನ ತಡೆದಿರಲಾ
ಎಕ್ಕಸರದಲಿ ನಿಮ್ಮರಾಯನ
ನಿಕ್ಕಿ ಭೀಮಾರ್ಜುನರಿಗೌತಣ
ವಿಕ್ಕುವೆನು ಬರಹೇಳೆನುತ ತೂಳಿದನು ಮಾದ್ರೇಶ (ಶಲ್ಯ ಪರ್ವ, ೨ ಸಂಧಿ, ೩೬ ಪದ್ಯ)
ತಾತ್ಪರ್ಯ:
ಮಕ್ಕಳಿರಾ ನಿಮಗೇಕೆ ಯುದ್ಧ. ಇದು ಹುಡುಗಾಟವೆಂದುಕೊಂಡಿರಾ? ದೊರೆಯನ್ನು ಹಿಂದಿಟ್ಟು ದೊರೆಯ ಬೆನ್ನು ಧೂಳಾಗುವುದನ್ನು ತಡೆದಿರಲ್ಲವೇ? ಒಂದೇ ಬಾಣದಿಂದ ನಿಮ್ಮ ರಾಜನನ್ನು ಕೊಂದು, ಭೀಮಾರ್ಜುನರಿಗೆ ರಣದೌತಣವನ್ನು ಕೊಡುತ್ತೇನೆ. ಅವರನ್ನು ಬರಹೇಳಿರಿ ಎಂದು ಶಲ್ಯನು ಅವರಿಬ್ಬರನ್ನೂ ಹಿಮ್ಮೆಟ್ಟಿಸಿದನು.
ಅರ್ಥ:
ಮಕ್ಕಳು: ಸುತ; ರಣ: ಯುದ್ಧ; ಆಟಿಕೆ: ಆಟದ ವಸ್ತು; ಹಿಂದಿಕ್ಕು: ಹಿಂಬದಿಗೆ ತಳ್ಳು; ದೊರೆ: ರಾಜ; ಧೂಳು: ಮಣ್ಣಿನ ಪುಡಿ; ಬೆನ್ನು: ಹಿಂಭಾಗ; ತಡೆ: ನಿಲ್ಲಿಸು; ಎಕ್ಕಸ: ವೇಗ; ರಾಯ: ರಾಜ; ಇಕ್ಕು: ಇರಿಸು, ಇಡು; ಔತಣ: ವಿಶೇಷವಾದ ಊಟ; ಬರಹೇಳು: ಆಗಮಿಸು; ತೂಳು: ಬೆನ್ನಟ್ಟು, ಹಿಂಬಾಲಿಸು;
ಪದವಿಂಗಡಣೆ:
ಮಕ್ಕಳಿರ +ನಿಮಗೇಕೆ +ರಣವಿದು
ಮಕ್ಕಳಾಟಿಕೆ+ಆಯ್ತಲಾ +ಹಿಂ
ದಿಕ್ಕಿದಿರಲಾ +ದೊರೆಯ +ಧೂಳಿಯ +ಬೆನ್ನ +ತಡೆದಿರಲಾ
ಎಕ್ಕಸರದಲಿ +ನಿಮ್ಮ+ರಾಯನನ್
ಇಕ್ಕಿ +ಭೀಮಾರ್ಜುನರಿಗ್+ಔತಣವ್
ಇಕ್ಕುವೆನು +ಬರಹೇಳೆನುತ +ತೂಳಿದನು +ಮಾದ್ರೇಶ
ಅಚ್ಚರಿ:
(೧) ಮಕ್ಕಳು ಪದದ ಬಳಕೆ – ಮಕ್ಕಳಿರ ನಿಮಗೇಕೆ ರಣವಿದು ಮಕ್ಕಳಾಟಿಕೆಯಾಯ್ತಲಾ