ಸಾಕು ಮೂವರು ಸುತರು ತನಗೆಂ
ದೀಕೆ ಮಾದ್ರೀದೇವಿಗಗ್ಗದ
ಶೋಕಿತೆಗೆ ಮಂತ್ರೋಪದೇಶ ವಿಧಾನವನು ಕಲಿಸಿ
ನಾಕನಿಲಯರ ವೊಲಿಸೆನಲು ಬಂ
ದಾಕೆ ಕೃತನಿಯಮದಲಿ ನೆನೆದಳು
ಲೋಕವಿಶ್ರುತರಶ್ವಿನೀದೇವರನು ಹರ್ಷದಲಿ (ಆದಿ ಪರ್ವ, ೪ ಸಂಧಿ, ೬೫ ಪದ್ಯ)
ತಾತ್ಪರ್ಯ:
ತನಗೆ ಮೂರು ಮಕ್ಕಳು ಸಾಕೆಂದು ಕುಂತೀದೇವಿಯು ಮಕ್ಕಳಿಲ್ಲದೆ ಶೋಕಿಸುತ್ತಿದ್ದ ಮಾದ್ರೀದೇವಿಗೆ ಮಂತ್ರವನ್ನುಪದೇಶಿಸಿ ಅದರ ಪ್ರಯೋಗದ ವಿಧಾನವನ್ನು ಕಲಿಸಿ, ದೇವತೆಗಳಲ್ಲಿ ನಿನಗೆ ಬೇಕಾದವರನ್ನು ಒಲಿಸಿಕೋ ಎಂದು ಹೇಳಿದಳು. ಮಾದ್ರಿಯು ನಿಯಮದಂತೆ ಮಂತ್ರವನ್ನು ಜಪಿಸಿ ಅಶ್ವಿನೀದೇವತೆಗಳನ್ನು ನೆನೆದಳು.
ಅರ್ಥ:
ಸಾಕು: ನಿಲ್ಲು; ಸುತ: ಮಗ; ಅಗ್ಗ: ಶ್ರೇಷ್ಠ; ಶೋಕ: ದುಃಖ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಉಪದೇಶ: ಬೋಧಿಸುವುದು; ವಿಧಾನ: ರೀತಿ; ಕಲಿಸು: ಹೇಳು; ನಾಕನಿಲಯ: ಸ್ವರ್ಗ; ಒಲಿಸು: ಪ್ರೀತಿಸು;ಬಂದು: ಆಗಮಿಸು; ಕೃತ: ಮಾಡಿದ, ಮುಗಿಸಿದ; ನಿಯಮ: ಕಟ್ಟುಪಾಡು; ನೆನೆ: ಜ್ಞಾಪಿಸು; ಲೋಕ: ಜಗತ್ತು; ವಿಶ್ರುತ: ಪ್ರಸಿದ್ಧನಾದವನು; ಹರ್ಷ: ಸಂತಸ;
ಪದವಿಂಗಡಣೆ:
ಸಾಕು +ಮೂವರು +ಸುತರು +ತನಗೆಂದ್
ಈಕೆ +ಮಾದ್ರೀದೇವಿಗ್+ಅಗ್ಗದ
ಶೋಕಿತೆಗೆ +ಮಂತ್ರೋಪದೇಶ+ ವಿಧಾನವನು +ಕಲಿಸಿ
ನಾಕನಿಲಯರ +ಒಲಿಸೆನಲು +ಬಂದ್
ಆಕೆ +ಕೃತ+ನಿಯಮದಲಿ+ ನೆನೆದಳು
ಲೋಕ+ವಿಶ್ರುತರ್+ಅಶ್ವಿನೀದೇವರನು +ಹರ್ಷದಲಿ
ಅಚ್ಚರಿ:
(೧) ತುಂಬ ದುಃಖಿತಳು ಎಂದು ಹೇಳುವ ಪರಿ – ಅಗ್ಗದ ಶೋಕಿತೆ
(೨) ಸ್ವರ್ಗವಾಸಿಗಳು ಎಂದು ಹೇಳಲು – ನಾಕನಿಲಯರ
(೩) ನಾಕ, ಲೋಕ; ಈಕೆ, ಆಕೆ – ಪ್ರಾಸ ಪದ