ಅರಸ ಕೇಳ್ ಮುನಿಯಿತ್ತ ಮಂತ್ರಾ
ಕ್ಷರದ ಕರಹಕೆ ತಳುವಿದರೆ ದಿನ
ಕರನ ತೇಜವ ಕೊಂಬನೇ ದುರ್ವಾಸ ವಿಗಡನಲ
ಧರೆಗೆ ಬಂದನು ಸೂರ್ಯನಾತನ
ಕಿರಣಲಹರಿಯ ಹೊಯ್ಲಿನಲಿ ಸರ
ಸಿರುಹ ಮುಖಿ ಬೆಚ್ಚಿದಳು ಬಿಜಯಂಗೈಯಿ ನೀವೆನುತ (ಆದಿ ಪರ್ವ, ೩ ಸಂಧಿ, ೧೮ ಪದ್ಯ)
ತಾತ್ಪರ್ಯ:
ಜನಮೇಜಯ ರಾಜ ಕೇಳು, ದೂರ್ವಾಸನು ಮಹಾತಪಸ್ವಿ. ಅವನು ಉಪದೇಶಿಸಿದ ಮಂತ್ರದಿಂದ ಕರೆದಾಗ ತಡಮಾಡಿದರೆ ಸೂರ್ಯನನ್ನೂ ಲಕ್ಶಿಸುವವನಲ್ಲ. ಆದುದರಿಂದ ಸೂರ್ಯನು ಕುಂತಿಯ ಎದುರಿನಲ್ಲಿ ಭೂಮಿಗಿಳಿಸ್ದನು. ಅವನ ಕಿರಣಗಳ ಪ್ರವಾಹದ ಹೊಡೆತಕ್ಕೆ ಕುಂತಿಯು ಬೆದರಿ ನೀವು ಹೊರಟುಹೋಗಿರೆಂದಳು.
ಅರ್ಥ:
ಅರಸ: ರಾಜ; ಕೇಳು: ಆಲಿಸು; ಮುನಿ: ಋಷಿ; ಇತ್ತ: ನೀಡಿದ ಮಂತ್ರ:ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಕರಹಕೆ: ಕರೆ, ಬರೆಮಾಡು; ತಳುವು: ನಿಧಾನಿಸು, ತಡಮಾಡು; ದಿನಕರ: ಸೂರ್ಯ; ತೇಜ: ಪ್ರಕಾಶ; ವಿಗಡ: ಶೌರ್ಯ, ಪರಾಕ್ರಮ; ಧರೆ: ಭೂಮಿ; ಬಂದು: ಆಗಮಿಸು; ಸೂರ್ಯ: ರವಿ; ಕಿರಣ: ತೇಜಸ್ಸು; ಲಹರಿ: ರಭಸ, ಆವೇಗ; ಹೊಯ್ಲು: ಏಟು, ಹೊಡೆತ; ಸರಸಿರುಹಮುಖಿ: ಕಮಲದಂತಹ ಮುಖವುಳ್ಳ (ಸುಂದರಿ, ಹೆಣ್ಣು); ಬೆಚ್ಚು: ಹೆದರು; ಬಿಜಯಂಗೈ: ತೆರಳು;
ಪದವಿಂಗಡಣೆ:
ಅರಸ +ಕೇಳ್ +ಮುನಿಯಿತ್ತ+ ಮಂತ್ರಾ
ಕ್ಷರದ +ಕರಹಕೆ +ತಳುವಿದರೆ +ದಿನ
ಕರನ +ತೇಜವ +ಕೊಂಬನೇ +ದುರ್ವಾಸ +ವಿಗಡನಲ
ಧರೆಗೆ +ಬಂದನು +ಸೂರ್ಯನ್+ಆತನ
ಕಿರಣ+ಲಹರಿಯ +ಹೊಯ್ಲಿನಲಿ +ಸರ
ಸಿರುಹ ಮುಖಿ +ಬೆಚ್ಚಿದಳು +ಬಿಜಯಂಗೈಯಿ +ನೀವೆನುತ
ಅಚ್ಚರಿ:
(೧) ದಿನಕರ, ಸೂರ್ಯ; ತೇಜ, ಕಿರಣ – ಸಮಾನಾರ್ಥಕ ಪದ