ಖೂಳರಲಿ ಸತ್ಕಳೆಗಳನು ನೆರೆ
ಕೇಳದವರಲಿ ಮಂತ್ರಬೀಜವ
ನಾಲಿಯಿಲ್ಲದವಂಗೆ ರೂಪು ವಿಲಾಸ ವಿಭ್ರಮವ
ಹೇಳುವಂತಿರೆ ನಿಮ್ಮ ವಿದುರನ
ಕೇಳಿಸಿದರಾ ಕಾರ್ಯಗತಿಗೆ ವಿ
ತಾಳವಾಗದೆ ಬೊಪ್ಪಯೆಂದನು ನಗುತ ಕುರುರಾಯ (ಸಭಾ ಪರ್ವ, ೧೩ ಸಂಧಿ, ೬೨ ಪದ್ಯ)
ತಾತ್ಪರ್ಯ:
ದುರ್ಯೋಧನನು ತಂದೆಯು ಹೇಳಿದ ವಿಚಾರವನ್ನು ಕೇಳಿ ನಗುತ್ತಾ, ದುಷ್ಟರಿಗೆ ಸನ್ಮಾರ್ಗವನ್ನೂ, ಕಿವುಡರಿಗೆ ಮಂತಾಲೋಚನೆಯನ್ನು, ಕುರುಡನಿಗೆ ರೂಪ ವಿಲಾಸ ವಿಭ್ರಮಗಳನ್ನು ಹೇಳುವ ಹಾಗೆ ಏನು ಪ್ರಯೋಜನವಿಲ್ಲವೋ ಅದೇ ರೀತಿ ವಿದುರನ ಬಳಿ ಕೇಳಿದರೆ ಕೆಲಸವು ತಾಳ ತಪ್ಪುವುದಿಲ್ಲವೇ ಎಂದನು.
ಅರ್ಥ:
ಖೂಳ: ದುಷ್ಟ; ಸತ್ಕಲೆ: ಒಳ್ಳೆಯ ನಡತೆ; ನೆರೆ: ಗುಂಪು; ಕೇಳು: ಆಲಿಸು; ಮಂತ್ರ: ಆಲೋಚನೆ; ಬೀಜ: ಮೂಲ; ಆಲಿ: ಕಣ್ಣು; ರೂಪ: ಆಕಾರ, ಚೆಲುವು; ವಿಲಾಸ: ಸೊಬಗು, ಉಲ್ಲಾಸ; ವಿಭ್ರಮ: ಭ್ರಮೆ, ಭ್ರಾಂತಿ; ಹೇಳು: ತಿಳಿಸು; ಕಾರ್ಯ: ಕೆಲಸ; ಗತಿ: ಪದ್ಧತಿ, ಮಾರ್ಗ; ವಿತಾಳ: ಚಿಂತೆ, ಅಳಲು; ಬೊಪ್ಪ: ತಂದೆ; ನಗುತ: ಹಸಿತ; ರಾಯ: ರಾಜ;
ಪದವಿಂಗಡಣೆ:
ಖೂಳರಲಿ+ ಸತ್ಕಳೆಗಳನು +ನೆರೆ
ಕೇಳದವರಲಿ+ ಮಂತ್ರಬೀಜವನ್
ಆಲಿಯಿಲ್ಲದವಂಗೆ+ ರೂಪು +ವಿಲಾಸ +ವಿಭ್ರಮವ
ಹೇಳುವಂತಿರೆ+ ನಿಮ್ಮ +ವಿದುರನ
ಕೇಳಿಸಿದರ್+ಆ+ ಕಾರ್ಯಗತಿಗೆ+ ವಿ
ತಾಳವಾಗದೆ+ ಬೊಪ್ಪಯೆಂದನು +ನಗುತ +ಕುರುರಾಯ
ಅಚ್ಚರಿ:
(೧) ಉಪಮಾನದ ಪ್ರಯೊಗ – ಖೂಳರಲಿ ಸತ್ಕಳೆಗಳನು ನೆರೆ ಕೇಳದವರಲಿ ಮಂತ್ರಬೀಜವ ನಾಲಿಯಿಲ್ಲದವಂಗೆ ರೂಪು ವಿಲಾಸ ವಿಭ್ರಮವ
(೨) ಉಪಾಯವು ಹದಗೆಡುತ್ತದೆ ಎಂದು ಹೇಳುವ ಪರಿ – ಕಾರ್ಯಗತಿಗೆ ವಿತಾಳವಾಗದೆ