ಧನು ಮುರಿದ ಬಳಿಕಿಮ್ಮಡಿಸಿತೀ
ತನ ಪರಾಕ್ರಮವೆನುತ ಸೇನಾ
ವನಧಿ ಜರೆದುದು ಭಟರು ಹರಿದರು ಬಿಟ್ಟ ಮಂಡೆಯಲಿ
ಜನಪತಿಯ ಕಟ್ಟವಳವಿಯಲಿ ರವಿ
ತನುಜನಡ್ಡೈಸಿದನು ಫಡ ಹೋ
ಗೆನುತ ನಾರಾಚದಲಿ ಮುಸಿಕಿದನರ್ಜುನಾತ್ಮಜನ (ದ್ರೋಣ ಪರ್ವ, ೬ ಸಂಧಿ, ೪೯ ಪದ್ಯ)
ತಾತ್ಪರ್ಯ:
ಬಿಲ್ಲು ಮುರಿದ ಮೇಲೆ ಇವನ ಪರಾಕ್ರಮ ಎರಡಾಯಿತು, ಎಂದು ಸೇನಾಸಮುದ್ರವು ಜಾರಿಹೋಯಿತು. ಸೈನಿಕರು ತಲೆಕೆದರಿಕೊಂಡು ಓಡಿಹೋದರು. ಅಭಿಮನ್ಯುವು ಕೌರವನ ಹತ್ತಿರಕ್ಕೆ ಬರಲು, ಕರ್ಣನು ಅಡ್ಡಬಂದು ತೊಲಗು ಎಂದು ಬಾಣಗಳಿಂದ ಅಭಿಮನ್ಯುವನ್ನು ಆವರಿಸಿದನು.
ಅರ್ಥ:
ಧನು: ಬಿಲ್ಲು; ಮುರಿ: ಸೀಳು; ಬಳಿಕ: ನಂತರ; ಇಮ್ಮಡಿ: ಎರಡು ಪಟ್ಟು; ಪರಾಕ್ರಮ: ಶೌರ್ಯ; ಸೇನ: ಸೈನ್ಯ; ವನಧಿ: ಸಮುದ್ರ; ಜರೆ: ಜಾರು; ಭಟ: ಸೈನಿಕ; ಹರಿ: ಹರಡು, ಚಲಿಸು; ಬಿಟ್ಟು: ತೊರೆ; ಮಂಡೆ: ತಲೆ; ಜನಪ: ರಾಜ; ಅಳವಿ: ಯುದ್ಧ; ರವಿತನುಜ: ಸೂರ್ಯನ ಪುತ್ರ (ಕರ್ಣ); ಅಡ್ಡೈಸು: ಮಧ್ಯ ಪ್ರವೇಶಿಸು; ಫಡ: ತಿರಸ್ಕಾರದ ಮಾತು; ಹೋಗು: ತೆರಳು; ನಾರಾಚ: ಬಾಣ, ಸರಳು; ಮುಸುಕು: ಆವರಿಸು; ಆತ್ಮಜ: ಪುತ್ರ;
ಪದವಿಂಗಡಣೆ:
ಧನು +ಮುರಿದ +ಬಳಿಕ್+ಇಮ್ಮಡಿಸಿತ್
ಈತನ +ಪರಾಕ್ರಮವ್+ಎನುತ +ಸೇನಾ
ವನಧಿ+ ಜರೆದುದು +ಭಟರು +ಹರಿದರು +ಬಿಟ್ಟ +ಮಂಡೆಯಲಿ
ಜನಪತಿಯ +ಕಟ್ಟವ್+ಅಳವಿಯಲಿ +ರವಿ
ತನುಜನ್+ಅಡ್ಡೈಸಿದನು +ಫಡ +ಹೋ
ಗೆನುತ +ನಾರಾಚದಲಿ +ಮುಸಿಕಿದನ್+ಅರ್ಜುನ್+ಆತ್ಮಜನ
ಅಚ್ಚರಿ:
(೧) ಅಭಿಮನ್ಯುವನ್ನು ಅರ್ಜುನಾತ್ಮಜ ಎಂದು ಕರೆದಿರುವುದು
(೨) ಅಭಿಮನ್ಯುವಿನ ಶೌರ್ಯವನ್ನು ವರ್ಣಿಸುವ ಪರಿ – ಧನು ಮುರಿದ ಬಳಿಕಿಮ್ಮಡಿಸಿತೀತನ ಪರಾಕ್ರಮ