ಪದ್ಯ ೭೦: ದುರ್ಯೋಧನನ ಮಕ್ಕಳು ಹೇಗೆ ಯುದ್ಧಕ್ಕೆ ಬಂದರು?

ಚಂಡ ಭುಜಬಲನೊಡನೆ ಮಕ್ಕಳ
ತಂಡವೆದ್ದುದು ಬಿಗಿದ ಬಿಲ್ಲಿನ
ದಂಡವಲಗೆ ಮುಸುಂಡಿ ಮುದ್ಗ ಕಠಾರಿಯುಬ್ಬಣದ
ಗಂಡುಗಲಿಗಳು ಕವಿದರದಿರುವ
ಖಂಡೆಯದ ಮುಡುಹುಗಳ ಗಂಧದ
ಮಂಡನದ ಮೈಸಿರಿಯ ಪರಿಮಳ ಪೂರರೊಗ್ಗಿನಲಿ (ದ್ರೋಣ ಪರ್ವ, ೫ ಸಂಧಿ, ೭೦ ಪದ್ಯ)

ತಾತ್ಪರ್ಯ:
ಅತುಲ ಬಾಹುಬಲ ಪರಾಕ್ರಮಿಯಾದ ಅಭಿಮನ್ಯುವಿನೊಡನೆ ದುರ್ಯೋಧನನ ಮಕ್ಕಳು ಸಮರಕ್ಕಿಳಿದರು. ಬಿಲ್ಲು, ಖಡ್ಗ, ದಂಡ, ಹಲಗೆ, ಮುಸುಂಡಿ, ಮುದ್ಗರ, ಕಠಾರಿ, ಉಬ್ಬನಗಳನ್ನು ಹಿಡಿದು ಬಂದ ಅವರೆಲ್ಲರೂ ಗಂಧಾನುಲೇಪನ ಮಾಡಿಕೊಂಡಿದ್ದರು.

ಅರ್ಥ:
ಚಂಡ: ಶೂರ, ಪರಾಕ್ರಮಿ; ಭುಜಬಲ: ಶೂರ; ಮಕ್ಕಳು: ಪುತ್ರ; ತಂಡ: ಗುಂಪು; ಎದ್ದು: ಮೇಲೇಳು; ಬಿಗಿ: ಭದ್ರವಾಗಿರುವುದು; ಬಿಲ್ಲು: ಚಾಪ; ದಂಡ:ಕೋಲು, ದಡಿ; ಅಲಗು: ಆಯುಧಗಳ ಹರಿತವಾದ ಅಂಚು; ಮುದ್ಗರ: ಗದೆ; ಕಠಾರಿ: ಬಾಕು, ಚೂರಿ; ಉಬ್ಬಣ: ಚೂಪಾದ ಆಯುಧ; ಗಂಡುಗಲಿ: ಅತ್ಯಂತ ಪರಾಕ್ರಮಿ, ಮಹಾಶೂರ; ಕವಿ: ಆವರಿಸು; ಅದಿರು: ನಡುಕ, ಕಂಪನ; ಖಂಡ: ತುಂಡು, ಚೂರು; ಮುಡುಹು: ಹೆಗಲು, ಭುಜಾಗ್ರ; ಗಂಧ: ಚಂದನ; ಮಂಡನ: ಸಿಂಗರಿಸುವುದು, ಅಲಂಕರಿಸುವುದು; ಮೈಸಿರಿ: ದೇಹದ ಸೌಂದರ್ಯ; ಪರಿಮಳ: ಸುವಾಸನೆ; ಪೂರ: ಬಹಳವಾಗಿ; ಒಗ್ಗು: ಗುಂಪು, ಸಮೂಹ;

ಪದವಿಂಗಡಣೆ:
ಚಂಡ +ಭುಜಬಲನೊಡನೆ +ಮಕ್ಕಳ
ತಂಡವೆದ್ದುದು +ಬಿಗಿದ +ಬಿಲ್ಲಿನ
ದಂಡವ್+ಅಲಗೆ+ ಮುಸುಂಡಿ +ಮುದ್ಗ +ಕಠಾರಿ+ಉಬ್ಬಣದ
ಗಂಡುಗಲಿಗಳು +ಕವಿದರ್+ಅದಿರುವ
ಖಂಡೆಯದ +ಮುಡುಹುಗಳ+ ಗಂಧದ
ಮಂಡನದ+ ಮೈಸಿರಿಯ+ ಪರಿಮಳ +ಪೂರರೊಗ್ಗಿನಲಿ

ಅಚ್ಚರಿ:
(೧) ಆಯುಧಗಳ ಹೆಸರು – ಅಲಗೆ, ಮುಸುಂಡಿ, ಮುದ್ಗರ, ಕಠಾರಿ, ಉಬ್ಬಣ
(೨) ಭುಜಬಲ, ಗಂಡುಗಲಿ – ಪರಾಕ್ರಮಿಯೆಂದು ಹೇಳುವ ಪದ