ಕಾಲವಶದಲಿ ಕೌಶಿಕನನಾ
ಕಾಲದೂತರು ತಂದರಾತನ
ಮೇಲುಪೋಗಿನ ಸುಕೃತ ದುಷ್ಕೃತವನು ವಿಚಾರಿಸಲು
ಮೇಲನರಿಯದೆ ಸತ್ಯದಲಿ ವಿ
ಪ್ರಾಳಿ ವಧೆಯಾತಂಗೆ ಬಂದುದು
ಹೇಳಲದು ಭೋಕ್ತವ್ಯವತಿಪಾತಕದ ಫಲವೆಂದ (ಕರ್ಣ ಪರ್ವ, ೧೭ ಸಂಧಿ, ೧೬ ಪದ್ಯ)
ತಾತ್ಪರ್ಯ:
ಹಾಗೆಯೇ ಕಾಲ ಕಳೆಯಲು ಯಮದೂತರು ಕೌಶಿಕನನ್ನು ನರಕಕ್ಕೊಯ್ದರು. ಅವನು ಮಾಡಿದ ಪುಣ್ಯಪಾಪಕರ್ಮಗಳ ವಿಚಾರಣೆ ನಡೆಯಿತು. ಪರಿಣಾಮವನ್ನು ಲೆಕ್ಕಹಾಕದೆ ಸತ್ಯವನ್ನು ಹೇಳಿದುದರಿಂದ ಬ್ರಹ್ಮಹತ್ಯಾಪಾತಕವು ಅವನ ತಲೆಗೆ ಬಂದಿತು. ಬ್ರಹ್ಮಹತ್ಯೆಯು ಮಹಾಪಾಪದ ಕೃತ್ಯ.
ಅರ್ಥ:
ಕಾಲ: ಸಮಯ; ವಶ: ಅಧೀನ, ಅಂಕೆ, ಹತೋಟಿ; ಕಾಲದೂತ: ಯಮನ ಸೇವಕರು; ತಂದರು: ಬರಮಾಡು; ಪೋಗು: ಮಾಡಿದ, ಹೋಗು; ಸುಕೃತ: ಒಳ್ಳೆಯ ಕೆಲಸ; ದುಷ್ಕೃತ್ಯ: ಕೆಟ್ಟ ಕೆಲಸ; ವಿಚಾರ: ಪರ್ಯಾಲೋಚನೆ; ಮೇಲನರಿಯದೆ: ಪೂರ್ಣವನ್ನು ತಿಳಿಯದೆ; ಸತ್ಯ: ದಿಟ; ವಿಪ್ರಾಳಿ: ಬ್ರಾಹ್ಮಣರ ಗುಂಪು; ವಧೆ: ಸಾಯಿಸು, ನಾಶ; ಬಂದು: ಆಗಮಿಸು; ಹೇಳು: ತಿಳಿಸು; ಭೋಕ್ತ: ಅನುಭವಿಸು; ಪಾತಕ: ಪಾಪ; ಫಲ: ಫಲಿತಾಂಶ;
ಪದವಿಂಗಡಣೆ:
ಕಾಲ+ವಶದಲಿ +ಕೌಶಿಕನನ್+ಆ
ಕಾಲ+ದೂತರು +ತಂದರ್+ಆತನ
ಮೇಲುಪೋಗಿನ+ ಸುಕೃತ +ದುಷ್ಕೃತವನು +ವಿಚಾರಿಸಲು
ಮೇಲನರಿಯದೆ +ಸತ್ಯದಲಿ +ವಿ
ಪ್ರಾಳಿ +ವಧೆ+ಆತಂಗೆ+ ಬಂದುದು
ಹೇಳಲದು+ ಭೋಕ್ತವ್ಯವ್+ಅತಿಪಾತಕದ+ ಫಲವೆಂದ
ಅಚ್ಚರಿ:
(೧) ಕಾಲ, ಮೇಲು – ೧-೨, ೩-೪ ಸಾಲಿನ ಮೊದಲ ಪದ
(೨) ಸುಕೃತ, ದುಷ್ಕೃತ – ವಿರುದ್ಧ ಪದಗಳು