ಪದ್ಯ ೨೩: ದುರ್ಯೋಧನನನ್ನು ಧರ್ಮಜನು ಹೇಗೆ ಹಂಗಿಸಿದನು?

ಕೊಳನ ಬಿಡು ಕಾದೇಳು ಹಿಂದಣ
ಹಳಿವ ತೊಳೆ ಹೇರಾಳ ಬಾಂಧವ
ಬಳಗ ಭೂಮೀಶ್ವರರ ಬಹಳಾಕ್ಷೋಹಿಣೀದಳವ
ಅಳಿದ ಕೀರ್ತಿಯ ಕೆಸರ ತೊಳೆ ಭೂ
ವಳಯಮಾನ್ಯನು ದೈನ್ಯವೃತ್ತಿಯ
ಬಳಸುವರೆ ಸುಡು ಮರುಳೆ ಕುರುಪತಿ ಕೈದುಗೊಳ್ಳೆಂದ (ಗದಾ ಪರ್ವ, ೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ದುರ್ಯೋಧನ, ಕೊಳದಿಂದ ಮೇಲೆದ್ದು ಯುದ್ಧಮಾಡಲು ಬಾ, ಹಿಂದಿನ ದುಷ್ಕೀರ್ತಿಯನ್ನು ಕಳೆದುಕೋ, ಲೆಕ್ಕವಿಲ್ಲದಷ್ಟು ಬಂಧು ಬಾಂಧವರು ಅನೇಕ ಅಕ್ಷೋಹಿಣೀ ಸೈನ್ಯಗಳನ್ನು ಕೊಂದ ಅಪಕೀರ್ತಿಯ ಕೆಸರನ್ನು ತೊಳೆದುಕೋ, ಲೋಕದಲ್ಲಿ ಮಾನ್ಯನಾದವನು ದೀನನಾಗಬಾರದು, ಹುಚ್ಚಾ, ಆಯುಧವನ್ನು ಹಿಡಿ ಎಂದು ಕೌರವನನ್ನು ಧರ್ಮಜನು ಹಂಗಿಸಿದನು.

ಅರ್ಥ:
ಕೊಳ: ಸರಸಿ, ಸರೋವರ; ಬಿಡು: ತೊರೆ; ಕಾದು: ಹೋರಾಡು; ಹಿಂದಣ: ಹಿಂದೆ ನಡೆದ; ಹಳಿ: ದೂಷಿಸು, ನಿಂದಿಸು; ತೊಳೆ: ಸ್ವಚ್ಛಮಾಡು, ಶುದ್ಧಗೊಳಿಸು; ಹೇರಾಳ: ಬಹಳ; ಬಾಂಧವ: ಬಂಧುಜನ; ಬಳಗ: ಗುಂಪು; ಭೂಮೀಶ್ವರ: ರಾಜ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ದಳ: ಸೈನ್ಯ; ಅಳಿ: ಸಾವು; ಕೀರ್ತಿ: ಯಶಸ್ಸು; ಕೆಸರು: ರಾಡಿ; ಭೂವಳಯ: ಭೂಮಿ; ಮಾನ್ಯ: ಪ್ರಸಿದ್ಧ; ದೈನ್ಯ: ದೀನತೆ, ಹೀನಸ್ಥಿತಿ; ವೃತ್ತಿ: ಕೆಲಸ; ಬಳಸು: ಸುತ್ತುವರಿ, ಸುತ್ತುಗಟ್ಟು; ಮರುಳ: ತಿಳಿಗೇಡಿ, ದಡ್ಡ; ಕೈದು: ಆಯುಧ;

ಪದವಿಂಗಡಣೆ:
ಕೊಳನ +ಬಿಡು +ಕಾದೇಳು +ಹಿಂದಣ
ಹಳಿವ +ತೊಳೆ +ಹೇರಾಳ +ಬಾಂಧವ
ಬಳಗ+ ಭೂಮೀಶ್ವರರ +ಬಹಳ+ಅಕ್ಷೋಹಿಣೀ+ದಳವ
ಅಳಿದ+ ಕೀರ್ತಿಯ +ಕೆಸರ +ತೊಳೆ +ಭೂ
ವಳಯ+ಮಾನ್ಯನು +ದೈನ್ಯ+ವೃತ್ತಿಯ
ಬಳಸುವರೆ +ಸುಡು +ಮರುಳೆ +ಕುರುಪತಿ +ಕೈದುಗೊಳ್ಳೆಂದ

ಅಚ್ಚರಿ:
(೧) ಹಿಂದಣ ಹಳಿವ ತೊಳೆ, ಅಳಿದ ಕೀರ್ತಿಯ ಕೆಸರ ತೊಳೆ – ತೊಳೆ ಪದದ ಬಳಕೆ
(೨) ಲೋಕ ನೀತಿ – ಭೂವಳಯಮಾನ್ಯನು ದೈನ್ಯವೃತ್ತಿಯ ಬಳಸುವರೆ

ಪದ್ಯ ೫೯: ದ್ರೌಪದಿಯು ಹೇಗೆ ಕುಳಿತುಕೊಂಡಳು?

ಭಾವನವರರ್ತಿಯಲಿ ಜಲಕೇ
ಳೀವಿನೋದಕೆ ಬಂದು ಗಂಧ
ರ್ವಾವಳಿಯ ಕೇಳಿಯಲಿ ಚಿತ್ತೈಸಿದರಲಾಯೆನುತ
ದೇವಿಯರು ನಸುನಗುತ ಚಿತ್ತದ
ಚಾವಡಿಯಲೋಲೈಸಿಕೊಂಡರು
ಭೂವಳಯದೇಕಾಧಿಪತ್ಯದ ಸೌಖ್ಯ ಸಂಪದವ (ಅರಣ್ಯ ಪರ್ವ, ೨೦ ಸಂಧಿ, ೫೯ ಪದ್ಯ)

ತಾತ್ಪರ್ಯ:
ಕೌರವರ ಪರಾಭವವನ್ನು ಕೇಳಿದ ದ್ರೌಪದಿಯು, ಭಾವನವರು ಜಲಕ್ರೀಡೆಯ ವಿನೋದವನ್ನು ಸವೆಯಲು ಬಂದು, ಇಲ್ಲಿ ಗಂಧರ್ವರ ಕ್ರೀಡೆಯಲ್ಲಿ ದಯಮಾಡಿಸಿದರು ಎಂದು ನಸುನಕ್ಕು ಮನದ ಓಲಗದಲ್ಲಿ ಏಕಚಕ್ರಾಧಿಪತ್ಯದ ಪದವಿಯಲ್ಲಿ ಕುಳಿತುಕೊಂಡಳು.

ಅರ್ಥ:
ಭಾವ: ಗಂಡನ ಅಣ್ಣ; ಅರ್ತಿ: ಸಂತೋಷ; ಜಲಕೇಳಿ: ಜಲಕ್ರೀಡೆ; ವಿನೋದ: ವಿಹಾರ, ಸಂತಸ; ಆವಳಿ: ಸಾಲು, ಗುಂಪು; ಕೇಳಿ: ವಿನೋದ, ಕ್ರೀಡೆ; ಚಿತ್ತೈಸು: ಬೇಡಿಕೊಳ್ಳು; ದೇವಿ: ಸ್ತ್ರಿ: ನಗು: ಸಂತಸ; ಚಿತ್ತ: ಮನಸ್ಸು; ಚಾವಡಿ: ಸಭಾಸ್ಥಾನ; ಓಲೈಸು: ಸೇವೆಮಾಡು, ಉಪಚರಿಸು; ಭೂವಳಯ: ಜಗತ್ತು, ಭೂಮಂಡಲ; ಏಕಾಧಿಪತ್ಯ: ಒಬ್ಬನ ಆಳ್ವಿಕೆ; ಸೌಖ್ಯ: ಸುಖ, ನೆಮ್ಮದಿ; ಸಂಪದ: ಐಶ್ವರ್ಯ, ಸಂಪತ್ತು;

ಪದವಿಂಗಡಣೆ:
ಭಾವನವರ್+ಅರ್ತಿಯಲಿ +ಜಲಕೇ
ಳೀ+ವಿನೋದಕೆ+ ಬಂದು +ಗಂಧರ್ವ
ಆವಳಿಯ+ ಕೇಳಿಯಲಿ+ ಚಿತ್ತೈಸಿದರಲಾ+ಎನುತ
ದೇವಿಯರು +ನಸುನಗುತ +ಚಿತ್ತದ
ಚಾವಡಿಯಲ್+ಓಲೈಸಿಕೊಂಡರು
ಭೂವಳಯದ್+ಏಕಾಧಿಪತ್ಯದ+ ಸೌಖ್ಯ +ಸಂಪದವ

ಅಚ್ಚರಿ:
(೧) ಮನಸ್ಸಿನಲ್ಲಿ ಸಂತೋಷಪಟ್ಟಲು ಎಂದು ಹೇಳುವ ಪರಿ – ದೇವಿಯರು ನಸುನಗುತ ಚಿತ್ತದ
ಚಾವಡಿಯಲೋಲೈಸಿಕೊಂಡರು ಭೂವಳಯದೇಕಾಧಿಪತ್ಯದ ಸೌಖ್ಯ ಸಂಪದವ

ಪದ್ಯ ೭೪: ಯಾರು ಸ್ವರ್ಗಕ್ಕೆ ಪ್ರಯಾಣವನ್ನು ಮಾಡುತ್ತಾರೆ?

ಈ ವಿಮಾನದ ಸಾಲ ಸಂದಣಿ
ತೀವಿಕೊಂಡಿದೆ ಗಗನತಳದಲಿ
ದೇವಕನ್ಯಾ ಶತ ಸಹಸ್ರದ ಖೇಳ ಮೇಳದಲಿ
ಭೂವಳಯದಲಿ ಸುಕೃತಿಗಳು ನಾ
ನಾ ವಿಧದ ಜಪ ಯಜ್ಞದಾನ ತ
ಪೋವಿಧಾನದಲೊದಗಿದವರನು ಪಾರ್ಥ ನೋಡೆಂದ (ಅರಣ್ಯ ಪರ್ವ, ೮ ಸಂಧಿ, ೭೪ ಪದ್ಯ)

ತಾತ್ಪರ್ಯ:
ಆಕಾಶದಲ್ಲಿ ಸಾಲಾಗಿ ಸೇರಿದ ವಿಮಾನಗಳು ಲಕ್ಷ ಸಂಖ್ಯೆಯ ಅಪ್ಸರ ಸ್ತ್ರೀಯರ ವಿನೋದ ಗೋಷ್ಠಿಯೊಡನೆ ಕಾದಿವೆ. ಭೂಮಂಡಲದಲ್ಲಿ ಜಪ, ತಪ, ಯಜ್ಞ, ದಾನ, ತಪಸ್ಸುಗಳನ್ನು ಮಾಡಿದ ಪುಣ್ಯವಂತರು ಸ್ವರ್ಗಕ್ಕೆ ಈ ಅಪ್ಸರೆಯರೊಡನೆ ಪ್ರಯಾಣ ಬೆಳೆಸಿದ್ದಾರೆ.

ಅರ್ಥ:
ವಿಮಾನ: ವಾಯು ಮಾರ್ಗದಲ್ಲಿ ಸಂಚರಿಸುವ ವಾಹನ; ಸಾಲ: ಸಾಲು, ಪಂಕ್ತಿ; ಸಂದಣಿ: ಗುಂಪು; ತೀವು: ತುಂಬು, ಭರ್ತಿಮಾಡು; ಗಗನ: ಆಗಸ; ದೇವಕನ್ಯೆ: ಅಪ್ಸರೆ; ಶತ: ನೂರು; ಸಹಸ್ರ: ಸಾವಿರ; ಖೇಳ: ಆಟ; ಮೇಳ: ಗುಂಪು; ಭೂವಳಯ: ಭೂಮಿ; ಸುಕೃತಿ: ಒಳ್ಳೆಯ ರಚನೆ; ವಿಧ: ರೀತಿ; ಜಪ: ತಪ; ಯಜ್ಞ: ಯಾಗ; ದಾನ: ಚತುರೋಪಾಯಗಳಲ್ಲಿ ಒಂದು; ವಿಧಾನ: ರೀತಿ; ಒದಗು: ಲಭ್ಯ, ದೊರೆತುದು; ನೋಡು: ವೀಕ್ಷಿಸು;

ಪದವಿಂಗಡಣೆ:
ಈ +ವಿಮಾನದ +ಸಾಲ +ಸಂದಣಿ
ತೀವಿಕೊಂಡಿದೆ +ಗಗನತಳದಲಿ
ದೇವಕನ್ಯಾ +ಶತ+ ಸಹಸ್ರದ +ಖೇಳ +ಮೇಳದಲಿ
ಭೂವಳಯದಲಿ +ಸುಕೃತಿಗಳು +ನಾ
ನಾ +ವಿಧದ +ಜಪ +ಯಜ್ಞ+ದಾನ +ತ
ಪೋ+ವಿಧಾನದಲ್+ಒದಗಿದವರನು +ಪಾರ್ಥ +ನೋಡೆಂದ

ಅಚ್ಚರಿ:
(೧) ಅಪ್ಸರೆ ಎಂದು ಹೇಳಲು ದೇವಕನ್ಯಾ ಪದದ ಬಳಕೆ
(೨) ಗಗನತಳ, ಭೂವಳಯ – ಸ್ವರ್ಗ, ಭೂಮಿಯನ್ನು ಸೂಚಿಸುವ ಪದಗಳು