ಪದ್ಯ ೩೦: ದುರ್ಯೋಧನನ ತನ್ನ ಪರಾಕ್ರಮವನ್ನು ಹೇಗೆ ಹೊಗಳಿಕೊಂಡನು?

ನರನ ಬಸುರಲಿ ಕರ್ಣನನು ಭೂ
ವರನ ಸೀಳಿದು ಶಲ್ಯನನು ಕಾ
ತರಿಸದಿರು ಶಕುನಿಯನುಳೂಕನ ಯಮಳರಿಬ್ಬರಲಿ
ಹರಿಬಕಿದಿರಾಗಲಿ ಮುರಾಂತಕ
ಹರಹಿಕೊಳಲಿ ಮದೀಯಬಾಹು
ಸ್ಫುರಣಶಕ್ತಿಗೆ ಭಂಗಬಾರದು ನೋಡು ನೀನೆಂದ (ಗದಾ ಪರ್ವ, ೩ ಸಂಧಿ, ೩೦ ಪದ್ಯ)

ತಾತ್ಪರ್ಯ:
ದುರ್ಯೋಧನನು ನುಡಿಯುತ್ತಾ, ಎಲೈ ಸಂಜಯ ನೋಡುತ್ತಿರು, ನಾನು ಅರ್ಜುನನ ಹೊಟ್ಟೆಯಿಂದ ಕರ್ಣನನ್ನು, ಧರ್ಮಜನನ್ನು ಸೀಳಿ ಶಲ್ಯನನ್ನು, ನಕುಲ ಸಹದೇವರಿಬ್ಬರಿಂದ ಶಕುನಿ ಉಲೂಕರನ್ನು ತೆಗೆಯುತ್ತೇನೆ. ಕೃಷ್ಣನೇ ಎದುರಾಗಿ ಪಾಂಡವರನ್ನು ರಕ್ಷಿಸಿದರೂ, ನನ್ನ ತೋಳ್ಬಲಕ್ಕೆ ಭಂಗ ಬರುವುದಿಲ್ಲ; ನೋಡು: ವೀಕ್ಷಿಸು;

ಅರ್ಥ:
ನರ: ಅರ್ಜುನ; ಬಸುರು: ಹೊಟ್ಟೆ; ಭೂವರ: ರಾಜ; ಸೀಳು: ಕತ್ತರಿಸು; ಕಾತರ: ಕಳವಳ; ಯಮಳ: ನಕುಲ ಸಹದೇವ; ಹರಿಬ: ಕೆಲಸ, ಕಾರ್ಯ; ಇದಿರು: ಎದುರು; ಮುರಾಂತಕ: ಕೃಷ್ಣ; ಹರಹು: ವಿಸ್ತಾರ, ವೈಶಾಲ್ಯ;ಮದೀಯ: ನನ್ನ; ಬಾಹು: ಭುಜ, ತೋಳು; ಸ್ಫುರಣ: ಹೊಳೆ, ಕಂಪನ; ಶಕ್ತಿ: ಬಲ; ಭಂಗ: ಮುರಿ, ಚೂರುಮಾಡು; ನೋಡು: ವೀಕ್ಷಿಸು;

ಪದವಿಂಗಡಣೆ:
ನರನ +ಬಸುರಲಿ +ಕರ್ಣನನು +ಭೂ
ವರನ +ಸೀಳಿದು +ಶಲ್ಯನನು +ಕಾ
ತರಿಸದಿರು +ಶಕುನಿಯನ್+ಉಳೂಕನ +ಯಮಳರ್+ಇಬ್ಬರಲಿ
ಹರಿಬಕ್+ಇದಿರಾಗಲಿ +ಮುರಾಂತಕ
ಹರಹಿಕೊಳಲಿ +ಮದೀಯ+ಬಾಹು
ಸ್ಫುರಣಶಕ್ತಿಗೆ+ ಭಂಗಬಾರದು+ ನೋಡು +ನೀನೆಂದ

ಅಚ್ಚರಿ:
(೧) ನರನ, ಭೂವರನ – ಪ್ರಾಸ ಪದ
(೨) ದುರ್ಯೋಧನನ ಶಕ್ತಿಯ ವಿವರ – ಮದೀಯಬಾಹು ಸ್ಫುರಣಶಕ್ತಿಗೆ ಭಂಗಬಾರದು