ಪದ್ಯ ೩೬: ಧರ್ಮಜನು ಭೀಮನನ್ನು ಹುಡುಕಿಕೊಂಡು ಎಲ್ಲಿಗೆ ಹೋದನು?

ಭೀಮನಾವೆಡೆಯೆನೆ ಕಿರಾತ
ಸ್ತೋಮ ಸಹಿತ ಮೃಗವ್ಯಕೇಳೀ
ಕಾಮನೈದಿದನೆನಲು ನೃಪಹೊರವಂಟನಾ ಕ್ಷಣಕೆ
ಭೂಮಿಸುರರೊಡನೈದಿಬರೆ ಸಂ
ಗ್ರಾಮಧೀರನ ಹೆಜ್ಜೆವಿಡಿದು ಮ
ಹೀಮನೋಹರನರಸಿಹೊಕ್ಕನು ಘೋರಕಾನನವ (ಅರಣ್ಯ ಪರ್ವ, ೧೪ ಸಂಧಿ, ೩೬ ಪದ್ಯ)

ತಾತ್ಪರ್ಯ:
ಧರ್ಮಜನು ಭೀಮನೆಲ್ಲಿದ್ದಾನೆ ಎಂದು ಕೇಳಲು, ಬೇಟೆಗಾಗಿ ಬೇಡರೊಡನೆ ಹೋಗಿದ್ದಾನೆ ಎಂದು ಉಳಿದವರು ಹೇಳಲು, ಧರ್ಮಜನು ಕಾರ್ಯಪ್ರವೃತ್ತನಾಗಿ ಕೆಲ ಬ್ರಾಹ್ಮಣರೊಡನೆ ಹೊರಟು, ಭೀಮನ ಹೆಜ್ಜೆಗಳಿಂದ ಅವನ ದಾರಿಯನ್ನು ಹಿಡಿದು ನಡೆದು ಘೋರವಾದ ಅರಣ್ಯವನ್ನು ಪ್ರವೇಶಿಸಿದನು.

ಅರ್ಥ:
ಆವೆಡೆ: ಎಲ್ಲಿ,ಯಾವ ಕಡೆ; ಕಿರಾತ: ಬೇಡ; ಸ್ತೋಮ: ಗುಂಪು; ಸಹಿತ: ಜೊತೆ; ಮೃಗ: ಪ್ರಾಣಿ; ಮೃಗವ್ಯ: ಬೇಟೆ; ಕೇಳು: ಆಲಿಸು; ಕಾಮ: ಆಸೆ; ಐದು: ಬಂದು ಸೇರು; ನೃಪ: ರಾಜ; ಹೊರವಂಟ: ತೆರಳು; ಕ್ಷಣಕೆ: ತಕ್ಷಣ; ಭೂಮಿಸುರ: ಬ್ರಾಹ್ಮಣ; ಸಂಗ್ರಾಮ: ಯುದ್ಧ; ಧೀರ: ಪರಾಕ್ರಮಿ; ಹೆಜ್ಜೆ: ಪಾದ; ಮಹೀಮನೋಹರ: ರಾಜ; ಮಹೀ: ಭೂಮಿ; ಮನೋಹರ: ಸೊಗಸಾದುದು; ಅರಸಿ: ಹುಡುಕು; ಹೊಕ್ಕು: ಸೇರು; ಘೋರ: ಭಯಂಕರವಾದ; ಕಾನನ: ಕಾಡು;

ಪದವಿಂಗಡಣೆ:
ಭೀಮನ್+ಆವೆಡೆ+ಎನೆ +ಕಿರಾತ
ಸ್ತೋಮ +ಸಹಿತ ಮೃಗವ್ಯಕೇಳೀ
ಕಾಮನೈದಿದನ್+ಎನಲು +ನೃಪಹೊರವಂಟನಾ +ಕ್ಷಣಕೆ
ಭೂಮಿಸುರರೊಡನ್+ಐದಿಬರೆ+ ಸಂ
ಗ್ರಾಮ+ಧೀರನ+ ಹೆಜ್ಜೆವಿಡಿದು +ಮ
ಹೀಮನೋಹರನ್+ಅರಸಿ+ಹೊಕ್ಕನು +ಘೋರ+ಕಾನನವ

ಅಚ್ಚರಿ:
(೧) ಧರ್ಮಜನನ್ನು ಮಹೀಮನೋಹರ, ಭೀಮನನ್ನು ಸಂಗ್ರಾಮಧೀರ ಎಂದು ಕರೆದಿರುವುದು