ನರಕಿಯಾವನು ಸುಜನರಲಿ ಬಾ
ಹಿರನದಾವನು ಲೋಕವರಿಯಲು
ಹರಣವಿರೆ ಹೊಂದಿದನದಾವನು ಭೂಮಿಪಾಲರಲಿ
ಮರುಳದಾವನು ಮಾನಭಂಗದಿ
ಭರಿತನಾವನು ಹೇಳು ಧರ್ಮಜ
ಸರಸಿಯಲಿ ಬಳಿಕುದಕವನು ಕುಡಿಯೆಂದನಾ ಖಚರ (ಅರಣ್ಯ ಪರ್ವ, ೨೬ ಸಂಧಿ, ೪೩ ಪದ್ಯ)
ತಾತ್ಪರ್ಯ:
ಯಕ್ಷನು ತನ್ನ ಪ್ರಶ್ನೆಗಳನ್ನು ಮುಂದುವರೆಸುತ್ತಾ, ಯಾರು ನರಕಕ್ಕೆ ಹೋಗುತ್ತಾನೆ, ಸಜ್ಜನರಲ್ಲಿ ಯಾರು ಬಾಹಿರರು? ಜೀವವಿದ್ದರೂ ಯಾವ ರಾಜನು ಸತ್ತವನಾಗುತ್ತಾನೆ? ಯಾರು ಮರುಳ? ಯಾರು ಅಭಿಮಾನವನ್ನು ಕಳೆದುಕೊಂಡವನು? ಉತ್ತರವನ್ನು ಹೇಳಿ ಆನಂತರ ನೀರನ್ನು ಕುಡಿ ಎಂದು ಯಕ್ಷನು ಹೇಳಿದನು.
ಅರ್ಥ:
ನರಕಿ: ನರಕವಾಸಿ; ನರಕ: ಅಧೋ ಲೋಕ; ಸುಜನ: ಸಜ್ಜನ; ಬಾಹಿರ: ಹೊರಗಿನವ; ಲೋಕ: ಜಗತ್ತು; ಅರಿ: ತಿಳಿ; ಹರಣ: ಜೀವ, ಪ್ರಾಣ; ಭೂಮಿಪಾಲ; ರಾಜ; ಮರುಳ: ತಿಳಿಗೇಡಿ, ದಡ್ಡ; ಭಂಗ: ನಾಶ; ಮಾನ: ಗೌರವ, ಮರ್ಯಾದೆ; ಭರಿತ: ಕೂಡಿದ; ಹೇಳು: ತಿಳಿಸು; ಸರಸಿ: ಸರೋವರ; ಬಳಿಕ: ನಂತರ; ಉದಕ: ನೀರು; ಕುಡಿ: ಪಾನಮಾಡು; ಖಚರ: ಗಂಧರ್ವ, ಯಕ್ಷ;
ಪದವಿಂಗಡಣೆ:
ನರಕಿ+ಆವನು +ಸುಜನರಲಿ +ಬಾ
ಹಿರನದ್+ಆವನು +ಲೋಕವ್+ಅರಿಯಲು
ಹರಣವಿರೆ+ ಹೊಂದಿದನದ್+ಆವನು+ ಭೂಮಿಪಾಲರಲಿ
ಮರುಳದ್+ಆವನು+ ಮಾನ+ಭಂಗದಿ
ಭರಿತನ್+ಆವನು +ಹೇಳು +ಧರ್ಮಜ
ಸರಸಿಯಲಿ +ಬಳಿಕ್+ಉದಕವನು +ಕುಡಿ+ಎಂದನಾ +ಖಚರ
ಅಚ್ಚರಿ:
(೧) ಆವನು – ೫ ಬಾರಿ ಪ್ರಯೋಗ