ಪದ್ಯ ೬೦: ಭೂಮಿಯು ಹೇಗೆ ಶೋಭಿಸುತ್ತದೆ?

ಉರಗ ನಾಳಾಂಬುಜ ಕುಸುಮವೀ
ಧರಣಿ ಕರ್ಣಿಕೆ ಮೇರುಗಿರಿ ಕೇ
ಸರ ನಗಂಗಳು ಬಳಸಿ ಕೇಸರದಂತೆ ಸೊಗಯಿಪವು
ಸರಸಿರುಹಸಂಭವನು ಮಧ್ಯದೊ
ಳಿರಲು ಭೂತಲವೈದೆ ಮೆರೆವುದು
ಸಿರಿ ಮಹಾವಿಷ್ಣುವಿನ ನಾಭೀಕಮಲದಂದದಲಿ (ಅರಣ್ಯ ಪರ್ವ, ೮ ಸಂಧಿ, ೬೦ ಪದ್ಯ)

ತಾತ್ಪರ್ಯ:
ಆದಿಶೇಷವು (ಹಾವು) ನಾಳವಾಗಿ, ಈ ಭೂಮಿಯು ಮಹಾವಿಷ್ಣುವಿನ ನಾಭೀಕಮಲದಂತಿದೆ. ಭೂಮಿಯು ಕರ್ಣಿಕೆ, ಇದನ್ನು ಸುತ್ತಿರುವ ಪರ್ವತಗಳೇ ಕುಸುರು. ಬ್ರಹ್ಮನು ಮಧ್ಯದಲ್ಲಿರಲು ಭೂಮಿಯು ವಿಷ್ಣುವಿನ ನಾಭೀಕಮಲದಂತಿದೆ.

ಅರ್ಥ:
ಉರಗ: ಹಾವು; ನಾಳ: ಟೊಳ್ಳಾದ ಕೊಳವೆ, ನಳಿಕೆ; ಅಂಬುಜ: ತಾವರೆ; ಕುಸುಮ: ಹೂವು; ಧರಣಿ: ಭೂಮಿ; ಕರ್ಣಿಕೆ: ಮಲದ ಮಧ್ಯ ಭಾಗ, ಬೀಜಕೋಶ; ಮೇರುಗಿರಿ: ಮೇರು ಪರ್ವತ; ಕೇಸರ: ಹೂವಿನಲ್ಲಿರುವ ಕುಸುರು, ಎಳೆ; ನಗ: ಬೆಟ್ಟ, ಪರ್ವತ; ಬಳಸು: ಆವರಿಸು; ಸೊಗ: ಚೆಲುವು; ಸರಸಿರುಹ: ಕಮಲ; ಸರಸಿರುಹಸಂಭವ: ಬ್ರಹ್ಮ; ಮಧ್ಯ: ನಡುವೆ; ಭೂತಲ: ಭೂಮಿ; ಐದೆ: ಸೇರು; ಮೆರೆ: ಶೋಭಿಸು; ಸಿರಿ: ಐಶ್ವರ್ಯ; ನಾಭಿ: ಹೊಕ್ಕಳು; ಕಮಲ: ತಾವರೆ;

ಪದವಿಂಗಡಣೆ:
ಉರಗ +ನಾಳ+ಅಂಬುಜ +ಕುಸುಮವ್+ಈ+
ಧರಣಿ +ಕರ್ಣಿಕೆ +ಮೇರುಗಿರಿ+ ಕೇ
ಸರ +ನಗಂಗಳು+ ಬಳಸಿ+ ಕೇಸರದಂತೆ +ಸೊಗಯಿಪವು
ಸರಸಿರುಹಸಂಭವನು+ ಮಧ್ಯದೊಳ್
ಇರಲು +ಭೂತಲವ್+ಐದೆ+ ಮೆರೆವುದು
ಸಿರಿ+ ಮಹಾವಿಷ್ಣುವಿನ+ ನಾಭೀ+ಕಮಲದಂದದಲಿ

ಅಚ್ಚರಿ:
(೧) ಅಂಬುಜ, ಕಮಲ, ಸರಸಿರುಹ – ಸಮನಾರ್ಥಕ ಪದ