ಪದ್ಯ ೩೧: ಆಂಜನೇಯನು ಏನು ಹೇಳಿದನು?

ಲಲಿತ ವಚನಕೆ ನಿನ್ನ ಭುಜದ
ಗ್ಗಳಿಕೆಗಾ ಮೆಚ್ಚಿದೆನು ಹಿಮಕರ
ಕುಲ ಪವಿತ್ರರು ಜನಿಸಿದಿರಲಾ ಪಾಂಡು ಜಠರದಲಿ
ಗೆಲವು ನಿಮಗಹಿತರಲಿ ಪಾರ್ಥನ
ಕೆಲವು ದಿವಸಕೆ ಕಾಂಬಿರೆಮಗೆಯು
ಫಲಿಸಿತೀದಿನವೆಂದು ಕೊಂಡಾಡಿದನು ಹನುಮಂತ (ಅರಣ್ಯ ಪರ್ವ, ೧೧ ಸಂಧಿ, ೩೧ ಪದ್ಯ)

ತಾತ್ಪರ್ಯ:
ನಿನ್ನ ಸುಂದರವಾದ ವಿನಯ ವಚನಗಳಿಗೆ, ಬಾಹುಬಲಕ್ಕೂ ನಾನು ಪ್ರಸನ್ನನಾಗಿದ್ದೇನೆ. ವಿಮಲವಾದ ಚಂದ್ರವಂಶದಲ್ಲಿ ಪಾಂಡುರಾಜನ ಮಕ್ಕಳಾಗಿ ಹುಟ್ಟಿದ ನೀವೈವರು ಚಂದ್ರವಂಶವನ್ನು ಪಾವನಗೊಳಿಸಿರುವಿರಿ, ನೀವು ಶತ್ರುಗಳನ್ನು ಜಯಿಸುವಿರಿ, ಕೆಲವೇ ದಿನಗಳಲ್ಲಿ ಅರ್ಜುನನನ್ನೂ ನೋಡುವಿರಿ, ನಮಗೂ ಇದು ಸುದಿನ ಸತ್ಫಲವನ್ನು ಕೊಟ್ಟಿದೆ ಎಂದು ಹನುಮಂತನು ಕೊಂಡಾಡಿದನು.

ಅರ್ಥ:
ಲಲಿತ: ಸುಂದರ; ವಚನ: ಮಾತು, ನುಡಿ; ಭುಜ: ಬಾಹು, ಬಲ; ಅಗ್ಗಳಿಕೆ: ಶ್ರೇಷ್ಠ; ಮೆಚ್ಚು: ಪ್ರಶಂಶಿಸು; ಹಿಮಕರ: ಚಂದ್ರ; ಕುಲ: ವಂಶ; ಪವಿತ್ರ: ಶುದ್ಧ; ಜನಿಸು: ಹುಟ್ಟು; ಜಠರ: ಹೊಟ್ಟೆ; ಗೆಲುವು: ಜಯ; ಅಹಿತ: ವೈರಿ; ಕೆಲವು: ಸ್ವಲ್ಪ; ದಿವಸ: ದಿನ; ಕಾಂಬಿರಿ: ಕಾಣುವಿರಿ; ಫಲಿಸು: ದೊರೆತುದು; ಕೊಂಡಾಡು: ಪ್ರಶಂಶಿಸು;

ಪದವಿಂಗಡನೆ:
ಲಲಿತ +ವಚನಕೆ +ನಿನ್ನ +ಭುಜದ್
ಅಗ್ಗಳಿಕೆಗಾ+ ಮೆಚ್ಚಿದೆನು+ ಹಿಮಕರ
ಕುಲ +ಪವಿತ್ರರು +ಜನಿಸಿದಿರಲಾ+ ಪಾಂಡು +ಜಠರದಲಿ
ಗೆಲವು +ನಿಮಗ್+ಅಹಿತರಲಿ +ಪಾರ್ಥನ
ಕೆಲವು +ದಿವಸಕೆ+ ಕಾಂಬಿರ್+ಎಮಗೆಯು
ಫಲಿಸಿತ್+ಈದಿನವ್+ಎಂದು +ಕೊಂಡಾಡಿದನು +ಹನುಮಂತ

ಅಚ್ಚರಿ:
(೧) ಭೀಮನನ್ನು ಹೊಗಳಿದ ಪರಿ – ಲಲಿತ ವಚನಕೆ ನಿನ್ನ ಭುಜದಗ್ಗಳಿಕೆಗಾ ಮೆಚ್ಚಿದೆನು ಹಿಮಕರ
ಕುಲ ಪವಿತ್ರರು ಜನಿಸಿದಿರಲಾ ಪಾಂಡು ಜಠರದಲಿ