ಪದ್ಯ ೪೪: ನರಸಿಂಹನು ಹಿರಣ್ಯಕಶಿಪುವನ್ನು ಹೇಗೆ ಸಂಹರಿಸಿದನು?

ಉಗುರೊಳಸುರನ ಕರುಳ ದಂಡೆಯ
ನುಗಿದು ಕೊರಳಲಿ ಹಾಯ್ಕಿ ದೈತ್ಯನ
ಮಗನ ಪತಿಕರಿಸಿದನು ತತ್ರೋಧಾಗ್ನಿ ಪಲ್ಲವಿಸಿ
ಭುಗಿ ಭುಗಿಲ್ ಭುಗಿಲೆಂದು ಕಬ್ಬೊಗೆ
ನೆಗೆಯಲುರಿ ಹೊಡೆದಬುಜಜಾಂಡದ
ಬಗರಗೆಯ ಭೇದಿಸಿತು ಈತನ ಕೆಣಕಬೇಡೆಂದ (ಸಭಾ ಪರ್ವ, ೧೦ ಸಂಧಿ, ೪೪ ಪದ್ಯ)

ತಾತ್ಪರ್ಯ:
ನರಸಿಂಹನು ತನ್ನ ಉಗುರುಗಳಿಂದ ಹಿರಣ್ಯಕಶಿಪುವಿನ ಕರುಳ ದಂಡೆಯನ್ನು ಕಿತ್ತು ಕೊರಳಲ್ಲಿ ಹಾಕಿಕೊಂಡನು. ಅವನ ಮಗನಾದ ಪ್ರಹ್ಲಾದನನ್ನು ಕೃಪೆದೋರಿ ಸಲಹಿದನು. ಅವನ ಕೋಪಾಗ್ನಿಯು ಭುಗಿಲೆಂದು ಕಪ್ಪು ಹೊಗೆಯೂ ಉರಿಯೂ ಎದ್ದು ಬ್ರಹ್ಮಾಂಡವನ್ನೇ ಒಂದು ಕಿಕ್ಕಕುಳಿಯಾಗಿಸಿ ಭೇದಿಸಿತು, ಎಲೆ ಶಿಶುಪಾಲ ಶ್ರೀಕೃಷ್ಣನನ್ನು ಕೆಣಕಬೇಡ ಎಂದು ಭೀಷ್ಮರು ಹೇಳಿದರು.

ಅರ್ಥ:
ಉಗುರು: ನಖ; ಅಸುರ: ರಾಕ್ಷಸ; ಕರುಳು: ಪಚನಾಂಗ; ದಂಡೆ: ಹಾರ, ಸರ; ಉಗಿ: ಹೊರಹಾಕು; ಕೊರಳು: ಕುತ್ತಿಗೆ; ಹಾಯ್ಕಿ: ಹಾಕು, ತೊಡು; ದೈತ್ಯ: ರಾಕ್ಷಸ; ಮಗ: ಸುತ; ಪತಿಕರಿಸು: ದಯೆತೋರು, ಅನುಗ್ರಹಿಸು; ಅಗ್ನಿ: ಬೆಂಕಿ; ಪಲ್ಲವಿಸು: ವಿಕಸಿಸು; ಭುಗಿ: ಬೆಂಕಿಯು ಉರಿಯುವ ಬಗೆ; ಕಬ್ಬೊಗೆ: ಕರಿಯಾದ ಹೊಗೆ; ನೆಗೆ: ಚಿಮ್ಮು; ಉರಿ: ಬೆಂಕಿ; ಹೊಡೆ: ಏಟು, ಹೊಡೆತ; ಅಬುಜ: ಕಮಲ; ಅಬುಜಜಾಂಡ: ಬ್ರಹ್ಮಾಂಡ; ಬಗರು: ಕೆರೆ, ಗೆಬರು; ಭೇದಿಸು: ಸೀಳು; ಕೆಣಕು: ರೇಗಿಸು, ಪ್ರಚೋದಿಸು;

ಪದವಿಂಗಡಣೆ:
ಉಗುರೊಳ್+ಅಸುರನ +ಕರುಳ +ದಂಡೆಯನ್
ಉಗಿದು +ಕೊರಳಲಿ +ಹಾಯ್ಕಿ +ದೈತ್ಯನ
ಮಗನ+ ಪತಿಕರಿಸಿದನು+ ತತ್ರೋಧಾಗ್ನಿ+ ಪಲ್ಲವಿಸಿ
ಭುಗಿ +ಭುಗಿಲ್+ ಭುಗಿಲೆಂದು+ ಕಬ್ಬೊಗೆ
ನೆಗೆಯಲ್+ಉರಿ +ಹೊಡೆದ್+ಅಬುಜಜಾಂಡದ
ಬಗರಗೆಯ+ ಭೇದಿಸಿತು+ ಈತನ +ಕೆಣಕಬೇಡೆಂದ

ಅಚ್ಚರಿ:
(೧) ಬೆಂಕಿಯ ವರ್ಣನೆ – ಭುಗಿ ಭುಗಿಲ್ ಭುಗಿಲೆಂದು ಕಬ್ಬೊಗೆ ನೆಗೆಯಲುರಿಹೊ ಡೆದಬುಜಜಾಂಡದ ಬಗರಗೆಯ ಭೇದಿಸಿತು
(೨) ದೈತ್ಯ, ಅಸುರ – ಸಮನಾರ್ಥಕ ಪದ