ಇಳೆಯೊಳದುಭುತವಿದು ಕೃತಾಂತನ
ಫಲಿತ ಶಾಳೀವನವ ಮುತ್ತಿದ
ಗಿಳಿಗಳೋ ಆಚಾರ್ಯನಂಬುಗಳೋ ಮಹಾದೇವ
ನಿಳಿನಿಳಿಲು ಭುಗಿಲೆಂಬ ಛಿಳಿಛಿಳಿ
ಛಿಳಿಛಿಟಿಲು ಭೋರೆಂಬ ಖಣಿಖಟಿ
ಖಳಿಲು ಖಳಿಲೆಂಬಂಬುಗಳ ದನಿ ತುಂಬಿತಂಬರವ (ದ್ರೋಣ ಪರ್ವ, ೧೮ ಸಂಧಿ, ೪ ಪದ್ಯ)
ತಾತ್ಪರ್ಯ:
ಯಮನ ಬೆಳೆ ಬಂದ ಗದ್ದೆಯನ್ನು ಮುತ್ತಿದ ಗಿಳಿಗಳೋ ದ್ರೋಣನ ಬಾಣಗಳೋ ಎಂದು ಹೇಳಲಾಗದು. ನಿಳಿ, ನಿಟಿಲು, ಭುಗಿಲ್, ಛಿಳಿ ಛಿಳಿ, ಛಿಟಿಲು, ಭೋರ್, ಖಣಿ ಖಟಿಲು ಖಳಿಲೆಂಬ ಬಾಣಗಳ ಸದ್ದು ಆಕಾಶದಲ್ಲೆಲ್ಲಾ ತುಂಬಿ ಮಹಾದ್ಭುತವನ್ನು ಮೂಡಿಸಿತು.
ಅರ್ಥ:
ಇಳೆ: ಭೂಮಿ; ಅದುಭುತ: ಆಶ್ಚರ್ಯ; ಕೃತಾಂತ: ಯಮ; ಫಲಿತ: ಹಣ್ಣಾದ; ಶಾಳೀವನ: ಬತ್ತದ ಗದ್ದೆ; ಮುತ್ತು: ಆವರಿಸು; ಗಿಳಿ: ಶುಕ; ಆಚಾರ್ಯ: ಗುರು; ಅಂಬು: ಬಾಣ; ಮಹಾದೇವ: ಶಿವ; ಅಂಬು: ಬಾಣ; ದನಿ: ಧ್ವನಿ, ಸದ್ದು; ತುಂಬು: ಆವರಿಸು; ಅಂಬರ: ಆಗಸ;
ಪದವಿಂಗಡಣೆ:
ಇಳೆಯೊಳ್+ಅದುಭುತವ್+ಇದು +ಕೃತಾಂತನ
ಫಲಿತ +ಶಾಳೀವನವ+ ಮುತ್ತಿದ
ಗಿಳಿಗಳೋ +ಆಚಾರ್ಯನ್+ಅಂಬುಗಳೋ +ಮಹಾದೇವ
ನಿಳಿನಿಳಿಲು +ಭುಗಿಲೆಂಬ +ಛಿಳಿ+ಛಿಳಿ
ಛಿಳಿ+ಛಿಟಿಲು +ಭೋರೆಂಬ +ಖಣಿ+ಖಟಿ
ಖಳಿಲು +ಖಳಿಲೆಂಬ್+ಅಂಬುಗಳ +ದನಿ +ತುಂಬಿತ್+ಅಂಬರವ
ಅಚ್ಚರಿ:
(೧) ಬಾಣಗಳ ಶಬ್ದವನ್ನು ವಿವರಿಸುವ ಪದಗಳು – ನಿಳಿನಿಳಿ, ಭುಗಿಲ್, ಛಿಳಿಛಿಳಿ, ಛಿಳಿಛಿಟಿಲು, ಭೋರ್, ಖಣಿಖಟಿ, ಖಳಿಲು, ಖಳಿ