ಬರಸು ಭಾಷೆಯನಿಂದು ಕರ್ಣನ
ಶಿರವುಳಿದು ತಾವರೆಯ ನಗೆ ಪೈ
ಸರಿಸಿದರೆ ಮೈಬೆಸುಗೆ ಬಿಟ್ಟರೆ ಜಕ್ಕವಕ್ಕಿಗಳ
ಇರುಳ ಬೀಜವನಿಂದು ನಭದಲಿ
ಹರಹಿದರೆ ಕಲಿ ಭೀಮನಯ್ಯನ
ಹರಹು ನಿಂದರೆ ಬಳಿಕ ನಿಮ್ಮಯ ತಮ್ಮನಲ್ಲೆಂದ (ಕರ್ಣ ಪರ್ವ, ೧೮ ಸಂಧಿ, ೬ ಪದ್ಯ)
ತಾತ್ಪರ್ಯ:
ಅರ್ಜುನನು ಧರ್ಮಜನಿಗೆ ಅತ್ಯಂತ ಉತ್ಸಾಹದಿಂದ, ರಾಜ ಇದನ್ನು ಬರೆದುಕೋ, ಕರ್ಣನ ತಲೆ ಉಳಿದುಕೊಂಡು, ಕಮಲಗಳು ಮುಚ್ಚಿದರೆ, ಚಕ್ರವಾಕ ಸಂತಸದಿಂದ ಸೇರುವುದನ್ನು ಬಿಟ್ಟರೆ, ರಾತ್ರಿಯು ಕತ್ತಲಿನ ಬೀಜವನ್ನು ಆಗಸದಲ್ಲಿ ಬಿತ್ತಿದರೆ, ಗಾಳಿ ನಿಂತರೆ ನಾನು ನಿಮ್ಮ ತಮ್ಮನೇ ಅಲ್ಲ ಎಂದು ನುಡಿದನು.
ಅರ್ಥ:
ಬರಸು: ಲಿಖಿತವಾಗಿಸು; ಭಾಷೆ: ಮಾತು, ಆಣೆ; ಶಿರ: ತಲೆ; ಉಳಿ: ಜೀವಿಸು, ಹೊರತಾಗು; ತಾವರೆ: ಕಮಲ; ನಗೆ: ಅರಳು, ಸಂತಸ; ಪೈಸರಿಸು: ಹಿಮ್ಮೆಟ್ಟು, ಹಿಂಜರಿ;ಮೈ: ತನು; ಬೆಸುಗೆ: ಪರಸ್ಪರ ಸೇರುವುದು, ಒಂದಾಗುವುದು; ಬಿಡು: ತ್ಯಜಿಸು; ಜಕ್ಕವಕ್ಕಿ: ಚಕ್ರವಾಕ ಪಕ್ಷಿ; ಇರುಳು: ರಾತ್ರಿ; ಬೀಜ:ಉತ್ಪತ್ತಿ ಸ್ಥಾನ, ಮೂಲ; ಹರಹು: ಹಬ್ಬುವಿಕೆ, ಪ್ರಸರ; ನಭ: ಆಗಸ; ಕಲಿ: ಶೂರ; ಅಯ್ಯ: ತಂದೆ; ನಿಂದರೆ: ನಿಲ್ಲು, ತಡೆ; ಬಳಿಕ: ನಂತರ; ತಮ್ಮ: ಸಹೋದರ;
ಪದವಿಂಗಡಣೆ:
ಬರಸು +ಭಾಷೆಯನ್+ಇಂದು +ಕರ್ಣನ
ಶಿರವುಳಿದು+ ತಾವರೆಯ +ನಗೆ +ಪೈ
ಸರಿಸಿದರೆ +ಮೈಬೆಸುಗೆ +ಬಿಟ್ಟರೆ +ಜಕ್ಕವಕ್ಕಿಗಳ
ಇರುಳ +ಬೀಜವನ್+ಇಂದು+ ನಭದಲಿ
ಹರಹಿದರೆ +ಕಲಿ +ಭೀಮನ್+ಅಯ್ಯನ
ಹರಹು +ನಿಂದರೆ +ಬಳಿಕ +ನಿಮ್ಮಯ +ತಮ್ಮನಲ್ಲೆಂದ
ಅಚ್ಚರಿ:
(೧) ಕಮಲ ಮುದುಡಿದರೆ ಎಂದು ಹೇಳಲು – ತಾವರೆಯ ನಗೆ ಪೈಸರಿಸಿದರೆ
(೨) ವಾಯು ಎಂದು ಹೇಳಲು – ಭೀಮನಯ್ಯನ ಹರಹು ಎಂದು ಬಳಸಿರುವುದು