ಅರಿಯಬಹುದೈ ಭಾವಮೈದುನ
ಮೆರೆ ಭುಜಾಟೋಪವನು ಹಿಂದಣ
ಕೊರತೆಯನು ಕಳೆ ಮಗನೆ ಬೊಪ್ಪಕುಲಕ್ರಮಾಗತವ
ಮರೆಯದಿರು ಮುಂಗಲಿತನಕೆ ತಾ
ಸಿರಿವೆ ನಾ ಮುನ್ನೆಂದು ತಮ್ಮೊಳು
ಜರೆದರೊಡವುಟ್ಟಿದರು ಬಾಂಧವ ಮಿತ್ರ ಭೂಮಿಪರು (ಗದಾ ಪರ್ವ, ೧ ಸಂಧಿ, ೨೭ ಪದ್ಯ)
ತಾತ್ಪರ್ಯ:
ಸೇನೆಯಲ್ಲಿದ್ದ ಬಂಧುಗಳು, ಸ್ನೇಹಿತರಾಗಿದ್ದ ರಾಜರು, ಭಾವಮೈದುನನೇ, ಈಗ ತಿಳಿಯುತ್ತದೆ, ನಿನ್ನ ಬಾಹುಬಲವನ್ನು ಮೆರೆ. ಹಿಂದಾದ ಸೋಲನ್ನು ತಿದ್ದಿಕೋ, ಮಗನೇ ನಿನ್ನ ತಂದೆ ಅಜ್ಜ ಮೊದಲಾದವರ ಕೀರ್ತಿಯನ್ನು ಮರೆಯಬೇಡ, ನಾನು ಮುನ್ನುಗ್ಗಿ ಯುದ್ಧಮಾಡುತ್ತೇನೆ, ನಿನಗಿಂತ ಮೊದಲು ನಾನು ಎಂದೆಲ್ಲಾ ಹೇಳುತ್ತಾ ಹೊರಟರು.
ಅರ್ಥ:
ಅರಿ: ತಿಳಿ; ಭಾವಮೈದುನ: ಗಂಡನ ಯಾ ಹೆಂಡತಿಯ ಸಹೋದರ; ಮೆರೆ: ಶೋಭಿಸು; ಭುಜಾಟೋಪ: ಪರಾಕ್ರಮ; ಹಿಂದಣ: ಹಿಂದಿನ; ಕೊರತೆ: ನ್ಯೂನ್ಯತೆ; ಕಳೆ: ನೀಗಿಸು; ಮಗ: ಪುತ್ರ; ಬೊಪ್ಪ: ತಂದೆ; ಕುಲ: ವಂಶ; ಕ್ರಮ: ನಡೆಯುವಿಕೆ; ಮರೆ: ನೆನಪಿನಿಂದ ದೂರಮಾಡು; ಕಲಿ: ಶೂರ; ಸಿರಿ: ಐಶ್ವರ್ಯ; ಮುನ್ನ: ಹಿಂದೆ ನಡೆದ; ಜರೆ: ಬಯ್ಯು; ಒಡವುಟ್ಟು: ಜೊತೆಯಲ್ಲಿ ಹುಟ್ಟಿದ; ಬಾಂಧವ: ಸಹೊದರ; ಮಿತ್ರ: ಸ್ನೇಹಿತ; ಭೂಮಿಪ: ರಾಜ;
ಪದವಿಂಗಡಣೆ:
ಅರಿಯಬಹುದೈ +ಭಾವಮೈದುನ
ಮೆರೆ +ಭುಜಾಟೋಪವನು +ಹಿಂದಣ
ಕೊರತೆಯನು +ಕಳೆ +ಮಗನೆ +ಬೊಪ್ಪ+ಕುಲ+ಕ್ರಮಾಗತವ
ಮರೆಯದಿರು +ಮುಂಗಲಿತನಕೆ +ತಾ
ಸಿರಿವೆ +ನಾ +ಮುನ್ನೆಂದು +ತಮ್ಮೊಳು
ಜರೆದರ್+ಒಡವುಟ್ಟಿದರು +ಬಾಂಧವ +ಮಿತ್ರ +ಭೂಮಿಪರು
ಅಚ್ಚರಿ:
(೧) ಪರಾಕ್ರಮಿ ಎಂದು ಹೇಳಲು – ಭುಜಾಟೋಪ ಪದದ ಬಳಕೆ