ಅತ್ರಿ ಭಾರಧ್ವಾಜ ವಿಶ್ವಾ
ಮಿತ್ರ ಗೌತಮ ಕಣ್ವ ಕಶ್ಯಪ
ಮಿತ್ರಸೂನು ವಸಿಷ್ಠ ಗಾರ್ಗಾಂಗಿರಸ ಭಾರ್ಗವರು
ಅತ್ರಿಸುತ ವರ ವಾಲಖಿಲ್ಯರು
ಚಿತ್ರಚರಿತರು ಬಂದರಲ್ಲಿಗೆ
ಮಿತ್ರಭಾವದಲವರನಭಿವಂದಿಸಿದನಾಚಾರ್ಯ (ದ್ರೋಣ ಪರ್ವ, ೧೮ ಸಂಧಿ, ೫೩ ಪದ್ಯ)
ತಾತ್ಪರ್ಯ:
ಪ್ರಸಿದ್ಧ ಮುನಿವರ್ಯರಾದ ಅತ್ರಿ, ಭಾರಧ್ವಾಜ, ವಿಶ್ವಾಮಿತ್ರ, ಗೌತಮ, ಕಣ್ವ, ಕಶ್ಯಪ, ವಸಿಷ್ಠ, ಗಾರ್ಗ್ಯ, ಅಂಗಿರಸ, ಪರಶುರಾಮ, ದುರ್ವಾಸ, ವಾಲಖಿಲ್ಯರು ದ್ರೋಣನ ಬಳಿಗೆ ಬರಲು, ಅವರನ್ನು ಕಂಡು ಸ್ನೇಹ ಭಾವದಿಂದ ದ್ರೋಣರು ಅವರಿಗೆ ನಮಸ್ಕರಿಸಿದರು.
ಅರ್ಥ:
ಸೂನು: ಮಗ; ಸುತ: ಮಗ; ವರ: ಶ್ರೇಷ್ಠ; ಚರಿತ: ಇತಿಹಾಸ; ಬಂದರು: ಆಗಮಿಸು; ಮಿತ್ರ: ಸ್ನೇಹ; ಭಾವ: ಭಾವನೆ; ಅಭಿವಂದಿಸು: ನಮಸ್ಕರಿಸು; ಆಚಾರ್ಯ: ಗುರು;
ಪದವಿಂಗಡಣೆ:
ಅತ್ರಿ +ಭಾರಧ್ವಾಜ +ವಿಶ್ವಾ
ಮಿತ್ರ +ಗೌತಮ +ಕಣ್ವ +ಕಶ್ಯಪ
ಮಿತ್ರಸೂನು +ವಸಿಷ್ಠ+ ಗಾರ್ಗ್ಯ+ಅಂಗಿರಸ +ಭಾರ್ಗವರು
ಅತ್ರಿಸುತ +ವರ+ ವಾಲಖಿಲ್ಯರು
ಚಿತ್ರ+ಚರಿತರು+ ಬಂದರಲ್ಲಿಗೆ
ಮಿತ್ರಭಾವದಲ್+ಅವರನ್+ಅಭಿವಂದಿಸಿದನ್+ಆಚಾರ್ಯ
ಅಚ್ಚರಿ:
(೧) ಸುತ, ಸೂನು – ಸಮಾನಾರ್ಥಕ ಪದ
(೨) ಕೊನೆಯ ಸಾಲು ಒಂದೇ ಪದವಾಗಿ ರಚಿತವಾದುದು