ಪದ್ಯ ೩೯: ಕೌರವರನ್ನು ಕೊಲ್ಲಿಸಲು ಯಾರು ಉಪಾಯ ಮಾಡಿದರೆಂದು ಕೌರವನು ಹೇಳಿದನು?

ಬಣಗುಗಳು ಭೀಮಾರ್ಜುನರು ಕಾ
ರಣಿಕ ನೀ ನಡುವಾಯಿ ಧರ್ಮದ
ಕಣಿ ಯುಧಿಷ್ಠಿರನೆತ್ತಬಲ್ಲನು ನಿನ್ನ ಮಾಯೆಗಳ
ಸೆಣಸನಿಕ್ಕಿದೆ ನಮ್ಮೊಳಗೆ ಧಾ
ರುಣಿಯ ಭಾರವ ಬಿಡಿಸಲೋಸುಗ
ರಣವ ಹೊತ್ತಿಸಿ ನಮ್ಮ ಬೇಂಟೆಯನಾಡಿಸಿದೆಯೆಂದ (ಗದಾ ಪರ್ವ, ೮ ಸಂಧಿ, ೩೯ ಪದ್ಯ)

ತಾತ್ಪರ್ಯ:
ಹೇ ಕೃಷ್ಣ, ಭೀಮಾರ್ಜುನರಾದರೋ ಅಲ್ಪ ವ್ಯಕ್ತಿಗಳು, ನೀನು ನಡುವೆ ಮಾತಾಡಿ ನಮ್ಮಲಿ ವೈರವನ್ನು ಬಿತ್ತಿಸಿದೆ. ಧರ್ಮದ ಗಣಿಯಾದ ಯುಧಿಷ್ಠಿರನಿಗೆ ನಿನ್ನ ಮೋಸವೇನು ತಿಳಿದುದು? ಭೂಮಿಯ ಭಾರವನ್ನು ಕಳೆಯಲು ನಮ್ಮಲ್ಲಿ ಯುದ್ಧವನ್ನು ಮಾಡಿಸಿ ನಮ್ಮನ್ನು ಬೇಟೆಯಾಡಿಸಿದೆ ಎಂದು ದುರ್ಯೋಧನನು ಕೃಷ್ಣನನ್ನು ಜರೆದನು.

ಅರ್ಥ:
ಬಣಗು: ಕೀಳು, ಅಲ್ಪ; ಕಾರಣಿಕ: ಅವತಾರ ಪುರುಷ, ವಿಮರ್ಶಕ; ನಡುವಾಯಿ: ಮಧ್ಯ ಮಾತಾಡು; ಕಣಿ: ಗಣಿ, ಆಕರ, ನೆಲೆ; ಬಲ್ಲನು: ತಿಳಿದನು; ಮಾಯೆ: ಗಾರುಡಿ; ಸೆಣಸು: ಹೋರಾಡು; ಧಾರುಣಿ: ಭೂಮಿ; ಭಾರ: ಹೊರೆ; ಬಿಡಿಸು: ಕಳಚು, ಸಡಿಲಿಸು; ಓಸುಗ: ಓಸ್ಕರ; ರಣ: ಯುದ್ಧ; ಹೊತ್ತಿಸು: ಹಚ್ಚು; ಬೇಂಟೆ: ಬೇಟೆ, ಕೊಲ್ಲು;

ಪದವಿಂಗಡಣೆ:
ಬಣಗುಗಳು +ಭೀಮಾರ್ಜುನರು +ಕಾ
ರಣಿಕ +ನೀ +ನಡುವಾಯಿ +ಧರ್ಮದ
ಕಣಿ +ಯುಧಿಷ್ಠಿರನ್+ಎತ್ತಬಲ್ಲನು+ ನಿನ್ನ+ ಮಾಯೆಗಳ
ಸೆಣಸನಿಕ್ಕಿದೆ +ನಮ್ಮೊಳಗೆ+ ಧಾ
ರುಣಿಯ +ಭಾರವ+ ಬಿಡಿಸಲೋಸುಗ
ರಣವ +ಹೊತ್ತಿಸಿ+ ನಮ್ಮ +ಬೇಂಟೆಯನ್+ಆಡಿಸಿದೆಯೆಂದ

ಅಚ್ಚರಿ:
(೧) ಯುಧಿಷ್ಠಿರನನ್ನು ಹೊಗಳುವ ಪರಿ – ಧರ್ಮದ ಕಣಿ
(೨) ಯುದ್ಧವನ್ನು ಮಾಡಿಸಿದ ಕಾರಣ – ಧಾರುಣಿಯ ಭಾರವ ಬಿಡಿಸಲೋಸುಗ ರಣವ ಹೊತ್ತಿಸಿ ನಮ್ಮ ಬೇಂಟೆಯನಾಡಿಸಿದೆ

ಪದ್ಯ ೩೮: ಪಾಂಡವರ ಸೇನೆಯು ಯಾವ ಉಪಾಯವನ್ನು ಅನುಸರಿಸಿದರು?

ಕಳಿದ ಹೂವಿನ ತೊಡಬೆಯೋ ಕುಸಿ
ದಲೆಯ ಬಿಟ್ಟಿಯ ಭಾರವೋ ನಿ
ರ್ಮಳನ ಚಿತ್ತದ ಖತಿಯೊ ದಾನವ್ಯಸನಿಯೊಡವೆಗಳೊ
ನಳಿನನಾಭನ ಮಾತು ಹಿಂಚಿತು
ಕಳಚಿದವು ಕೈದುಗಳು ಕೈಗಳ
ಲುಳಿವುಪಾಯದ ಜೋಡ ತೊಟ್ಟುದು ಪಾಂಡುಸುತಸೇನೆ (ದ್ರೋಣ ಪರ್ವ, ೧೯ ಸಂಧಿ, ೩೮ ಪದ್ಯ)

ತಾತ್ಪರ್ಯ:
ಇನ್ನೇನು ಉದುರಲಿರುವ ಹೂವಿನ ತೊಟ್ಟೋ, ಬಿಟ್ಟಿ ಕೂಲಿಗಾಗಿ ಭಾರಹೊತ್ತ ತಲೆಗಳೋ, ನಿರ್ಮಲ ಚಿತ್ತನ ಕೋಪವೋ, ದಾನಿಯ ಆಭರಣಗಳೋ ಎಂಬಂತೆ ಶ್ರೀಕೃಷ್ಣನ ಮಾತು ಮುಗಿಯುವ ಮೊದಲೇ ಯೋಧರ ಕೈಗಳಲ್ಲಿದ್ದ ಆಯುಧಗಳು ಕೆಳಕ್ಕೆ ಬಿದ್ದವು. ಉಳಿಯುವ ಉಪಾಯದ ಕವಚವನ್ನು ಪಾಂಡವರ ಸೇನೆ ಧರಿಸಿತು.

ಅರ್ಥ:
ಕಳಿದ: ಉದುರು; ಹೂವು: ಪುಷ್ಪ; ತೊಡಬೆ: ತೊಟ್ಟು; ಕುಸಿ: ಬೀಳು; ತಲೆ: ಶಿರ; ಬಿಟ್ಟಿ: ವ್ಯರ್ಥ; ಭಾರ: ಹೊರೆ; ನಿರ್ಮಳ: ಶುದ್ಧ; ಚಿತ್ತ: ಮನಸ್ಸು; ಖತಿ: ಕೋಪ; ದಾನ: ನೀಡುವ ಸ್ವಭಾವ; ವ್ಯಸನ: ಗೀಳು, ಚಟ; ಒಡವೆ: ಆಭರಣ; ನಳಿನನಾಭ: ಕೃಷ್ಣ; ಮಾತು: ವಾಣಿ; ಹಿಂಚು: ಮುಗಿ, ಕೊನೆಗೊಳ್ಳು; ಕಳಚು: ಬೇರ್ಪಡಿಸು, ತೆಗೆ; ಕೈದು: ಆಯುಧ; ಕೈ: ಹಸ್ತ; ಉಪಾಯ: ಯುಕ್ತಿ; ಜೋಡು: ಜೊತೆ, ಜೋಡಿ; ತೊಟ್ಟು: ತೊಡು; ಸುತ: ಮಕ್ಕಳು; ಸೇನೆ: ಸೈನ್ಯ; ಲುಳಿ: ವೇಗ;

ಪದವಿಂಗಡಣೆ:
ಕಳಿದ+ ಹೂವಿನ +ತೊಡಬೆಯೋ +ಕುಸಿದ್
ತಲೆಯ +ಬಿಟ್ಟಿಯ +ಭಾರವೋ +ನಿ
ರ್ಮಳನ +ಚಿತ್ತದ +ಖತಿಯೊ +ದಾನ+ವ್ಯಸನಿ+ಒಡವೆಗಳೊ
ನಳಿನನಾಭನ +ಮಾತು +ಹಿಂಚಿತು
ಕಳಚಿದವು +ಕೈದುಗಳು +ಕೈಗಳ
ಲುಳಿ+ಉಪಾಯದ+ ಜೋಡ +ತೊಟ್ಟುದು +ಪಾಂಡುಸುತಸೇನೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಳಿದ ಹೂವಿನ ತೊಡಬೆಯೋ ಕುಸಿದಲೆಯ ಬಿಟ್ಟಿಯ ಭಾರವೋ ನಿ
ರ್ಮಳನ ಚಿತ್ತದ ಖತಿಯೊ ದಾನವ್ಯಸನಿಯೊಡವೆಗಳೊ