ಇಳಿದರಿತ್ತಲು ಗಗನದಿಂ ಹೊಳೆ
ಹೊಳೆವ ಢಾಳದ ಝಾಡಿಯಲಿ ಜಗ
ಮುಳುಗೆ ಭಸ್ಮವಿಭೂಷಿತಾಂಗದ ಜಡಿವ ಕೆಂಜೆಡೆಯ
ಪುಲಿದೊಗಲ ಸುಲಿಪಲ್ಲ ಮುಕ್ತಾ
ವಳಿಯ ಮಣಿ ಜಪಮಾಲಿಕೆಯ ನಿ
ರ್ಮಳ ತಪೋಧನರೈದಿದರು ಸಂಗ್ರಾಮಭೂಮಿಯನು (ದ್ರೋಣ ಪರ್ವ, ೧೮ ಸಂಧಿ, ೫೨ ಪದ್ಯ)
ತಾತ್ಪರ್ಯ:
ಇತ್ತ ಯುದ್ಧಭೂಮಿಗೆ ತಪೋಧನರಾದ ಋಷಿಮುನಿಗಳು ಬಂದರು. ಆಗಸದಿಂದ ಕೆಳಗಿಳಿದರು, ಮೈಕಾಂತಿ ಹೊಳೆಯುತ್ತಿರಲು, ಭಸ್ಮ ವಿಭೂಷಿತರಾಗಿ, ಕೆಂಪು ಜಟೆಗಳನ್ನು ಹೊತ್ತು, ಹುಲಿಯ ಚರ್ಮವನ್ನುಟ್ಟು ಮುತ್ತು ಸ್ಫಟಿಕ ಮಣಿಗಳ ಜಪಮಾಲಿಕೆಗಳನ್ನು ಧರಿಸಿ, ಶುಭ್ರ ದಂತಕಾಂತಿಯು ಹಬ್ಬುತ್ತಿರಲು, ನಿರ್ಮಲರಾದ ತಪೋಧನರು ಆಗಮಿಸಿದರು.
ಅರ್ಥ:
ಇಳಿ: ಬಾಗು, ಕೆಳಕ್ಕೆ ಹೋಗು; ಗಗನ: ಆಗಸ; ಹೊಳೆ: ಪ್ರಕಾಶ; ಢಾಳ: ಕಾಂತಿ, ಪ್ರಕಾಶ; ಝಾಡಿಸು: ಅಲುಗಾಡಿಸು; ಜಗ: ಪ್ರಪಂಚ; ಮುಳುಗು: ನೀರಿನಲ್ಲಿ ಮೀಯು, ಕಾಣದಾಗು; ಭಸ್ಮ: ಬೂದಿ; ವಿಭೂಷಿತ: ಶೋಭಿಸು, ಅಲಂಕೃತ; ಅಂಗ: ದೇಹದ ಭಾಗ; ಜಡಿ: ಅಲ್ಲಾಡು, ನಡುಗು; ಕೆಂಜೆಡೆ: ಕೆಂಪಾದ ಜಟೆ; ಪುಲಿ: ಹುಲಿ; ತೊಗಲು: ಚರ್ಮ; ಸುಲಿಪಲ್ಲು: ಶುಭ್ರವಾಗಿ ಹೊಳೆವ ಹಲ್ಲು; ಮುಕ್ತಾವಳಿ: ಮಣಿಗಳ ಸಾಲು, ಮುತ್ತಿನಹಾರ; ಮಣಿ: ಬೆಲೆಬಾಳುವ ರತ್ನ; ಮಾಲೆ: ಹಾರ; ನಿರ್ಮಳ: ಶುಭ್ರ; ತಪೋಧನ: ಋಷಿ ಮುನಿ; ಐದು: ಬಂದು ಸೇರು; ಸಂಗ್ರಾಮ: ಯುದ್ಧ; ಭೂಮಿ: ನೆಲ;
ಪದವಿಂಗಡಣೆ:
ಇಳಿದರ್+ಇತ್ತಲು +ಗಗನದಿಂ+ ಹೊಳೆ
ಹೊಳೆವ +ಢಾಳದ +ಝಾಡಿಯಲಿ +ಜಗ
ಮುಳುಗೆ +ಭಸ್ಮವಿಭೂಷಿತಾಂಗದ+ ಜಡಿವ +ಕೆಂಜೆಡೆಯ
ಪುಲಿ+ತೊಗಲ +ಸುಲಿಪಲ್ಲ+ ಮುಕ್ತಾ
ವಳಿಯ +ಮಣಿ +ಜಪಮಾಲಿಕೆಯ +ನಿ
ರ್ಮಳ +ತಪೋಧನರ್+ಐದಿದರು +ಸಂಗ್ರಾಮಭೂಮಿಯನು
ಅಚ್ಚರಿ:
(೧) ಋಷಿಮುನಿಗಳ ವರ್ಣನೆ – ಹೊಳೆಹೊಳೆವ ಢಾಳದ ಝಾಡಿಯಲಿ ಜಗಮುಳುಗೆ ಭಸ್ಮವಿಭೂಷಿತಾಂಗದ ಜಡಿವ ಕೆಂಜೆಡೆಯ