ಗೆಲಿದನೈ ಮಝ ಪೂತು ದ್ರೋಣನ
ಬಲುಹು ಭರ್ಗನ ಸರಿ ಯುಧಿಷ್ಠಿರ
ಸಿಲುಕಿದನಲಾ ಶಿವಶಿವಾ ಕಲಿ ಕರ್ಣ ನೋಡೆನುತ
ಉಲಿವ ದುರಿಯೋಧನನನೀಕ್ಷಿಸು
ತಲಘುಭುಜಬಲ ಭಾನು ನಂದನ
ನಳುಕದೀ ಮಾತುಗಳನೆಂದನು ನೀತಿಸಮ್ಮತವ (ದ್ರೋಣ ಪರ್ವ, ೨ ಸಂಧಿ, ೬೧ ಪದ್ಯ)
ತಾತ್ಪರ್ಯ:
ಈ ಕಾಳಗವನ್ನು ನೋಡುತ್ತಿದ್ದ ಕೌರವನು, ಕರ್ಣ ನೋಡು ದ್ರೋಣನ ಪರಾಕ್ರಮವು ಶಿವನ ಬಲ್ಮೆಗೆ ಸರಿ. ದ್ರೋಣನು ಗೆದ್ದ ಯುಧಿಷ್ಠಿರನು ಸೆರೆ ಸಿಕ್ಕ ಎನ್ನಲು ಮಹಾಬಾಹುಬಲನಾದ ಕರ್ಣನು ಅಳುಕದೆ ದುರ್ಯೋಧನನಿಗೆ ಈ ಮಾತುಗಳನ್ನು ಹೇಳಿದನು.
ಅರ್ಥ:
ಗೆಲಿದು: ಜಯ; ಮಝ: ಭಾಪು, ಭಲೇ; ಪೂತು: ಕೋಂಡಾಟದ ಮಾತು; ಬಲುಹು: ಬಲ, ಶಕ್ತಿ; ಭರ್ಗ: ಶಿವ, ಈಶ್ವರ; ಸರಿ: ಸಮಾನ; ಸಿಲುಕು: ಬಂಧನಕ್ಕೊಳಗಾಗು, ಸೆರೆಯಾಗು; ಕಲಿ: ಶೂರ; ನೋಡು: ವೀಕ್ಷಿಸು; ಉಲಿ: ಶಬ್ದ; ಈಕ್ಷಿಸು: ನೋಡು; ಅಲಗು: ಖಡ್ಗ, ಆಯುಧದ ಮೊನೆ, ಕತ್ತಿ; ಭುಜಬಲ: ಪರಾಕ್ರಮ; ಭಾನು: ಸೂರ್ಯ; ಅಳುಕು: ಹೆದರು; ನೀತಿ: ಮಾರ್ಗದರ್ಶನ; ಸಮ್ಮತ: ಒಪ್ಪಿಗೆಯಾದುದು;
ಪದವಿಂಗಡಣೆ:
ಗೆಲಿದನೈ +ಮಝ +ಪೂತು +ದ್ರೋಣನ
ಬಲುಹು +ಭರ್ಗನ +ಸರಿ +ಯುಧಿಷ್ಠಿರ
ಸಿಲುಕಿದನಲಾ+ ಶಿವಶಿವಾ+ ಕಲಿ+ ಕರ್ಣ +ನೋಡೆನುತ
ಉಲಿವ +ದುರಿಯೋಧನನನ್+ಈಕ್ಷಿಸುತ್
ಅಲಘು+ಭುಜಬಲ+ ಭಾನು +ನಂದನನ್
ಅಳುಕದೀ +ಮಾತುಗಳನ್+ಎಂದನು +ನೀತಿ+ಸಮ್ಮತವ
ಅಚ್ಚರಿ:
(೧) ದ್ರೋಣನ ಪರಾಕ್ರಮವನ್ನು ಹೊಗಳುವ ಪರಿ – ಗೆಲಿದನೈ ಮಝ ಪೂತು ದ್ರೋಣನ ಬಲುಹು ಭರ್ಗನ ಸರಿ