ಪದ್ಯ ೬೦: ದುರ್ಯೋಧನನು ಭೀಮನನ್ನು ಹೇಗೆ ತಡೆದನು?

ಧರಣಿಪತಿ ಕೇಳ್ ಭೀಮಸೇನನ
ಧರಧುರದ ದೆಖ್ಖಾಳದಲಿ ನ
ಮ್ಮರಸ ನಿಂದನು ಕಾದಿದನು ನೂರಾನೆಯಲಿ ಮಲೆತು
ಸರಳ ಸಾರದಲನಿಲಜನ ರಥ
ತುರಗವನು ಸಾರಥಿಯನಾತನ
ಭರವಸವ ನಿಲಿಸಿದನು ನಿಮಿಷಾರ್ಧದಲಿ ಕುರುರಾಯ (ಗದಾ ಪರ್ವ, ೧ ಸಂಧಿ, ೬೦ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಭೀಮನ ಮಹಾಕದನದ ಭರದಲ್ಲಿ ಕೌರವನು ನೂರಾನೆಗಳ ನಡುವೆ ಇದಿರಾಗಿ ನಿಂತು ಕಾದಿದನು. ಬಾಣಗಳಿಂದ ಭೀಮನ ರಥವನ್ನು ತಡೆದು, ಕುದುರೆಗಳ ಸಾರಥಿ ಚಲನೆ ಚಾಕಚಕ್ಯತೆಗಳನ್ನು ನಿಮಿಷಾರ್ಧದಲ್ಲಿ ತಡೆದನು.

ಅರ್ಥ:
ಧರಣಿಪತಿ: ರಾಜ; ಧರಧುರ: ಆರ್ಭಟ, ಕೋಲಾಹಲ; ದೆಖ್ಖಾಳ: ಗೊಂದಲ, ಗಲಭೆ; ಅರಸ: ರಾಜ; ನಿಂದನು: ನಿಲ್ಲು; ಕಾದು: ಹೋರಾಡು; ಆನೆ: ಗಜ; ಮಲೆತ: ಕೊಬ್ಬಿದ; ಸರಳ: ಬಾಣ; ಸಾರ: ಸತ್ವ; ಅನಿಲಜ: ಭೀಮ; ರಥ: ಬಂಡಿ; ತುರಗ: ಕುದುರೆ; ಸಾರಥಿ: ಸೂತ; ಭರ: ಜೋರು; ನಿಲಿಸು: ತಡೆ; ರಾಯ: ರಾಜ;

ಪದವಿಂಗಡಣೆ:
ಧರಣಿಪತಿ +ಕೇಳ್ +ಭೀಮಸೇನನ
ಧರಧುರದ +ದೆಖ್ಖಾಳದಲಿ +ನ
ಮ್ಮರಸ+ ನಿಂದನು +ಕಾದಿದನು +ನೂರಾನೆಯಲಿ +ಮಲೆತು
ಸರಳ +ಸಾರದಲ್+ಅನಿಲಜನ +ರಥ
ತುರಗವನು +ಸಾರಥಿಯನ್+ಆತನ
ಭರವಸವ +ನಿಲಿಸಿದನು +ನಿಮಿಷಾರ್ಧದಲಿ +ಕುರುರಾಯ

ಅಚರಿ:
(೧) ಧರಣಿಪತಿ, ರಾಯ, ಅರಸ – ಸಮಾನಾರ್ಥಕ ಪದ
(೨) ಜೋಡಿ ಪದಗಳ ಪ್ರಯೋಗ – ಧರಧುರದ ದೆಖ್ಖಾಳದಲಿ, ನಿಲಿಸಿದನು ನಿಮಿಷಾರ್ಧದಲಿ