ಪದ್ಯ ೨೭: ಭೀಮನು ಹೇಗೆ ಕೌರವನನ್ನು ಪ್ರಚೋದಿಸಿದನು – ೪?

ಕೆಡಹಿ ದುಶ್ಯಾಸನನ ರಕುತವ
ಕುಡಿದವನು ತಾನಲ್ಲಲೇ ನಿ
ನ್ನೊಡನೆ ಹುಟ್ಟಿದ ನೂರ ನುಂಗಿದ ಕಾಲಯಮನಲ್ಲಾ
ಅಡಗಿದಡೆ ಬಿಡುವೆನೆ ಭಯಜ್ವರ
ಹಿಡಿದ ನಿನ್ನನು ಸೆಳೆದು ರಣದಲಿ
ತೊಡೆಯ ಕಳಚವ ಮೃತ್ಯು ಭೀಮನ ಕಯ್ಯ ನೋಡೆಂದ (ಗದಾ ಪರ್ವ, ೫ ಸಂಧಿ, ೨೭ ಪದ್ಯ)

ತಾತ್ಪರ್ಯ:
ನಿನ್ನ ತಮ್ಮ ದುಶ್ಯಾಸನನನ್ನು ಕೆಡವಿ ರಕ್ತವನು ಕುಡಿದವನು ನಾನಲ್ಲವೇ? ನಿನ್ನ ನೂರುಜನ ತಮ್ಮಂದಿರಿಗೆ ನಾನು ಕಾಲಯಮನಾಗಲಿಲ್ಲವೇ? ನೀರಲ್ಲಿ ಅಡಗಿ ಕುಳಿತರೆ ನಾನು ಬಿಡುವೆನೇ? ಭಯಜ್ವರವೇರಿರುವ ನಿನ್ನನ್ನು ಮೇಲಕ್ಕೆತ್ತಲು ತೊಡೆಯನ್ನು ಮುರಿಯುವ ಮೃತ್ಯುವಾದ ಭೀಮನ ಕೈನೋಡು ಎಂದು ಕೌರವನನ್ನು ಪ್ರಚೋದಿಸಿದನು.

ಅರ್ಥ:
ಕೆಡಹು: ಬೀಳು; ರಕುತ: ನೆತ್ತರು; ಕುಡಿ: ಪಾನಮಾಡು; ಹುಟ್ಟು: ಜನಿಸು; ನೂರು: ಶತ; ನುಂಗು: ಕಬಳಿಸು; ಕಾಲ: ಸಮಯ; ಯಮ: ಮೃತ್ಯುದೇವತೆ; ಅಡಗು: ಅವಿತುಕೊಳ್ಳು; ಬಿಡು: ತೆರಳು; ಭಯ: ಹೆದರು, ಅಂಜಿಕೆ; ಜ್ವರ: ಬೇಗುದಿ; ಹಿಡಿ: ಗ್ರಹಿಸು; ಸೆಳೆ: ಗ್ರಹಿಸು; ರಣ: ಯುದ್ಧ; ತೊಡೆ: ಸೊಂಟದಿಂದ ಮಂಡಿಯವರೆಗಿನ ಭಾಗ, ಊರು; ಕಳಚು: ಬೇರ್ಪಡಿಸು, ಬೇರೆಮಾಡು; ಮೃತ್ಯು: ಸಾವು; ಕಯ್ಯ: ಹಸ್ತ; ನೋಡು: ವೀಕ್ಷಿಸು;

ಪದವಿಂಗಡಣೆ:
ಕೆಡಹಿ +ದುಶ್ಯಾಸನನ+ ರಕುತವ
ಕುಡಿದವನು +ತಾನಲ್ಲಲೇ +ನಿ
ನ್ನೊಡನೆ +ಹುಟ್ಟಿದ +ನೂರ +ನುಂಗಿದ+ ಕಾಲಯಮನಲ್ಲಾ
ಅಡಗಿದಡೆ +ಬಿಡುವೆನೆ +ಭಯಜ್ವರ
ಹಿಡಿದ +ನಿನ್ನನು +ಸೆಳೆದು +ರಣದಲಿ
ತೊಡೆಯ +ಕಳಚವ+ ಮೃತ್ಯು +ಭೀಮನ +ಕಯ್ಯ +ನೋಡೆಂದ

ಅಚ್ಚರಿ:
(೧) ಹಂಗಿಸುವ ಪರಿ – ಅಡಗಿದಡೆ ಬಿಡುವೆನೆ ಭಯಜ್ವರ ಹಿಡಿದ ನಿನ್ನನು ಸೆಳೆದು ರಣದಲಿ ತೊಡೆಯ ಕಳಚವ ಮೃತ್ಯು