ಪದ್ಯ ೧೪: ಸುಜನರು ದುಷ್ಟರ ವಿಷವನ್ನು ಅರಿಯಲು ಸಾಧ್ಯವೇ?

ಖಳರ ಹೃದಯದ ಕಾಳಕೂಟದ
ಹುಳುಕ ಬಲ್ಲರೆ ಮಾನ್ಯರವದಿರ
ಲಲಿತ ಮಧುರ ವಚೋವಿಳಾಸಕೆ ಮರುಳುಗೊಂಡರಲೈ
ಅಳುಪಿದರೆ ಮಧುಕರನ ಮರಿ ಬೊ
ಬ್ಬುಲಿಯ ವನದೊಳಗೇನಹುದು ನೃಪ
ತಿಲಕರಿದ್ದರು ಬೇರೆ ರಚಿಸಿದ ರಾಜಭವನದಲಿ (ಸಭಾ ಪರ್ವ, ೧೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಮಾನ್ಯರಾದವರು, ಸುಜನರು ದುಷ್ಟರ ಹೃದಯದ ಕಾಳಕೂಟ ವಿಷವನ್ನು ತಿಳಿಯಲು ಸಾಧ್ಯವೇ? ಕೌರವರ ಲಲಿತವೂ ಮಧುರವೂ ಆದ ಮಾತುಗಳಿಗೆ ಮೋಸಹೋದರು. ಬೊಬ್ಬುಲಿಯ ವನವನ್ನು ಮರಿದುಂಬಿಯು ಹೊಕ್ಕರೆ ಅದಕ್ಕೇನು ಪ್ರಯೋಜನ? ಪಾಂಡವರು ತಮಗಾಗಿ ರಚಿಸಿದ ಬೇರೊಂದು ರಾಜಭವನದಲ್ಲಿದ್ದರು.

ಅರ್ಥ:
ಖಳ: ದುಷ್ಟ; ಹೃದಯ: ಎದೆ; ಕಾಳಕೂಟ: ಘೋರವಿಷ; ಹುಳುಕ: ಕ್ಷುದ್ರ ವ್ಯಕ್ತಿ, ನೀಚ; ಬಲ್ಲರು: ತಿಳಿದವರು; ಮಾನ್ಯರು: ಉತ್ತಮ, ಶ್ರೇಷ್ಠ; ಅವದಿರ: ಅವರ; ಲಲಿತ: ಚೆಲುವಾದ; ಮಧುರ: ಸಿಹಿಯಾದ, ಸವಿಯಾದ; ವಚೋವಿಳಾಸ: ಮಾತಿನ ಸೌಂದರ್ಯ; ಮರುಳು: ಬುದ್ಧಿಭ್ರಮೆ; ಅಳುಕು: ಹೆದರು; ಮಧುಕರ: ಜೇನು; ಮರಿ: ಚಿಕ್ಕ; ಬೊಬ್ಬುಲಿ: ದೊಡ್ಡ ಹುಲಿ; ವನ: ಕಾಡು; ನೃಪತಿಲಕ: ರಾಜಶ್ರೇಷ್ಠ; ಬೇರೆ: ಅನ್ಯ; ರಚಿಸು: ನಿರ್ಮಿಸು; ರಾಜಭವನ: ಅರಮನೆ;

ಪದವಿಂಗಡಣೆ:
ಖಳರ+ ಹೃದಯದ +ಕಾಳಕೂಟದ
ಹುಳುಕ +ಬಲ್ಲರೆ +ಮಾನ್ಯರ್+ಅವದಿರ
ಲಲಿತ +ಮಧುರ+ ವಚೋವಿಳಾಸಕೆ+ ಮರುಳುಗೊಂಡರಲೈ
ಅಳುಪಿದರೆ+ ಮಧುಕರನ+ ಮರಿ +ಬೊ
ಬ್ಬುಲಿಯ +ವನದೊಳಗ್+ಏನಹುದು +ನೃಪ
ತಿಲಕರಿದ್ದರು +ಬೇರೆ +ರಚಿಸಿದ +ರಾಜಭವನದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಳುಪಿದರೆ ಮಧುಕರನ ಮರಿ ಬೊಬ್ಬುಲಿಯ ವನದೊಳಗೇನಹುದು

ಪದ್ಯ ೫೦: ಭೀಷ್ಮರು ಶಿಶುಪಾಲನಿಗೆ ಹೇಗೆ ಉತ್ತರಿಸಿದರು?

ಕುಮತಿ ಕೇಳ್ ಬೊಬ್ಬುಲಿಯ ಬನದಲಿ
ರಮಿಸುವುದೆ ಕಳಹಂಸ ಮಾಯಾ
ಭ್ರಮಿತರಲಿ ಯಾಚಿಸುವನೇ ವರಯೋಗಿ ನಿಜಪದವ
ಸಮರ ಪಟುಭಟ ದರ್ಪಪಿತ್ತ
ಭ್ರಮ ವಿಸಂಸ್ಥುಲ ಚಪಳ ಚಿತ್ತ
ಸ್ಥಿಮಿತ ಭೂಪರ ಬಗೆವೆನೇ ತಾನೆಂದನಾ ಭೀಷ್ಮ (ಸಭಾ ಪರ್ವ, ೧೧ ಸಂಧಿ, ೫೦ ಪದ್ಯ)

ತಾತ್ಪರ್ಯ:
ಶಿಶುಪಾಲನ ಮಾತುಗಳನ್ನು ಕೇಳಿದ ಭೀಷ್ಮರು, ಎಲವೋ ಶಿಶುಪಾಲ, ದುರ್ಬುದ್ಧಿಯುಳ್ಳವನೇ, ಹೆಬ್ಬುಲಿಯ ವನದಲ್ಲಿ ಹಂಸ ಪಕ್ಷಿಗಳು ಆನಂದವಾಗಿ ವಿಹರಿಸಬಹುದೇ? ಮಾಯೆಯಿಂದ ಭ್ರಾಂತಿಗೊಳಗಾದವರ ಬಳಿ ಯೋಗಿಯು ಜೀವನ್ಮುಕ್ತಿಯನ್ನು ಬೇಡುವನೇ? ಯುದ್ಧದಲ್ಲಿ ವೀರರೆಂಬ ದರ್ಪದ ಆವೇಶವು ತಲೆಗೇರಿ, ಚಂಚಲವಾದ ಬುದ್ಧಿಯುಳ್ಳ ಚಪಲಚಿತ್ತರಾದ ರಾಜರನ್ನು ನಾನು ಲೆಕ್ಕಿಸುವೆನೇ? ಎಂದು ಭೀಷ್ಮರು ಕಟುವಾಗಿ ಉತ್ತರಿಸಿದರು.

ಅರ್ಥ:
ಕುಮತಿ: ದುಷ್ಟಬುದ್ಧಿ; ಬೊಬ್ಬುಲಿ: ಹೆಬ್ಬುಲಿ, ವ್ಯಾಘ್ರ; ಬನ: ಕಾಡು; ರಮಿಸು: ಆನಂದಿಸು; ಹಂಸ: ಒಂದು ಬಿಳಿಯ ಬಣ್ಣದ ಪಕ್ಷಿ; ಮಾಯ: ಗಾರುಡಿ, ಇಂದ್ರಜಾಲ; ಭ್ರಮಿತ: ಭ್ರಾಂತಿ; ಯಾಚಿಸು: ಕೇಳು, ಬೇಡು; ವರ: ಶ್ರೇಷ್ಠ; ಯೋಗಿ: ಮುನಿ; ಪದ: ಮೋಕ್ಷ; ನಿಜ: ದಿಟ; ಸಮರ: ಯುದ್ಧ; ಪಟುಭಟ: ಪರಾಕ್ರಮಿ; ದರ್ಪ: ಅಹಂಕಾರ; ಪಿತ್ತ: ಕೋಪ, ಸಿಟ್ಟು; ಭ್ರಮ: ಭ್ರಾಂತು; ವಿಸಂಸ್ಥುಲ: ಅತಿ ಚಂಚಲವಾದ; ಚಪಳ: ಚಂಚಲ ಸ್ವಭಾವದವನು; ಚಿತ್ತ: ಬುದ್ಧಿ; ಸ್ಥಿಮಿತ: ಸ್ಥಿರ; ಭೂಪ: ರಾಜ; ಬಗೆ:ಆಲೋಚನೆ;

ಪದವಿಂಗಡಣೆ:
ಕುಮತಿ +ಕೇಳ್ +ಬೊಬ್ಬುಲಿಯ +ಬನದಲಿ
ರಮಿಸುವುದೆ +ಕಳಹಂಸ +ಮಾಯಾ
ಭ್ರಮಿತರಲಿ+ ಯಾಚಿಸುವನೇ +ವರಯೋಗಿ +ನಿಜಪದವ
ಸಮರ +ಪಟುಭಟ+ ದರ್ಪ+ಪಿತ್ತ
ಭ್ರಮ +ವಿಸಂಸ್ಥುಲ+ ಚಪಳ +ಚಿತ್ತ
ಸ್ಥಿಮಿತ +ಭೂಪರ+ ಬಗೆವೆನೇ +ತಾನ್+ಎಂದನಾ +ಭೀಷ್ಮ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬೊಬ್ಬುಲಿಯ ಬನದಲಿ ರಮಿಸುವುದೆ ಕಳಹಂಸ, ಮಾಯಾ ಭ್ರಮಿತರಲಿ ಯಾಚಿಸುವನೇ ವರಯೋಗಿ ನಿಜಪದವ
(೨) ಶಿಶುಪಾಲನನ್ನು ಬಯ್ಯುವ ಪರಿ – ಕುಮತಿ

ಪದ್ಯ ೫: ಭೀಮನು ತಮ್ಮೊಂದಿಗೆ ಇರುವುದು ಸುಯೋಧನನಿಗೆ ಏತಕ್ಕೆ ಹೊಂದಲಿಲ್ಲ?

ವನಜವನದಲಿ ತುರುಚೆ ಕಬ್ಬಿನ
ಬನದಿ ಕಡಸಿಗೆ ಚೂತಮಯ ಕಾ
ನನದಿ ಬೊಬ್ಬುಲಿ ಭೀಮಸೇನನಯಿರವು ತಮ್ಮೊಳಗೆ
ಇನಿತು ಪಾರ್ಥನ ಮೇಲೆ ಯಮಳರ
ಜಿನುಗಿನಲಿ ಜಾರೆನು ಯುಧಿಷ್ಠಿರ
ಜನಪನಾಗಲಿ ಮೇಣು ಮಾಣಲಿ ಭೀತಿಯೆಲ್ಲೆಂದ (ಆದಿ ಪರ್ವ, ೮ ಸಂಧಿ, ೫ ಪದ್ಯ)

ತಾತ್ಪರ್ಯ:
ಭೀಮನ ಬಗ್ಗೆ ದುರ್ಯೋಧನನಿಗಿದ್ದ ತೀವ್ರ ಕೋಪ, ಈ ಪದ್ಯದಲ್ಲಿ ವ್ಯಕ್ತವಾಗಿದೆ. ಯಾವರೀತಿ, ಕಮಲಗಳ ನಡುವೆ ತರುಚೆ ಸೊಪ್ಪು, ಕಬ್ಬಿನ ತೋಟದಲ್ಲಿ ಕಹಿಯಾದ ಕಡಸಿಗೆ ಗಿಡ, ಮಾವಿನ ತೋಪಿನಲ್ಲಿ ಜಾಲಿಯ ಗಿಡ ಹೊಂದುವುದಿಲ್ಲವೋ ಅದೇ ರೀತಿ ಈ ಭೀಮನು ನಮ್ಮಲ್ಲಿ ಇರುವುದು ಹೊಂದುವುದಿಲ್ಲ. ಮಿಕ್ಕ ಪಾಂಡವರಾದ ಪಾರ್ಥ, ನಕುಲ ಸಹದೇವರ ಮಾತಿಗೆ ನಾನು ಲೆಕ್ಕಿಸುವುದಿಲ್ಲ, ಯುಧಿಷ್ಠಿರನು ರಾಜನಾಗಲಿ ಬಿಡಲಿ ನನಗೆ ಅದರ ಭಯವು ಇಲ್ಲ ಎಂದು ಹೇಳಿದನು.

ಅರ್ಥ:
ವನಜ: ಕಮಲ, ತಾವರೆ; ವನ:ಕಾನನ, ಅರಣ್ಯ, ಬನ; ತುರುಚೆ: ನೆವೆಯನ್ನುಂಟು ಮಾಡುವ ಗಿಡ; ಕಬ್ಬು: ಇಕ್ಷು; ಕಡಸಿಗ: ಒಂದು ಬಗೆಯ ಗಿಡ; ಚೂತ: ಮಾವು; ಬೊಬ್ಬುಲಿ: ಜಾಲಿ; ಯಮಳ: ಅವಳಿ ಜವಳಿ; ಜಿನುಗು: ಕರಗು, ತೊಂದರೆ, ತುಚ್ಛ; ಜಾರು: ಬೀಳು; ಜನಪ: ರಾಜ; ಮೇಣು: ಅಥವ; ಮಾಣ್: ನಿಲ್ಲು; ಸ್ಥಗಿತಗೊಳ್ಳು; ಭೀತಿ: ಭಯ;

ಪದವಿಂಗಡನೆ:
ವನಜ+ವನದಲಿ+ ತುರುಚೆ +ಕಬ್ಬಿನ
ಬನದಿ +ಕಡಸಿಗೆ+ ಚೂತಮಯ +ಕಾ
ನನದಿ +ಬೊಬ್ಬುಲಿ+ ಭೀಮಸೇನನ್+ಇರವು+ ತಮ್ಮೊಳಗೆ
ಇನಿತು+ ಪಾರ್ಥನ +ಮೇಲೆ +ಯಮಳರ
ಜಿನುಗಿನಲಿ+ ಜಾರೆನು+ ಯುಧಿಷ್ಠಿರ
ಜನಪನಾಗಲಿ+ ಮೇಣು +ಮಾಣಲಿ+ ಭೀತಿಯೆಲ್ಲೆಂದ

ಅಚ್ಚರಿ:
(೧) ೩ ಉಪಮಾನಗಳ ಬಳಕೆ : ವನಜವನದಲಿ ತುರುಚೆ, ಕಬ್ಬಿನ ಬನದಿ ಕಡಸಿಗೆ, ಚೂತಮಯ ಕಾನನದಿ ಬೊಬ್ಬುಲಿ
(೨) ವನ, ಬನ, ಕಾನನ – ಕಾಡು, ಅರಣ್ಯ ಪದದ ಸಮಾನಾರ್ಥ ಪದಗಳು
(೩) ನಕುಲ ಸಹದೇವರನ್ನು ಕರೆಯಲು ಯಮಳರು (ಅವಳಿ ಜವಳಿ) ಎಂಬ ಪದ ಪ್ರಯೋಗ
(೪) ಮೇಣು ಮಾಣಲಿ, ಜಿನುಗಿನಲಿ ಜಾರೆನು – ಒಂದೇ ಅಕ್ಷರದ ಜೋಡಿ ಪದಗಳು