ಮರುಗಿ ಯೋಜನಗಂಧಿ ಚಿಂತೆಯ
ಸೆರೆಗೆ ಸಿಲುಕಿದಳೊಂದು ರಾತ್ರಿಯೊ
ಳರಿದು ನೆನೆದಳು ಪೂರ್ವಸೂಚಿತ ಪುತ್ರ ಭಾಷಿತವ
ಮುರಿದ ಭರತಾನ್ವಯದ ಬೆಸುಗೆಯ
ತೆರನು ತೋರಿತೆ ಪುಣ್ಯವೆನುತೆ
ಚ್ಚರಿತು ನುಡಿದಳು ಮಗನೆ ವೇದವ್ಯಾಸ ಬಹುದೆಂದು (ಆದಿ ಪರ್ವ, ೩ ಸಂಧಿ, ೩ ಪದ್ಯ)
ತಾತ್ಪರ್ಯ:
ಯೋಜನಗಂಧಿಯು ಚಿಂತೆಯ ಬಂದಿಯಾಗಿ ದುಃಖಿಸಿದಳು, ಒಂದಾನೊಂದು ರಾತ್ರಿ ತನ್ನ ಮಗ ವೇದವ್ಯಾಸರು ಕೊಟ್ಟ ಭಾಷೆಯು ನೆನಪಿಗೆ ಬಂತು. ಮುರಿಯುವ ಹಂತದಲ್ಲಿದ್ದ ಭರತವಮ್ಶವನ್ನು ಬೆಸೆಯುವ ಮಾರ್ಗವು ನನಗೆ ತಿಳಿಯಿತು. ಇದು ನನ್ನ ಪುಣ್ಯವೆಂದು ಯೊಚಿಸಿ ಮಗನೇ ವೇದವ್ಯಾಸ ಬಾ ಎಂದಳು.
ಅರ್ಥ:
ಮರುಗು: ತಳಮಳ, ಸಂಕಟ; ಚಿಂತೆ: ಯೋಚನೆ; ಸೆರೆ: ಬಂಧನ; ಸಿಲುಕು: ಸೆರೆಯಾದ ವಸ್ತು, ಬಂಧನಕ್ಕೊಳಗಾದುದು; ರಾತ್ರಿ: ಇರುಳು; ಅರಿ: ತಿಳಿ; ನೆನೆ: ಜ್ಞಾಪಿಸು; ಪೂರ್ವ: ಹಿಂದೆ; ಸೂಚಿತ: ತಿಳಿಸಿದ; ಪುತ್ರ: ಮಗ; ಭಾಷಿತ: ನುಡಿ; ಮುರಿ: ಸೀಳು; ಅನ್ವಯ: ಕುಲ; ಬೆಸುಗೆ: ಒಂದಾಗು; ಪುಣ್ಯ: ಸದಾಚಾರ; ಎಚ್ಚರ: ಗಮನ; ನುಡಿ: ಮಾತು; ಮಗ: ಸುತ; ಬಹುದು: ಬರಬೇಕು, ಆಗಮಿಸು;
ಪದವಿಂಗಡಣೆ:
ಮರುಗಿ +ಯೋಜನಗಂಧಿ +ಚಿಂತೆಯ
ಸೆರೆಗೆ +ಸಿಲುಕಿದಳ್+ಒಂದು +ರಾತ್ರಿಯೊಳ್
ಅರಿದು +ನೆನೆದಳು +ಪೂರ್ವಸೂಚಿತ +ಪುತ್ರ+ ಭಾಷಿತವ
ಮುರಿದ +ಭರತ+ಅನ್ವಯದ +ಬೆಸುಗೆಯ
ತೆರನು +ತೋರಿತೆ +ಪುಣ್ಯವೆನುತ್
ಎಚ್ಚರಿತು +ನುಡಿದಳು +ಮಗನೆ +ವೇದವ್ಯಾಸ +ಬಹುದೆಂದು
ಅಚ್ಚರಿ:
(೧) ರೂಪಕದ ಪ್ರಯೋಗ – ಯೋಜನಗಂಧಿ ಚಿಂತೆಯ ಸೆರೆಗೆ ಸಿಲುಕಿದಳ್