ರಾಯತನದಲಿ ಬೆರೆತು ರಾಜ್ಯ
ಶ್ರೀಯ ನೆರೆ ಹೋಗಾಡಿ ಪರರಿಗೆ
ಜೀಯ ಬೆಸಸುವುದೆಂದು ಜೀವಿಸುವವರು ನಾವಲ್ಲ
ರಾಯತನವೆಮಗಿಲ್ಲ ಕೌರವ
ರಾಯನೋಲೆಯಕಾರರಹೆವೆ
ಮ್ಮಾಯತವು ತಾ ಬೇರೆನುತ ಕವಿದೆಚ್ಚನಾ ಕರ್ಣ (ಕರ್ಣ ಪರ್ವ, ೨೨ ಸಂಧಿ, ೨೭ ಪದ್ಯ)
ತಾತ್ಪರ್ಯ:
ಕರ್ಣನು ಅರ್ಜುನನಿಗೆ ಉತ್ತರಿಸುತ್ತಾ, “ರಾಜರೆಂಬ ಗರ್ವದಲ್ಲಿ ತಮ್ಮ ರಾಜ್ಯಲಕ್ಷ್ಮಿಯನ್ನು ಕಳೆದುಕೊಂಡು ಪರರಬಳಿ ಹೋಗಿ “ಜೀಯ ಏನಪ್ಪಣೆ” ಎಂದು ಕೇಳುತ್ತಾ ನಾವು ಬದುಕುವವರಲ್ಲ. ನಾವು ರಾಜರಲ್ಲ ನಾವು ಕುರುರಾಜನ ಓಲೆಯಕಾರರು. ನಮ್ಮ ಯೋಗ್ಯತೆಯೇ ಬೇರೆ ಎಂದು ಕರ್ಣನು ಬಾಣಗಳನ್ನು ಬಿಟ್ಟನು.
ಅರ್ಥ:
ರಾಯ: ರಾಜ; ಬೆರೆತು: ಸೇರಿ; ರಾಜ್ಯಶ್ರೀ: ರಾಜ್ಯಲಕ್ಷ್ಮಿ; ನೆರೆ: ಪಕ್ಕ, ಪಾರ್ಶ್ವ; ಹೋಗಾಡು: ಹಾಳುಮಾಡಿಕೊಳ್ಳು; ಪರರು: ಬೇರೆಯವರು; ಜೀಯ: ಒಡೆಯ; ಬೆಸಸು: ಹೇಳು, ಆಜ್ಞಾಪಿಸು; ಜೀವಿಸು: ಬದುಕು; ಓಲೆಯಕಾರ: ಸೇವಕ; ಆಯತನ: ವಾಸಸ್ಥಾನ; ಬೇರೆ: ಅನ್ಯ; ಕವಿ: ಮುಸುಕು; ಎಚ್ಚು: ಬಾಣಬಿಡು;
ಪದವಿಂಗಡಣೆ:
ರಾಯತನದಲಿ +ಬೆರೆತು +ರಾಜ್ಯ
ಶ್ರೀಯ +ನೆರೆ +ಹೋಗಾಡಿ +ಪರರಿಗೆ
ಜೀಯ +ಬೆಸಸುವುದೆಂದು+ ಜೀವಿಸುವವರು +ನಾವಲ್ಲ
ರಾಯತನವ್+ಎಮಗಿಲ್ಲ +ಕೌರವ
ರಾಯನ್+ಓಲೆಯಕಾರರ್+ಅಹೆವ್+
ಎಮ್+ಆಯತವು+ ತಾ +ಬೇರೆನುತ+ ಕವಿದೆಚ್ಚನಾ +ಕರ್ಣ
ಅಚ್ಚರಿ:
(೧) ರಾಯ – ೧, ೪, ೫ ಸಾಲಿನ ಮೊದಲ ಪದ