ಪದ್ಯ ೪೬: ದೂರ್ವಾಸ ಮುನಿಗಳು ಎಲ್ಲಿ ಆಸೀನರಾದರು?

ಮುನಿಪನಿರ್ದನು ಕುಶೆಯ ಪೀಠದ
ದನುಜಹರ ಕೆಲಕಡೆಯಲಾತನ
ಕೊನೆಯಲೈವರು ಬಳಿಕ ಬುಧಜನರವರ ಮಧ್ಯದಲಿ
ತನತನಗೆ ದೂರ್ವಾಸನಾಜ್ಞೆಯೊ
ಳನಿತು ಅಷ್ಠಾಶೀತಿ ಸಾವಿರ
ಮುನಿಗಳಿರಲಂದಬಲೆ ಬಂದಳು ಹರುಷಭಾವದಲಿ (ಅರಣ್ಯ ಪರ್ವ, ೧೭ ಸಂಧಿ, ೪೬ ಪದ್ಯ)

ತಾತ್ಪರ್ಯ:
ದೂರ್ವಾಸ ಮುನಿಗಳು ಕುಶಾಸ್ತರಣದ ಮೇಲೆ ಕುಳಿತರು. ಪಕ್ಕದಲ್ಲಿ ಶ್ರೀಕೃಷ್ಣ, ಅವನ ಪಕ್ಕದಲ್ಲಿ ಪಾಂಡವರು, ಬಳಿಕ ಧರ್ಮಜನ ಪರಿವಾರದ ಬ್ರಾಹ್ಮಣರೂ, ಎಂಬತ್ತೆಂಟು ಸಾವಿರ ಋಷಿಗಳು ದೂರ್ವಾಸನಾಜ್ಞೆಯಂತೆ ಕುಳಿತರು. ಆಗ ದ್ರೌಪದಿಯು ಹರ್ಷದಿಂದ ಅಲ್ಲಿಗೆ ಬಂದಳು.

ಅರ್ಥ:
ಮುನಿ: ಋಷಿ; ಕುಶೆ: ದರ್ಬೆ; ಪೀಠ: ಆಸನ; ದನುಜ: ರಾಕ್ಷಸ; ಕೆಲ: ಪಕ್ಕ, ಮಗ್ಗುಲು; ಕೊನೆ: ಅಂತ್ಯ; ಬಳಿಕ: ನಂತರ; ಬುಧಜನ: ಬ್ರಾಹ್ಮಣ; ಮಧ್ಯ: ನಡುವೆ; ಅಷ್ಟಾಶೀತಿ: ಎಂಬತ್ತೆಂಟು ಸಾವಿರ; ಸಾವಿರ: ಸಹಸ್ರ; ಮುನಿ: ಋಷಿ; ಅಬಲೆ: ಹೆಣ್ಣು; ಬಂದಳು: ಆಗಮಿಸು; ಹರುಷ: ಸಂತಸ; ಭಾವ: ಮನೋಧರ್ಮ;

ಪದವಿಂಗಡಣೆ:
ಮುನಿಪನಿರ್ದನು +ಕುಶೆಯ +ಪೀಠದ
ದನುಜಹರ+ ಕೆಲಕಡೆಯಲ್+ಆತನ
ಕೊನೆಯಲ್+ಐವರು +ಬಳಿಕ+ ಬುಧಜನರ್+ಅವರ +ಮಧ್ಯದಲಿ
ತನತನಗೆ +ದೂರ್ವಾಸನ್+ಆಜ್ಞೆಯೊಳ್
ಅನಿತು +ಅಷ್ಠಾಶೀತಿ+ ಸಾವಿರ
ಮುನಿಗಳಿರಲಂದ್+ಅಬಲೆ +ಬಂದಳು +ಹರುಷ+ಭಾವದಲಿ

ಅಚ್ಚರಿ:
(೧) ಕೃಷ್ಣನನ್ನು ದನುಜಹರ, ದ್ರೌಪದಿಯನ್ನು ಅಬಲೆ ಎಂದು ಕರೆದಿರುವುದು