ಪದ್ಯ ೧೩: ಎರಡು ಸೈನ್ಯವು ಹೇಗೆ ಹೋರಾಡಿದರು?

ಆಯತಿಕೆಯಲಿ ಬಂದು ಪಾಂಡವ
ರಾಯದಳ ಮೋಹರಿಸಿ ನೀಮ್ದುದು
ರಾಯರಿಬ್ಬರ ಬೀಸುಗೈಗಳ ಸನ್ನೆ ಸಮವಾಗೆ
ತಾಯಿಮಳಲನು ತರುಬಿದಬುಧಿಯ
ದಾಯಿಗರು ತಾವಿವರೆನಲು ಬಿಡೆ
ನೋಯಬೆರಸಿದುದುಭಯಬಲ ಬಲುಖತಿಯ ಬಿಂಕದಲಿ (ಶಲ್ಯ ಪರ್ವ, ೨ ಸಂಧಿ, ೧೩ ಪದ್ಯ)

ತಾತ್ಪರ್ಯ:
ಪಾಂಡವರ ಸೇನೆಯು ಸನ್ನದ್ಧವಾಗಿ ಬಂದು ನಿಂತಿತು. ರಾಜರಿಬ್ಬರೂ ಕೈಬೀಸಿ ಯುದ್ಧಾರಂಭಕ್ಕೆ ಏಕಕಾಲದಲ್ಲಿ ಅನುಮತಿಕೊಟ್ಟರು. ಸಮುದ್ರದೊಳಗಿರುವ ಮರಳು ಮೇಲೆದ್ದು ಅಲ್ಲೋಲ ಕಲ್ಲೋಲವಾದ ಸಮುದ್ರಗಳಿಗೆ ಇವರು ದಾಯಾದಿಗಳೆನ್ನುವಂತೆ ಮಹಾಕೋಪದಿಂದ ಒಬ್ಬರೊಡನೊಬ್ಬರು ಹೋರಾಡಿದರು.

ಅರ್ಥ:
ಆಯತಿ: ವಿಸ್ತಾರ; ಬಂದು: ಆಗಮಿಸು; ರಾಯ: ರಾಜ; ದಳ: ಸೈನ್ಯ; ಮೋಹರ: ಯುದ್ಧ; ನಿಂದು: ನಿಲ್ಲು; ಬೀಸು: ಅಲ್ಲಾಡಿಸು; ಕೈ: ಹಸ್ತ; ಸನ್ನೆ: ಗುರುತು; ಸಮ: ಸರಿಸಮಾನವಾದುದು; ತಾಯಿಮಳಲು: ಸಮುದ್ರದಡಿಯಲ್ಲಿರುವ ಮರಳು; ತರುಬು: ತಡೆ, ನಿಲ್ಲಿಸು; ಅಬುಧಿ: ಸಾಗರ; ದಾಯಿಗ: ದಾಯಾದಿ; ನೋಯ: ನೋವು; ಬೆರಸು: ಕಲಿಸು; ಉಭಯ: ಎರದು; ಬಲು: ಬಹಳ; ಖತಿ: ಕೋಪ; ಬಿಂಕ: ಗರ್ವ, ಜಂಬ, ಠೀವಿ;

ಪದವಿಂಗಡಣೆ:
ಆಯತಿಕೆಯಲಿ +ಬಂದು +ಪಾಂಡವ
ರಾಯದಳ +ಮೋಹರಿಸಿ+ ನಿಂದುದು
ರಾಯರಿಬ್ಬರ +ಬೀಸುಗೈಗಳ +ಸನ್ನೆ+ ಸಮವಾಗೆ
ತಾಯಿಮಳಲನು +ತರುಬಿದ್+ಅಬುಧಿಯ
ದಾಯಿಗರು+ ತಾವಿವರೆನಲು +ಬಿಡೆ
ನೋಯ+ಬೆರಸಿದುದ್+ಉಭಯಬಲ+ ಬಲು+ಖತಿಯ +ಬಿಂಕದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ತಾಯಿಮಳಲನು ತರುಬಿದಬುಧಿಯ ದಾಯಿಗರು ತಾವಿವರೆನಲು