ಪದ್ಯ ೨೭: ಕೌರವನ ಸ್ಥಿತಿಯನ್ನು ಸಂಜಯನು ಹೇಗೆ ವಿವರಿಸಿದನು?

ಬೀಳುಕೊಂಡನು ಮುನಿಯನವನೀ
ಪಾಲಕನನರಸಿದೆನು ಕಳನೊಳು
ಸಾಲ ಹೆಣನೊಟ್ಟಿಲ ಕಬಂಧದ ರುಧಿರಪೂರದಲಿ
ಬೀಳುತೇಳುತ ನಿಲುತ ಬಳಲಿದು
ಕಾಲುನಡೆಯಲಿ ಸುಳಿವ ಕುರು ಹೂ
ಪಾಲಕನ ಕಂಡೊಡನೆ ಬಂದೆನು ಕೊಳನ ತಡಿಗಾಗಿ (ಗದಾ ಪರ್ವ, ೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ನಾನು ಮ್ನಿಯಿಂದ ಬೀಳ್ಕೊಂಡು ಅರಸನನ್ನು ಹುಡುಕುತ್ತಾ ಹೋಗುವಾಗ ಸಾಲು ಹೆಣಗಳೊಟ್ಟಿಲ ಮೇಲೆ, ತಲೆಯಿಲ್ಲದ ಶರೀರಗಳ ಪಕ್ಕದಲ್ಲಿ ರಕ್ತ ಪೂರಿತವಾದ ಜಾಗದಲ್ಲಿ ಏರುತ್ತಾ, ಬೀಳುತ್ತಾ ನಿಲ್ಲುತ್ತಾ ಬಳಲುತ್ತಾ ಕಾಲು ನಡಿಗೆಯಲ್ಲಿ ಹೋಗುತ್ತಿದ್ದ ಕೌರವನನ್ನು ಕಂಡು ಅವನೊಡನೆ ದ್ವೈಪಾಯನ ಸರೋವರದ ದಡದವರೆಗೆ ಹೋದೆನು.

ಅರ್ಥ:
ಬೀಳುಕೊಂಡು: ತೆರಳು; ಮುನಿ: ಋಷಿ; ಅವನೀಪಾಲಕ: ರಾಜ; ಅರಸು: ಹುಡುಕು; ಕಳ: ಯುದ್ಧಭೂಮಿ; ಸಾಲ: ಗುಂಪು; ಹೆಣ: ಜೀವವಿಲ್ಲದ ಶರೀರ; ಕಬಂಧ: ತಲೆಯಿಲ್ಲದ ದೇಹ, ಮುಂಡ; ರುಧಿರ: ರಕ್ತ; ಪೂರ: ಪೂರ್ಣ; ಬೀಳುತೇಳು: ಹತ್ತು, ಇಳಿ; ನಿಲು: ನಿಲ್ಲು, ತಡೆ; ಬಳಲು: ಆಯಾಸಗೊಳ್ಳು; ಕಾಲುನಡೆ: ಪಾದದಿಂದ ಚಲಿಸುತ್ತಾ; ಸುಳಿ: ಕಾಣಿಸಿಕೊಳ್ಳು; ಭೂಪಾಲಕ: ರಾಜ; ಕಂಡು: ನೋಡು; ಬಂದೆ: ಆಗಮಿಸು; ಕೊಳ: ಸರೋವರ; ತಡಿ: ದಡ;

ಪದವಿಂಗಡಣೆ:
ಬೀಳುಕೊಂಡನು +ಮುನಿಯನ್+ಅವನೀ
ಪಾಲಕನನ್+ಅರಸಿದೆನು +ಕಳನೊಳು
ಸಾಲ +ಹೆಣನೊಟ್ಟಿಲ+ ಕಬಂಧದ +ರುಧಿರ+ಪೂರದಲಿ
ಬೀಳುತೇಳುತ +ನಿಲುತ +ಬಳಲಿದು
ಕಾಲುನಡೆಯಲಿ +ಸುಳಿವ +ಕುರು+ ಭೂ
ಪಾಲಕನ +ಕಂಡೊಡನೆ +ಬಂದೆನು +ಕೊಳನ +ತಡಿಗಾಗಿ

ಅಚ್ಚರಿ:
(೧) ಅವನೀಪಾಲಕ, ಭೂಪಾಲಕ – ಸಮಾನಾರ್ಥಕ ಪದ
(೨) ರಣರಂಗದ ಸ್ಥಿತಿ – ಸಾಲ ಹೆಣನೊಟ್ಟಿಲ ಕಬಂಧದ ರುಧಿರಪೂರದಲಿ

ಪದ್ಯ ೫೨: ಧರ್ಮರಾಯನೇಕೆ ಬೆದರಿದನು?

ತೋಳುಗಳ ಹಿಡಿದೆಳೆಯೆ ಭೀಮನು
ಕಾಲುಕಾಲುಗಳಿಂದ ಘಟ್ಟಿಸೆ
ಬೀಳುತೇಳುತ ಹೋರುತಿದ್ದರು ಅಸಮ ಪಟುಭಟರು
ಕೇಳುತಾರ್ಭಟ ಮಲ್ಲರಿಬ್ಬರ
ಏಳಿಗೆಯ ಕದನವನು ಕಾಣುತ
ಕಾಲನಂದನನಾಗ ಬೆದರಿದನಧಿಕ ಚಿಂತೆಯಲಿ (ವಿರಾಟ ಪರ್ವ, ೪ ಸಂಧಿ, ೫೨ ಪದ್ಯ)

ತಾತ್ಪರ್ಯ:
ಜೀಮೂತನು ತೋಳುಗಳನ್ನು ಹಿಡಿದು ಎಳೆಯಲು, ಭೀಮನು ಕಾಲುಗಳಿಂದ ಹೊಡೆದನು. ಬೀಳುತ್ತಾ, ಏಳುತ್ತಾ ಇಬ್ಬರೂ ಜೋರಾಗಿ ಹೋರಾಡುತ್ತಿದ್ದರು. ಅವರ ಆರ್ಭಟವನ್ನು ಕೇಳುತ್ತಾ ಮಲ್ಲಯುದ್ಧವನ್ನು ನೋಡುತ್ತಾ ಧರ್ಮರಾಯನು ಚಿಂತಿಸಿ ಬೆದರಿದನು.

ಅರ್ಥ:
ತೋಳು: ಬಾಹು; ಹಿಡಿ: ಬಂಧಿಸು; ಎಳೆ: ತನ್ನ ಕಡೆಗೆ ಸೆಳೆದುಕೊ; ಕಾಲು: ಪಾದ; ಘಟ್ಟಿಸು: ಹೊಡೆ; ಬೀಳು: ಜಾರು; ಏಳು: ಮೇಲೇಳು; ಹೋರು: ಜಗಳ, ಕಲಹ; ಅಸಮ: ಸಮವಲ್ಲದ; ಪಟುಭಟ: ಪರಾಕ್ರಮಿ; ಕೇಳು: ಆಲಿಸು; ಆರ್ಭಟ: ಗರ್ಜನೆ; ಮಲ್ಲ: ಜಟ್ಟಿ; ಏಳಿಗೆ: ಬೆಳವಣಿಗೆ; ಕದನ: ಯುದ್ಧ; ಕಾಣು: ವೀಕ್ಷಿಸು; ಕಾಲ: ಯಮ; ನಂದನ: ಮಗ; ಬೆದರು: ಹೆದರು; ಅಧಿಕ: ಹೆಚ್ಚು; ಚಿಂತೆ: ಯೋಚನೆ;

ಪದವಿಂಗಡಣೆ:
ತೋಳುಗಳ+ ಹಿಡಿದೆಳೆಯೆ +ಭೀಮನು
ಕಾಲುಕಾಲುಗಳಿಂದ +ಘಟ್ಟಿಸೆ
ಬೀಳುತ್+ಏಳುತ +ಹೋರುತಿದ್ದರು +ಅಸಮ +ಪಟುಭಟರು
ಕೇಳುತ್+ಆರ್ಭಟ +ಮಲ್ಲರಿಬ್ಬರ
ಏಳಿಗೆಯ +ಕದನವನು +ಕಾಣುತ
ಕಾಲನಂದನನ್+ಆಗ +ಬೆದರಿದನ್+ಅಧಿಕ+ ಚಿಂತೆಯಲಿ

ಅಚ್ಚರಿ:
(೧) ಬೀಳುತೇಳುತ, ಕಾಲುಕಾಲು, ಪಟುಭಟ – ಪದಗಳ ಬಳಕೆ
(೨) ಕ ಕಾರದ ತ್ರಿವಳಿ ಪದ – ಕದನವನು ಕಾಣುತ ಕಾಲನಂದನನಾಗ