ಪದ್ಯ ೨೯: ಅರ್ಜುನನು ಯಾರೊಡನೆ ಯುದ್ಧಮಾಡಲು ಸಿದ್ಧನಾದನು?

ಬಲವನಾಯಕವೇ ವೃಥಾ ಹುಲು
ದಳದೊಳಗೆ ನಿಮ್ಮಗ್ಗಳಿಕೆ ಕೈ
ಯಳವ ಮನಗಲಿತನದಳವ ಬಿಲುಗಾರತನದಳವ
ಬಲಿಯಿರೇ ನಮ್ಮೊಡನೆ ಮೆಚ್ಚಿಸಿ
ಬಳಿಕ ಹಡೆಯಿರೆ ಬಿರುದನೆನುತವೆ
ಫಲುಗುಣನು ಕೈಯಿಕ್ಕಿದನು ಗಂಗಾಕುಮಾರನಲಿ (ಭೀಷ್ಮ ಪರ್ವ, ೯ ಸಂಧಿ, ೨೯ ಪದ್ಯ)

ತಾತ್ಪರ್ಯ:
ಬಲವು ಅನಾಯಕವಾಯಿತೇ? ಸಾಧಾರಣ ಸೈನ್ಯದೆದುರಿನಲ್ಲಿ ನಿಮ್ಮ ಸತ್ವ, ಕೈಚಳಕ, ಕಲಿತನ, ಬಿಲುಗಾರತನಗಲನ್ನು ತೋರಿಸಿದಿರಿ ಅಷ್ಟೇ, ನಮ್ಮೊಡನೆ ಯುದ್ಧದಲ್ಲಿ ಗೆದ್ದು ನಿಮ್ಮ ಬಿರುದನ್ನು ಸಾರ್ಥಕ ಮಾಡಿಕೊಳ್ಳಿ ಎಂದು ಅರ್ಜುನನು ಭೀಷ್ಮನೊಡನೆ ಯುದ್ಧಮಾಡಲು ಸಿದ್ಧನಾದನು.

ಅರ್ಥ:
ಬಲ: ಶಕ್ತಿ, ಸೈನ್ಯ; ನಾಯಕ: ಒಡೆಯ; ಅನಾಯಕ: ನಾಯಕನಿಲ್ಲದ ಸ್ಥಿತಿ; ವೃಥಾ: ಸುಮ್ಮನೆ; ಹುಲು: ಕ್ಷುಲ್ಲಕ; ದಳ: ಸೈನ್ಯ; ಅಗ್ಗಳಿಕೆ: ಶ್ರೇಷ್ಠ; ಅಳವು: ಶಕ್ತಿ, ಸಾಮರ್ಥ್ಯ; ಮನ: ಮನಸ್ಸು; ಕಲಿ: ಶೂರ; ಬಿಲುಗಾರ: ಬಿಲ್ವಿದ್ಯಾ ಚತುರ; ಬಲಿ: ಗಟ್ಟಿ, ದೃಢ, ಶಕ್ತಿಶಾಲಿ; ಮೆಚ್ಚು: ಪ್ರಶಂಸೆ; ಬಳಿಕ: ನಂತರ; ಹಡೆ: ಸೈನ್ಯ, ದಂಡು; ಬಿರುದು: ಗೌರವ ಸೂಚಕ ಪದ; ಕೈಯಿಕ್ಕು: ಹೋರಾಡು; ಕುಮಾರ: ಮಗ;

ಪದವಿಂಗಡಣೆ:
ಬಲವ್+ಅನಾಯಕವೇ +ವೃಥಾ +ಹುಲು
ದಳದೊಳಗೆ+ ನಿಮ್ಮಗ್ಗಳಿಕೆ+ ಕೈ
ಅಳವ+ ಮನ+ಕಲಿತನದ್+ಅಳವ+ ಬಿಲುಗಾರತನದ್+ಅಳವ
ಬಲಿಯಿರೇ +ನಮ್ಮೊಡನೆ +ಮೆಚ್ಚಿಸಿ
ಬಳಿಕ+ ಹಡೆಯಿರೆ+ ಬಿರುದನ್+ಎನುತವೆ
ಫಲುಗುಣನು +ಕೈಯಿಕ್ಕಿದನು +ಗಂಗಾಕುಮಾರನಲಿ

ಅಚ್ಚರಿ:
(೧) ಅಳವ ಪದದ ಬಳಕೆ – ೩ ಸಾಲಿನಲ್ಲಿ ೩ ಬಾರಿ
(೨) ಭೀಷ್ಮನನ್ನು ಹಂಗಿಸುವ ಪರಿ – ಬಲವನಾಯಕವೇ ವೃಥಾ ಹುಲುದಳದೊಳಗೆ ನಿಮ್ಮಗ್ಗಳಿಕೆ

ಪದ್ಯ ೬೨: ಭೀಷ್ಮನ ಪರಾಕ್ರಮವು ಎಂತಹುದು?

ಹಿಂದೆ ಕರ್ಣನ ಕೈಮೆಯನು ಗುರು
ನಂದನನ ಬಿಲುಗಾರತನವನು
ಮಂದರೋಪಮಧೈರ್ಯನಾಚಾರಿಯನ ಪರಿಣತಿಯ
ಬಂದ ಕೃಪನಗ್ಗಳಿಕೆಯನು ನಲ
ವಿಂದ ಕಂಡೆನಿದಾರ ಪರಿಯ
ಲ್ಲೆಂದನುತ್ತರನರ್ಜುನಗೆ ಗಾಂಗೇಯನುರವಣೆಯ (ವಿರಾಟ ಪರ್ವ, ೯ ಸಂಧಿ, ೬೨ ಪದ್ಯ)

ತಾತ್ಪರ್ಯ:
ಉತ್ತರನು ನುಡಿಯುತ್ತಾ, ಹಿಂದೆ ಕರ್ಣನ ಕೌಶಲ್ಯ, ಅಶ್ವತ್ಥಾಮನ ಬಿಲ್ಲುಗಾರಿಕೆ, ಮಂದರ ಪರ್ವತದಂತೆ ಉನ್ನತಿಯುಳ್ಳ ದ್ರೋಣನ ಚಾಕಚಕ್ರತೆ, ಕೃಪನ ಹಿರಿಮೆಗಳನ್ನು ನಾನು ನೋಡಿದೆ, ಈ ಭೀಷ್ಮನ ಪರಾಕ್ರಮವು ಇವರೆಲ್ಲರನ್ನು ಮೀರಿಸಿದ್ದು ಎಂದು ಉತ್ತರನು ಅರ್ಜುನನಿಗೆ ಹೇಳಿದನು.

ಅರ್ಥ:
ಹಿಂದೆ: ಪೂರ್ವದಲ್ಲಿ; ಕೈಮೆ:ಕೈಚಳಕ; ನಂದನ: ಮಗ; ಗುರು: ಆಚಾರ್ಯ; ಬಿಲುಗಾರ: ಬಿಲ್ವಿದ್ಯೆಯಲ್ಲಿ ಪರಿಣತಿ ಹೊಂದಿದವ; ಮಂದರ: ಬೆಟ್ಟದ ಹೆಸರು; ಉಪಮೆ: ಹೋಲಿಕೆ; ಧೈರ್ಯ: ಎದೆಗಾರಿಕೆ; ಆಚಾರಿ: ಆಚಾರ್ಯ, ಗುರು; ಬಂದ: ಆಗಮಿಸು; ಅಗ್ಗಳಿಕೆ: ಶ್ರೇಷ್ಠತೆ; ನಲವು: ಸಂತೋಷ; ಕಂಡು: ನೋಡು; ಪರಿ: ರೀತಿ; ಉರವಣೆ: ಆತುರ, ಅಬ್ಬರ;

ಪದವಿಂಗಡಣೆ:
ಹಿಂದೆ +ಕರ್ಣನ +ಕೈಮೆಯನು +ಗುರು
ನಂದನನ +ಬಿಲುಗಾರತನವನು
ಮಂದರ+ಉಪಮ+ಧೈರ್ಯನ್+ಆಚಾರಿಯನ +ಪರಿಣತಿಯ
ಬಂದ +ಕೃಪನ್+ಅಗ್ಗಳಿಕೆಯನು +ನಲ
ವಿಂದ +ಕಂಡೆನ್+ಇದಾರ +ಪರಿಯ
ಲ್ಲೆಂದನ್+ಉತ್ತರನ್+ಅರ್ಜುನಗೆ +ಗಾಂಗೇಯನ್+ಉರವಣೆಯ

ಅಚ್ಚರಿ:
(೧)ದ್ರೋಣನ ಧೈರ್ಯವನ್ನು ವಿವರಿಸುವ ಪರಿ – ಮಂದರೋಪಮಧೈರ್ಯನಾಚಾರಿಯನ ಪರಿಣತಿಯ