ಬರವ ಬಿನ್ನಹ ಮಾಡಿ ಪಡಿ
ಹಾರರು ಮುರಾರಿಯ ನೇಮದಲಿ ಚಾ
ರರನು ಹೊಗಿಸಲು ಬಂದು ಹೊಕ್ಕರು ಕೃಷ್ಣನೋಲಗವ
ದರುಶನವ ಮಾಡುತ್ತ ಚರಣಾಂ
ಬುರುಹದಲಿ ಮೈಯಿಕ್ಕಿ ದೇವನ
ಒರೆಯಲಿಳುಹಿದರವರು ಕಳುಹಿದ ಬಿನ್ನವತ್ತಳೆಯ (ವಿರಾಟ ಪರ್ವ, ೧೧ ಸಂಧಿ, ೩೦ ಪದ್ಯ)
ತಾತ್ಪರ್ಯ:
ಕಾವಲಿನವರು ಪಾಂಡವ ದೂತರು ಬಂದ ವಿಷಯವನ್ನು ತಿಳಿಸಿದರು. ಶ್ರೀಕೃಷ್ಣನ ಅಪ್ಪಣೆಯಂತೆ ಅವರನ್ನು ಆಸ್ಥಾನಕ್ಕೆ ಕರೆತಂದರು. ಪಾಂಡವರ ದೂತರು ಶ್ರೀಕೃಷ್ಣನಿಗೆ ನಮಸ್ಕರಿಸಿ ಪಾಂಡವರ ಓಲೆಯನ್ನು ನೀಡಿದರು.
ಅರ್ಥ:
ಬರವ: ಆಗಮಿಸು; ಬಿನ್ನಹ: ಕೋರಿಕೆ; ಪಡಿಹಾರ: ಬಾಗಿಲು ಕಾಯುವವ; ಮುರಾರಿ: ಕೃಷ್ಣ; ನೇಮ: ನಿಯಮ; ಚಾರರು: ದೂತರು; ಹೊಗಿಸು: ಪ್ರವೇಶಕ್ಕೆ ಅನುಮತಿಯನ್ನು ಕೊಡು; ಬಂದು: ಆಗಮಿಸು; ಹೊಕ್ಕು: ಸೇರು; ಓಲಗ: ದರ್ಬಾರು; ದರುಶನ: ನೋಟ; ಚರಣಾಂಬುರುಹ: ಪಾದ ಪದ್ಮ; ಅಂಬುರುಹ: ಕಮಲ; ಮೈಯಿಕ್ಕು: ನಮಸ್ಕರಿಸು; ದೇವ: ಭಗವಂತ; ಹೊರೆ: ರಕ್ಷಣೆ, ಆಶ್ರಯ; ಇಳುಹು: ಕೆಳಕ್ಕೆ ಬಾ; ಬಿನ್ನವತ್ತಳೆ: ಮನವಿ ಪತ್ರ;
ಪದವಿಂಗಡಣೆ:
ಬರವ +ಬಿನ್ನಹ +ಮಾಡಿ +ಪಡಿ
ಹಾರರು +ಮುರಾರಿಯ +ನೇಮದಲಿ +ಚಾ
ರರನು+ ಹೊಗಿಸಲು+ ಬಂದು +ಹೊಕ್ಕರು +ಕೃಷ್ಣನ್+ಓಲಗವ
ದರುಶನವ+ ಮಾಡುತ್ತ+ ಚರಣಾಂ
ಬುರುಹದಲಿ +ಮೈಯಿಕ್ಕಿ +ದೇವನ
ಒರೆಯಲ್+ಇಳುಹಿದರ್+ಅವರು +ಕಳುಹಿದ+ ಬಿನ್ನವತ್ತಳೆಯ
ಅಚ್ಚರಿ:
(೧) ನಮಸ್ಕರಿಸು ಎಂದು ಹೇಳಲು – ಚರಣಾಂಬುರುಹದಲಿ ಮೈಯಿಕ್ಕಿ
(೨) ಪ ವರ್ಗದ ಪದಗಳ ಬಳಕೆ – ಬರವ ಬಿನ್ನಹ ಮಾಡಿ ಪಡಿಹಾರರು ಮುರಾರಿಯ