ಪದ್ಯ ೩೦: ಕೃಷ್ಣನಿಗೆ ದೂತರು ಏನನ್ನು ನೀಡಿದರು?

ಬರವ ಬಿನ್ನಹ ಮಾಡಿ ಪಡಿ
ಹಾರರು ಮುರಾರಿಯ ನೇಮದಲಿ ಚಾ
ರರನು ಹೊಗಿಸಲು ಬಂದು ಹೊಕ್ಕರು ಕೃಷ್ಣನೋಲಗವ
ದರುಶನವ ಮಾಡುತ್ತ ಚರಣಾಂ
ಬುರುಹದಲಿ ಮೈಯಿಕ್ಕಿ ದೇವನ
ಒರೆಯಲಿಳುಹಿದರವರು ಕಳುಹಿದ ಬಿನ್ನವತ್ತಳೆಯ (ವಿರಾಟ ಪರ್ವ, ೧೧ ಸಂಧಿ, ೩೦ ಪದ್ಯ)

ತಾತ್ಪರ್ಯ:
ಕಾವಲಿನವರು ಪಾಂಡವ ದೂತರು ಬಂದ ವಿಷಯವನ್ನು ತಿಳಿಸಿದರು. ಶ್ರೀಕೃಷ್ಣನ ಅಪ್ಪಣೆಯಂತೆ ಅವರನ್ನು ಆಸ್ಥಾನಕ್ಕೆ ಕರೆತಂದರು. ಪಾಂಡವರ ದೂತರು ಶ್ರೀಕೃಷ್ಣನಿಗೆ ನಮಸ್ಕರಿಸಿ ಪಾಂಡವರ ಓಲೆಯನ್ನು ನೀಡಿದರು.

ಅರ್ಥ:
ಬರವ: ಆಗಮಿಸು; ಬಿನ್ನಹ: ಕೋರಿಕೆ; ಪಡಿಹಾರ: ಬಾಗಿಲು ಕಾಯುವವ; ಮುರಾರಿ: ಕೃಷ್ಣ; ನೇಮ: ನಿಯಮ; ಚಾರರು: ದೂತರು; ಹೊಗಿಸು: ಪ್ರವೇಶಕ್ಕೆ ಅನುಮತಿಯನ್ನು ಕೊಡು; ಬಂದು: ಆಗಮಿಸು; ಹೊಕ್ಕು: ಸೇರು; ಓಲಗ: ದರ್ಬಾರು; ದರುಶನ: ನೋಟ; ಚರಣಾಂಬುರುಹ: ಪಾದ ಪದ್ಮ; ಅಂಬುರುಹ: ಕಮಲ; ಮೈಯಿಕ್ಕು: ನಮಸ್ಕರಿಸು; ದೇವ: ಭಗವಂತ; ಹೊರೆ: ರಕ್ಷಣೆ, ಆಶ್ರಯ; ಇಳುಹು: ಕೆಳಕ್ಕೆ ಬಾ; ಬಿನ್ನವತ್ತಳೆ: ಮನವಿ ಪತ್ರ;

ಪದವಿಂಗಡಣೆ:
ಬರವ +ಬಿನ್ನಹ +ಮಾಡಿ +ಪಡಿ
ಹಾರರು +ಮುರಾರಿಯ +ನೇಮದಲಿ +ಚಾ
ರರನು+ ಹೊಗಿಸಲು+ ಬಂದು +ಹೊಕ್ಕರು +ಕೃಷ್ಣನ್+ಓಲಗವ
ದರುಶನವ+ ಮಾಡುತ್ತ+ ಚರಣಾಂ
ಬುರುಹದಲಿ +ಮೈಯಿಕ್ಕಿ +ದೇವನ
ಒರೆಯಲ್+ಇಳುಹಿದರ್+ಅವರು +ಕಳುಹಿದ+ ಬಿನ್ನವತ್ತಳೆಯ

ಅಚ್ಚರಿ:
(೧) ನಮಸ್ಕರಿಸು ಎಂದು ಹೇಳಲು – ಚರಣಾಂಬುರುಹದಲಿ ಮೈಯಿಕ್ಕಿ
(೨) ಪ ವರ್ಗದ ಪದಗಳ ಬಳಕೆ – ಬರವ ಬಿನ್ನಹ ಮಾಡಿ ಪಡಿಹಾರರು ಮುರಾರಿಯ