ಪದ್ಯ ೭: ನಳನು ಪುನಃ ರಾಜನಾದುದು ಹೇಗೆ?

ಬಳಿಕ ಕಾರ್ಕೋಟಕನ ದೆಸೆಯಿಂ
ದಳಿಯೆ ನಿಜ ಋತುಪರ್ಣಭೂಪನ
ನಿಳಯಕೋಲೈಸಿದನು ಬಾಹುಕನೆಂಬ ನಾಮದಲಿ
ಲಲನೆ ತೊಳಲಿದು ಬರುತ ತಮ್ದೆಯ
ನಿಳಯವನು ಸಾರಿದಳು ಬಳಿಕಾ
ನಳಿನಮುಖಿಯಿಂದಾಯ್ತು ನಳಭೂಪತಿಗೆ ನಿಜರಾಜ್ಯ (ಅರಣ್ಯ ಪರ್ವ, ೧೦ ಸಂಧಿ, ೭ ಪದ್ಯ)

ತಾತ್ಪರ್ಯ:
ನಂತರ ನಳನು ಕಾರ್ಕೋಟಕನ ದೆಸೆಯಿಂದ ರೂಪವನ್ನು ಕಳೆದುಕೊಂಡು ಬಾಹುಕನೆಂಬ ಹೆಸರಿನಿಂದ ಋತುಪರ್ಣನ ಸಾರಥಿಯಾದನು. ಬಳಿಕ ದಮಯಂತಿಯು ತನ್ನ ತಂದೆ ಮನೆಗೆ ಹೋದಳು, ಅವಳ ದೆಸೆಯಿಂದ ನಳನು ಮತ್ತೆ ತನ್ನ ರಾಜ್ಯವನ್ನು ಪಡೆದು ರಾಜನಾದನು.

ಅರ್ಥ:
ಬಳಿಕ: ನಂತರ; ದೆಸೆ: ಕಾರಣ; ಅಳಿ: ನಾಶ; ನಿಜ: ತನ್ನ, ದಿಟ; ಭೂಪ: ರಾಜ; ನಿಳಯ: ಆಲಯ; ಓಲೈಸು: ಉಪಚರಿಸು; ನಾಮ: ಹೆಸರು; ಲಲನೆ: ಹುಡುಗಿ; ತೊಳಲು: ಬವಣೆ, ಸಂಕಟ; ಬರುತ: ಆಗಮನ; ತಂದೆ: ಪಿತ; ಸಾರು: ಬಳಿ ಸೇರು, ಹತ್ತಿರಕ್ಕೆ ಬರು; ನಳಿನಮುಖಿ: ಸುಂದರಿ, ಕಮಲದಂತ ಮುಖವುಳ್ಳವಳು; ಭೂಪತಿ: ರಾಜ; ರಾಜ್ಯ: ದೇಶ;

ಪದವಿಂಗಡಣೆ:
ಬಳಿಕ +ಕಾರ್ಕೋಟಕನ +ದೆಸೆಯಿಂದ್
ಅಳಿಯೆ +ನಿಜ+ ಋತುಪರ್ಣ+ಭೂಪನ
ನಿಳಯಕ್+ಓಲೈಸಿದನು +ಬಾಹುಕನೆಂಬ +ನಾಮದಲಿ
ಲಲನೆ +ತೊಳಲಿದು +ಬರುತ+ ತಂದೆಯ
ನಿಳಯವನು +ಸಾರಿದಳು +ಬಳಿಕಾ
ನಳಿನಮುಖಿಯಿಂದ್+ಆಯ್ತು +ನಳ+ಭೂಪತಿಗೆ+ ನಿಜ+ರಾಜ್ಯ

ಅಚ್ಚರಿ:
(೧) ಕಾರ್ಕೋಟಕ, ಋತುಪರ್ಣ, ಬಾಹುಕ, ನಳ, ನಳಿನಮುಖಿ (ದಮಯಂತಿ), ತಂದೆ (ಭೀಮರಾಜ)
(೨) ಲಲನೆ, ನಳಿನಮುಖಿ; ಭೂಪ, ಭೂಪತಿ – ಸಮನಾರ್ಥಕ ಪದಗಳು