ಆದೊಡಾನರ್ಜುನನು ಬಾಣಸಿ
ಯಾದ ವಲಲನು ಭೀಮ ವರಯತಿ
ಯಾದ ಕಂಕನು ಧರ್ಮಪುತ್ರನು ನಿಮ್ಮ ಗೋಕುಲವ
ಕಾದವನು ಸಹದೇವ ರಾವುತ
ನಾದವನು ನಕುಲನು ವಿಳಾಸಿನಿ
ಯಾದವಳು ಸೈರಂಧ್ರಿ ರಾಣೀವಾಸವೆಮಗೆಂದ (ವಿರಾಟ ಪರ್ವ, ೭ ಸಂಧಿ, ೪೫ ಪದ್ಯ)
ತಾತ್ಪರ್ಯ:
ಕೇಳು ಉತ್ತರಕುಮಾರ, ನಾನೇ ಅರ್ಜುನ, ವಲಲನಾಗಿ ಬಾಣಸಿಯಾದವನು ಭೀಮ, ಕಂಕನು ಧರ್ಮಜನು, ಗೋಕುಲವನ್ನು ರಕ್ಷಿಸಿದವನು ಸಹದೇವ, ಕುದುರೆಗಳನ್ನು ಕಾಯುತ್ತಿದ್ದವನು ಸಹದೇವ, ನಮ್ಮ ಪತ್ನಿಯಾದ ದ್ರೌಪದಿ ಸೈರಂಧ್ರಿಯಾಗಿ ದಾಸಿಯಾಗಿದ್ದವಳು ಎಂದು ಪರಿಚಯಿಸಿದನು.
ಅರ್ಥ:
ಬಾಣಸಿ: ಅಡಗೆಯವ; ವರ: ಶ್ರೇಷ್ಠ; ಯತಿ: ಸಂನ್ಯಾಸಿ; ಗೋಕುಲ: ಗೋಸಮೂಹ; ಕಾದವ: ರಕ್ಷಿಸು; ವಿಳಾಸಿನಿ: ಸ್ತ್ರೀ, ದಾಸಿ; ರಾಣಿ: ಅರಸಿ; ರಾವುತ: ಅಶ್ವ;
ಪದವಿಂಗಡಣೆ:
ಆದೊಡ್+ಆನ್+ಅರ್ಜುನನು +ಬಾಣಸಿ
ಯಾದ +ವಲಲನು +ಭೀಮ +ವರ+ಯತಿ
ಯಾದ +ಕಂಕನು+ ಧರ್ಮಪುತ್ರನು +ನಿಮ್ಮ+ ಗೋಕುಲವ
ಕಾದವನು +ಸಹದೇವ +ರಾವುತ
ನಾದವನು +ನಕುಲನು +ವಿಳಾಸಿನಿ
ಯಾದವಳು+ ಸೈರಂಧ್ರಿ +ರಾಣೀವಾಸವ್+ಎಮಗೆಂದ
ಅಚ್ಚರಿ:
(೧) ಕಾದವನು, ಆದವನು – ಪ್ರಾಸ ಪದಗಳು